ರಾಗಿ, ಜೋಳ ಖರೀದಿಗೆ ಕೇಂದ್ರದಿಂದ 902 ಕೋಟಿ ಬಿಡುಗಡೆ: ಶೋಭಾ ಕರಂದ್ಲಾಜೆ
ಬೆಂಗಳೂರು, ಏ.2: ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರಾಗಿ ಹಾಗೂ ಜೋಳ ಖರೀದಿಗೆ ಕೇಂದ್ರ ಸರ್ಕಾರದಿಂದ 902.86 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಕರ್ನಾಟಕ ರಾಜ್ಯದಲ್ಲಿ 2021-22 ನೇ ಆರ್ಥಿಕ ವರ್ಷದಲ್ಲಿ ಒಟ್ಟು 5.02 ಲಕ್ಷ ಮೆಟ್ರಿಕ್ ಟನ್ ರಾಗಿ (4.26 ಲಕ್ಷ ಟನ್) ಮತ್ತು ಜೋಳ (75,302 ಮೆಟ್ರಿಕ್ ಟನ್) ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿಸಿ, ಪಡಿತರ ವಿತರಣಾ ಪದ್ಧತಿಯಡಿ ಫಲಾನುಭವಿಗಳಿಗೆ ವಿತರಿಸಲು ಅನುಮತಿ ನೀಡಿತ್ತು.
2021-22 ರ ಆರ್ಥಿಕ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡಿ, ವಿತರಿಸಿದ ಧಾನ್ಯಗಳ ರಾಜ್ಯದ ಪಾಲಿನ ಬಾಕಿ ಇರುವ ಸಹಾಯ ಧನವನ್ನು ಬಿಡುಗಡೆಗೊಳಿಸುವಂತೆ ಕೋರಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆಯವರು ಇಲಾಖೆಯ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರಿಗೆ ದಿನಾಂಕ 29.03.22 ರಂದು ಪತ್ರವನ್ನು ಬರೆದಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಕೋರಿಕೆಯನ್ನು, ಪರಿಗಣಿಸಿದ ಕೇಂದ್ರ ಸರಕಾರ, ಮಾ.30 ರಂದು ಕರ್ನಾಟಕ ರಾಜ್ಯದ ರಾಗಿ ಹಾಗೂ ಜೋಳ ಖರೀದಿಯ ಬೆಂಬಲ ಬೆಲೆಯ ಬಾಕಿ ಮೊತ್ತ 902.86 ಕೋಟಿ ರೂ.ಗಳನ್ನು ತ್ವರಿತವಾಗಿ ಬಿಡುಗಡೆ ಮಾಡಿ ಆದೇಶಿಸಿದೆ.

ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಚ್.ಡಿ. ದೇವೇಗೌಡ:
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ರಾಜ್ಯಸಭೆಯಲ್ಲಿ ರಾಗಿ ಮತ್ತು ಮೆಕ್ಕೆ ಜೋಳದ ವಿಷಯವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಗಮನ ಸೆಳೆದರು
'ನನ್ನ ಕ್ಷೇತ್ರದಲ್ಲಿ ಸುಮಾರು 7 ಲಕ್ಷ ಟನ್ ನಷ್ಟು ರಾಗಿ ಬೆಳೆದಿದ್ದಾರೆ. ಆದರೆ, ಅದನ್ನು ಯಾರು ಕೊಳ್ಳುತ್ತಿಲ್ಲ. ವಿಪರ್ವ್ಯಾಸ ವೆಂದರೆ ಸರ್ಕಾರಗಳು ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲ, ಒಂದು ಕ್ವಿಂಟಲ್ ಕೂಡ ಖರೀದಿಸಿಲ್ಲ. ನಾನು ಬಹಳ ನೊಂದು ಈ ವಿಷಯ ಹೇಳುತ್ತಿದೀನಿ ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದು ದೇವೇಗೌಡ ಹೇಳಿದರು.
ನಮ್ಮ ರಾಜ್ಯದ ಎಲ್ಲ ಕಡೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ದಯವಿಟ್ಟು ಸಂಬಂಧ ಪಟ್ಟ ಮಂತ್ರಿಗಳು ತಕ್ಷಣ ಇದರ ಕಡೆ ಗಮನ ಹರಿಸಬೇಕು. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಅತೀ ಹೆಚ್ಚು ರಾಗಿ ಬೆಳೆಗಾರರಿದ್ದಾರೆ. ಜೊತೆಗೆ ಮೆಕ್ಕೆ ಜೋಳದ ವಿಷಯದಲ್ಲಿ ಕೂಡ ಇದೆ ರೀತಿ ಪರಿಸ್ಥಿತಿ ಇದೆ. ಮಂತ್ರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಿದರೆ ನಾನು ಅವರಿಗೆ ಸದಾ ಅಭಾರಿ ಯಾಗಿರುತ್ತೀನಿ ಎಂದು ದೇವೇಗೌಡರು ಹೇಳಿದ್ದಾರೆ.












Click it and Unblock the Notifications