7th Pay Commission ರಾಜ್ಯ ಸರ್ಕಾರಿ ನೌಕರರಿಗೆ 2 ದಿನದಲ್ಲಿ ಸಿಹಿಸುದ್ದಿ
ಬೆಂಗಳೂರು, ಆಗಸ್ಟ್ 21: ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜುಲೈ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ಅನುಮೋದನೆ ನೀಡಲಾಗಿತ್ತು. ನೌಕರರ ವೇತನ ಮತ್ತು ಪಿಂಚಣಿ ಏರಿಕೆ ಕುರಿತು ಈಗಾಗಲೇ ಹಣಕಾಸು ಇಲಾಖೆ ಮಾಹಿತಿ ನೀಡಿದೆ.
ಎಲ್. ಅತೀಕ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆ ತಮ್ಮ ಆದೇಶದಲ್ಲಿ ದಿನಾಂಕ 01/07/2022ರಲ್ಲಿದ್ದಂತೆ ಮೂಲ ವೇತನ. ದಿನಾಂಕ 01/07/2022ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704ಕ್ಕೆ ಸಂವಾದಿಯಾಗಿ ಲಭ್ಯವಿದ್ದ 31% ತುಟ್ಟಿ ಭತ್ಯೆ. ದಿನಾಂಕ 01/07/2022ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್ಮೆಂಟ್ ಸೌಲಭ್ಯ ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸುವುದು ಎಂದು ತಿಳಿಸಿದ್ದರು.

ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಸರ್ಕಾರಿ ನೌಕರರು ಹೆಚ್ಆರ್ಎಂಎಸ್ನಲ್ಲಿ ಈ ಕುರಿತು ಮಾಹಿತಿಗಳು ಅಪ್ಲೋಡ್ ಆಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದರು. ಈಗ ಸರ್ಕಾರ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದೆ.
ನೌಕರರಿಗೆ ಸಿಹಿಸುದ್ದಿ ಏನು?: ಸದ್ಯ ಸರ್ಕಾರಿ ನೌಕರರ ಸಾಮಾಜಿಕ ಜಾಲತಾಣದ ಗ್ರೂಪ್ಗಳಲ್ಲಿ ಈಗಾಗಲೇ ರಾಜ್ಯ 7ನೇ ವೇತನ ಆಯೋಗದ ಫಿಟ್ಮೆಂಟ್ ಸೌಲಭ್ಯ ಆದೇಶವನ್ನು ಸರ್ಕಾರ ಹೊರಡಿಸಿದೆ. DA & HRA ಹಾಗೂ ಇತರೆ ಭತ್ಯೆಗಳ ಆದೇಶವನ್ನು ಇನ್ನೆರಡು ದಿನಗಳಲ್ಲಿ ಆಗಲಿದೆ. ಈಗಾಗಲೇ ಫಿಟ್ ಮೆಂಟ್ ಮಾಹಿತಿಗಳು HRMS ನಲ್ಲಿ upload ಮಾಡುವ ಕಾರ್ಯ ಆಗಿದೆ ಎಂದು ಮಾಹಿತಿ ನೀಡಲಾಗಿದೆ.
ಕರ್ನಾಟಕ ಸರ್ಕಾರ 7ನೇ ವೇತನ ಆಯೋಗದ ಶಿಫಾರಸು ಅಂಗೀಕಾರ ಮಾಡಿ ಅಧಿಕೃತ ಆದೇಶ ಹೊರಡಿಸಿದಾಗ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಸಂಬಂಧಿತ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪರಿಷ್ಕರಣೆಯ ಶಿಫಾರಸ್ಸು ಮತ್ತು ಪರಿಷ್ಕೃತ ವೇತನ ಹಾಗೂ ಪರಿಷ್ಕೃತ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಲೆಕ್ಕಾಚಾರ ಮಾಡಲು ಶಿಫಾರಸ್ಸು ಮಾಡಲಾದ ಪರಿಷ್ಕೃತ ಸೂತ್ರಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ ಎಂದು ಹೇಳಿತ್ತು.
ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಈಗ ತುಟ್ಟಿಭತ್ಯೆ, ಹೆಚ್ಆರ್ಎ ಕುರಿತು ಸರ್ಕಾರದಿಂದ ಅಧಿಕೃತ ಆದೇಶಗಳು ಪ್ರಕಟವಾಗಬೇಕಿದೆ.
ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ನೀಡಿದ ರಾಜ್ಯ 7ನೇ ವೇತನ ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ಡಿಎ ಹೆಚ್ಚಳದ ಲೆಕ್ಕಾಚಾರದ ಕುರಿತು ಸಹ ಹಲವಾರು ಅಂಶಗಳನ್ನು ಶಿಫಾರಸುಗಳನ್ನು ಮಾಡಿದೆ. 4ನೇ ರಾಜ್ಯ ವೇತನ ಆಯೋಗವು ಅವಲೋಕಿಸಿದಂತೆ ಪ್ರಸ್ತುತ ಇರುವ ಕೇಂದ್ರದ ಬಳಿಕ ರಾಜ್ಯದಲ್ಲಿ ಡಿಎ ಏರಿಸುವ ಪದ್ಧತಿಯು ಉತ್ತಮವಾಗಿದೆ ಹೊಸ ಪದ್ಧತಿಯನ್ನು ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಕಾಲವ್ಯಯವಾಗುವುದಲ್ಲದೇ ಹೆಚ್ಚುವರಿ ಲಾಭ ಅಥವ ಪ್ರಯೋಜನವಿಲ್ಲದಿರುವುದರಿಂದ ಕೇಂದ್ರ ತುಟ್ಟಿ ಭತ್ಯೆ ಸೂತ್ರ ಮತ್ತು ವಿಧಾನವನ್ನು ಮುಂದುವರೆಸಲು ಶಿಫಾರಸು ಮಾಡುತ್ತದೆ ಎಂದು ಹೇಳಿದೆ.












Click it and Unblock the Notifications