ಸಿದ್ದರಾಮಯ್ಯ ಡಿನೋಟಿಫಿಕೇಷನ್ ಮಾಡಿದ್ದು 707 ಎಕರೆ
ಬೆಂಗಳೂರು, ನ.7 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮಾರ್ಗಸೂಚಿಯನ್ನು ಉಂಲ್ಲಘನೆ ಮಾಡಿ, ಅರ್ಕಾವತಿ ಬಡಾವಣೆಯಲ್ಲಿ 707 ಎಕರೆ ಡಿನೋಟಿಫೀಕೇಷನ್ ಮಾಡಿದ್ದಾರೆ ಎಂದು ಬಿಜೆಪಿ ಆಂತರಿಕ ಸತ್ಯಶೋಧನಾ ವರದಿ ಹೇಳಿದೆ. ಪಕ್ಷ ಮುಂದಿನ ಹೋರಾಟದ ಕುರಿತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತಿದೆ.
ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ವಿ.ಸೋಮಣ್ಣನೇತೃತ್ವದ ಬಿಜೆಪಿಯ ಸತ್ಯಶೋಧನಾ ಸಮಿತಿ ಮೂರು ತಿಂಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ ಗುರುವಾರ ತನ್ನ ಮಧ್ಯಂತರ ವರದಿಯನ್ನು ಪಕ್ಷಕ್ಕೆ ಸಲ್ಲಿಸಿದೆ. ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ವರದಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ಸಲ್ಲಿಕೆ ಮಾಡಲಾಗಿದೆ. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]

ವರದಿಯಲ್ಲೇನಿದೆ : 2004ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರ 1089 ಎಕರೆಯನ್ನು ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್ ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೋಕಸಭಾ ಚುನಾವಣೆ ವೇಳೆ 707 ಎಕರೆಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದೆ.
ಆದರೆ, ಈ ಡಿನೋಟಿಫಿಕೇಷನ್ನಲ್ಲಿ ಮುಖ್ಯಮಂತ್ರಿ, ಅವರ ಆಪ್ತರು ಅಥವಾ ಪ್ರಭಾವಿಗಳ ಪಾತ್ರ ಇರುವುದೂ ಪತ್ತೆಯಾಗಿಲ್ಲ. 707 ಎಕರೆ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂಬುದನ್ನು ಮಾತ್ರ 295 ಪುಟಗಳ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಅಕ್ರಮ ಡಿನೋಟಿಫಿಕೇಷನ್ನಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಷ್ಟ ಉಂಟಾಗಿದೆ. ಈ ಭೂಮಿಯಲ್ಲಿ 14 ಸಾವಿರ ನಿವೇಶನಗಳನ್ನು ಮಾಡಿ ತಲಾ 25 ಲಕ್ಷ ರೂ.ಗಳಂತೆ ಹಂಚಿಕೆ ಮಾಡಿದ್ದರೂ ಸುಮಾರು 3,500 ಕೋಟಿ ರೂ. ಆದಾಯ ಬರುತ್ತಿತ್ತು ಎಂದು ವರದಿ ಹೇಳಿದೆ.
ಕಾನೂನು ತಜ್ಞರ ಜೊತೆ ಚರ್ಚೆ : ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಕುರಿತ ಹೋರಾಟವನ್ನು ಮುಂದುವರೆಸುವ ಬಗ್ಗೆ ಬಿಜೆಪಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದೆ. ಇನ್ನಷ್ಟು ಮಾಹಿತಿ ಕಲೆಹಾಕಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.











Click it and Unblock the Notifications