ಕರ್ನಾಟಕ: ಮೊದಲ ದಿನವೇ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲೆ ಹಾಜರಾತಿ!
ಬೆಂಗಳೂರು, ಡಿಸೆಂಬರ್.02: ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಕಾಲೇಜುಗಳು ಪುನಾರಂಭವಾದ ಮೊದಲ ದಿನವೇ ಶೇ.60ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ 9 ತಿಂಗಳ ನಂತರ ಡಿಸೆಂಬರ್.01ರಿಂದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಪುನಾರಂಭಕ್ಕೆ ಆದೇಶಿಸಲಾಗಿತ್ತು. ಮಂಗಳವಾರ ಪುನಾರಂಭಗೊಂಡ ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಮೊದಲ ದಿನವೇ ಶೇ.60ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಮಂಗಳವಾರ ಕಾಲೇಜು ಓಪನ್; ಕೋವಿಡ್ ಪರೀಕ್ಷೆ, ಸ್ಯಾನಿಟೈಸ್
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಹಿನ್ನೆಲೆ ಪ್ರಾಯೋಗಿಕ ತರಗತಿಗಳ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವೈದ್ಯಕೀಯ ತರಗತಿಗಳು ಆಗಿರುವುದರಿಂದ ವಿದ್ಯಾರ್ಥಿಗಳು ಹಾಜರಾಗಲೇ ಬೇಕಾಗುತ್ತದೆ ಎಂದು ರಾಜೀವ್ ಗಾಂಧಿ ವೈದ್ಯಕೀಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಸಚ್ಚಿದಾನಂದ ತಿಳಿಸಿದ್ದಾರೆ.
ಎರಡು ತಿಂಗಳಿನಲ್ಲಿ ವೈದ್ಯಕೀಯ ಪರೀಕ್ಷೆ
ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಲೇಬೇಕಾಗುತ್ತದೆ. ಮುಂದಿನ ಎರಡು ತಿಂಗಳಿನಲ್ಲಿ ಅಂದರೆ ಫೆಬ್ರವರಿಯಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ದಿನಾಂಕ ನಿಗದಿಗೊಳಿಸಲಾಗುತ್ತದೆ. ಈ ಹಿನ್ನೆಲೆ ಎಲ್ಲ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲಿದ್ದು, ಇನ್ನು ಕೆಲವರು ತಮ್ಮ ಕೊವಿಡ್-19 ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ಕೊರೊನಾವೈರಸ್ ನೆಗೆಟಿವ್ ವರದಿ ಮತ್ತು ಪ್ರಯಾಣದ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ. ದಂಡ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಕಡಿಮೆಯಾಗಿದ್ದು, ಇತ್ತೀಚಿಗಷ್ಟೇ ಪರೀಕ್ಷೆ ಮುಗಿದಿವೆ. ಫಾರ್ಮಾ ಮತ್ತು ನರ್ಸಿಂಗ್ ಪರೀಕ್ಷೆಗಳು ನಡೆಯುತ್ತಿದೆ ಎಂದು ಕುಲಪತಿ ಡಾ. ಎಸ್.ಸಚ್ಚಿದಾನಂದ ಹೇಳಿದ್ದಾರೆ.
ಡೆಂಟಲ್ ಕಾಲೇಜುಗಳಲ್ಲಿ ಶೇ.50ರಷ್ಟು ಹಾಜರಾತಿ
ರಾಜೀವ್ ಗಾಂಧಿ ವೈದ್ಯಕೀಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ದಂಡ ವೈದ್ಯಕೀಯ ಕಾಲೇಜು ಮತ್ತು ಇತರೆ ಅಂಗಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣವು ಶೇ.50ರಷ್ಟಿದೆ. ಸೈದ್ಧಾಂತಿಕ ಕಲಿಕೆ ಪ್ರಕಾರ ಮತ್ತು ಪ್ರಾಯೋಗಿಕ ಕಲಿಕೆ ಪ್ರಕಾರಗಳಿದ್ದು, ಈ ಪೈಕಿ ಪ್ರಾಯೋಗಿಕ ತರಗತಿಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕಾಗಿದೆ. ಕಾಲೇಜುಗಳಲ್ಲಿ ಕೊರೊನಾವೈರಸ್ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಶಿಫಾರಸ್ಸು ಪಾಲನೆ ಕುರಿತು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಕುಲಪತಿ ಡಾ. ಎಸ್.ಸಚ್ಚಿದಾನಂದ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಅತ್ಯಗತ್ಯ
ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜುಗಳು ಪುನಾರಂಭಗೊಂಡ ಮೊದಲ ದಿನವೇ ಕೆಂಪೇಗೌಡ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿಗೆ ಶೇ.72ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ವಿ.ಟಿ. ವೆಂಕಟೇಶ್ ತಿಳಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದಲ್ಲಿ ತೊಡಗುವ ಹೊರತಾಗಿ ಬೇರೆ ಮಾರ್ಗವೇ ಇಲ್ಲ. ಪ್ರಾಯೋಗಿಕ ಮತ್ತು ಸಿದ್ಧಾಂತಿಕ ತರಗತಿಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಕಾಲೇಜಿನಲ್ಲಿ ಶೇ.90ರಷ್ಟು ಹಾಜರು
ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಭೇಟಿ ನೀಡಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮೊದಲ ದಿನವೇ ಶೇ.90ರಷ್ಟು ಹಾಜರಾತಿ ಕಂಡು ಬಂದಿದೆ. ಆದರೆ ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ಶೇ.45ರಷ್ಟು ಹಾಜರಾತಿ ಕಂಡು ಬಂದಿದೆ. ಕೆಲವು ಬೇರೆ ಕೋರ್ಸ್ ಗಳಿಗೆ ಸಂಬಂಧಿಸಿದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣವು ಕಡಿಮೆಯಾಗಿದೆ. ಇನ್ನು, ಕೆಲವು ವಿದ್ಯಾರ್ಥಿಗಳು ವಿದೇಶಗಳಿಂದ ಆಗಮಿಸಬೇಕಾಗಿದ್ದು, ವಿಮಾನಗಳ ಕೊರತೆ ಸೇರಿದಂತೆ ಪ್ರಯಾಣದ ಸಮಸ್ಯೆಯಿಂದಾಗಿ ಕಾಲೇಜುಗಳಿಗೆ ಹಾಜರಾಗುವುದಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಕಾಲೇಜುಗಳಲ್ಲಿ ಕೊರೊನಾವೈರಸ್ ಶಿಷ್ಟಾಚಾರ ಪಾಲನೆ
ರಾಜ್ಯದಲ್ಲಿನ ದಂತ ವೈದ್ಯಕೀಯ, ಆಯುಷ್, ಅರೆ ವೈದ್ಯಕೀಯ, ನರ್ಸಿಂಗ್ ಮತ್ತು ಫಾರ್ಮಸಿ ಕಾಲೇಜುಗಳನ್ನು 9 ತಿಂಗಳ ನಂತರ ಪುನಾರಂಭಗೊಳಿಸಲು ಅನುಮತಿ ನೀಡಲಾಗಿತ್ತು. ಕೊವಿಡ್-19 ಮಾರ್ಗಸೂಚಿಗಳ ಅಡಿಯಲ್ಲಿ ಪ್ರತಿನಿತ್ಯದ ತರಗತಿ ಮತ್ತು ತರಬೇತಿ ನೀಡುವುದಕ್ಕೆ ಸೂಚಿಸಲಾಗಿದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲ ರೀತಿಯ ಕೊವಿಡ್-19 ಶಿಷ್ಟಾಚಾರ ಪಾಲನೆಗೆ ಸೂಚಿಸಲಾಗಿದೆ.