Prashanth Madal : ಪ್ರಶಾಂತ್ ಮಾಡಾಳ್ ಮನೆಯಲ್ಲಿ 6 ಕೋಟಿ ಹಣ ಪತ್ತೆ!
40 ಲಕ್ಷ ಲಂಚ ಪಡೆಯುವಾಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು. ಗುರುವಾರ ರಾತ್ರಿ ಅವರ ಮನೆಯಲ್ಲಿ 6 ಕೋಟಿ ಹಣ ಪತ್ತೆಯಾಗಿದೆ.
ಬೆಂಗಳೂರು, ಮಾರ್ಚ್ 03; ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆ ಇಲ್ಲದ 6 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ಗುರುವಾರ ಲೋಕಾಯುಕ್ತರು ದಾಳಿ ನಡೆಸಿದ್ದರು. ಶುಕ್ರವಾರ ನ್ಯಾಯಾಲಯಕ್ಕೆ ಪ್ರಶಾಂತ್ ಮಾಡಾಳ್ ಹಾಜರುಪಡಿಸಲಾಗುತ್ತದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ಟೆಂಡರ್ಗೆ ಪ್ರಶಾಂತ್ ಮಾಡಾಳ್ 80 ಲಕ್ಷ ರೂ. ಲಂಚ ಕೇಳಿದ್ದರು ಎಂಬುದು ಆರೋಪ. ಗುರುವಾರ ಸಂಜೆ 40 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ಹಣದ ಜೊತೆ ಪ್ರಶಾಂತ್ ಮಾಡಾಳ್ ಮತ್ತು ಹಣ ನೀಡಲು ಬಂದಿದ್ದ ನಿಕಲೋಸ್, ಗಂಗಾಧರ್ ಎಂಬುವವರನ್ನು ಬಂಧಿಸಿದ್ದರು. ಪ್ರಶಾಂತ್ ಮಾಡಾಳ್ ರಾಜ್ಯ ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕರು, ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿಯೂ ಆಗಿದ್ದಾರೆ.

ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್ಡಿಎಲ್ ಅಧ್ಯಕ್ಷರು. ಗುರುವಾರ ಸಂಜೆ ಹಣ ಪಡೆಯುತ್ತಿದ್ದಾಗ ಪ್ರಶಾಂತ್ ಮಾಡಾಳ್ರನ್ನು ಶಾಸಕರ ಖಾಸಗಿ ಕಚೇರಿಯಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮಾಡಾಳ್ ಸಂಬಂಧಿ ಸಿದ್ದೇಶ್, ಅಕೌಟೆಂಟ್ ಸುರೇಂದ್ರ ಸಹ ಬಂಧಿಸಲಾಗಿದೆ. ಲೋಕಾಯುಕ್ತ ಪೊಲೀಸರು ಶುಕ್ರವಾರ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆ ಸಹ ನಡೆಸುವ ಸಾಧ್ಯತೆ ಇದೆ.
6 ಕೋಟಿ ನಗದು ಪತ್ತೆ; ಶಾಸಕರ ಖಾಸಗಿ ಕಚೇರಿಯಲ್ಲಿನ ದಾಳಿ ಬಳಿಕ ಲೋಕಾಯುಕ್ತ ಪೊಲೀಸರು ಡಾಲರ್ಸ್ ಕಾಲೋನಿಯ ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ದಾಖಲೆ ಇಲ್ಲದ 6 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿನ ಮಾಡಾಳ್ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್ಗಳಲ್ಲಿ ಹಣ ಪತ್ತೆಯಾಗಿತ್ತು.

ಲೋಕಾಯುಕ್ತ ಪೊಲೀಸರು ಬಂಧಿಸಿರುವ ಪ್ರಶಾಂತ್ ಮಾಡಾಳ್, ಹಣ ನೀಡಲು ಬಂದಿದ್ದ ನಿಕಲೋಸ್, ಗಂಗಾಧರ್, ಸಿದ್ದೇಶ್, ಅಕೌಟೆಂಟ್ ಸುರೇಂದ್ರರನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸು ಸಾಧ್ಯತೆ ಇದೆ. ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದ್ದಾರೆ. ಬಿಜೆಪಿ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ಚುನಾವಣಾ ಸಮಯದಲ್ಲಿ ಅಸ್ತ್ರವಾಗಿದೆ.
ಇಲಾಖೆಯಲ್ಲಿ ಹಸ್ತಕ್ಷೇಪ; ಪ್ರಶಾಂತ್ ಮಾಡಾಳ್ ತಂದೆ ಅಧ್ಯಕ್ಷರಾಗಿರುವ ಕೆಎಸ್ಡಿಎಲ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ರಾಸಾಯನಿಕ ಸರಬರಾಜು ವೇಳಾಪಟ್ಟಿ, ಕಾರ್ಯಾದೇಶ ವಿತರಣೆ ಮಾಡಲು 80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುರುವಾರ 40 ಲಕ್ಷ ರೂ. ಸ್ವೀಕಾರ ಮಾಡುವಾಗ ಲೋಕಾಯುಕ್ತರು ದಾಳಿ ಮಾಡಿದ್ದರು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸಹ ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡದಂತೆ ತಡೆ ಹಿಡಿದಿದ್ದರು ಎಂಬುದು ಆರೋಪವಾಗಿದೆ.
ಕ್ರೆಸೆಂಟ್ ರಸ್ತೆಯಲ್ಲಿನ ಖಾಸಗಿ ಕಚೇರಿಯಲ್ಲಿ ಗುರುವಾರ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಲೋಕಾಯುಕ್ತ ಬೆಂಗಳೂರು ಘಟಕದ ಎಸ್ಪಿ ಕೆ. ವಿ. ಅಶೋಕ್ ನೇತೃತ್ವದಲ್ಲಿ ಸುಮಾರು 9 ಗಂಟೆಗಳ ಕಾಲ ಈ ಪ್ರಕರಣದ ವಿಚಾರಣೆ ನಡೆದಿದೆ. ಪ್ರಶಾಂತ್ ಮಾಡಾಳ್ ಕೋರ್ಟ್ಗೆ ಹಾಜರುಪಡಿಸಿದ ಬಳಿಕ ಮುಂದಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಪ್ರಶಾಂತ್ ಮಾಡಾಳ್ 80 ಲಕ್ಷ ರೂ. ಲಂಚ ಕೇಳಿರುವ ಕುರಿತು ಗುತ್ತಿಗೆದಾರರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಗುರುವಾರ ಬೆಳಗ್ಗೆ ದೂರು ಆಧರಿಸಿ ಎಫ್ಐಆರ್ ದಾಖಲಾಗಿತ್ತು. ಸಂಜೆ ಈ ಎಫ್ಐಆರ್ ಆಧರಿಸಿ ಕಾರ್ಯಾಚರಣೆ ನಡೆಸಿದ್ದು, 40 ಲಕ್ಷ ರೂ. ಪಡೆಯುವಾಗ ಬಂಧಿಸಲಾಗಿದೆ.












Click it and Unblock the Notifications