ಕೆಎಸ್ಆರ್ಟಿಸಿ ಬಸ್ನಲ್ಲಿ ಊರಿಗೆ ಹೋದ 59 ಸಾವಿರ ವಲಸೆ ಕಾರ್ಮಿಕರು
ಬೆಂಗಳೂರು, ಮೇ 05 : ಲಾಕ್ ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಬೆಂಗಳೂರು ನಗರದಿಂದ ಸೋಮವಾರ ಒಟ್ಟು 500 ಬಸ್ಗಳು ಸಂಚಾರ ನಡೆಸಿವೆ.
ಮಂಗಳವಾರದ ತನಕ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಆಗಲು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಗುರುವಾರದ ತನಕ ಅದನ್ನು ವಿಸ್ತರಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಸೋಮವಾರ ಒಂದೇ ದಿನ ಬೆಂಗಳೂರು ನಗರದಿಂದ 800 ಹಾಗೂ ರಾಜ್ಯದ ಇತರೆ ಭಾಗಗಳಿಂದ 200 ಬಸ್ ಸೇರಿದಂತೆ ಒಂದು ಸಾವಿರ ಬಸ್ಗಳು ಸಂಚಾರ ನಡೆಸಿದ್ದು, ಒಟ್ಟು 30,000 ಕಾರ್ಮಿಕರು ಒಂದೇ ದಿನ ಪ್ರಯಾಣ ಬೆಳೆಸಿದ್ದಾರೆ.
ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಸ್ಗಳು ಸಂಚಾರ ನಡೆಸಲಿವೆ. ವಿವಿಧ ಸ್ಥಳಗಳಿಗೆ ಹೋಗುವ ಕಾರ್ಮಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕೆಎಸ್ಆರ್ಟಿಸಿ ಕರೆ ನೀಡಿದೆ.

951 ಬಸ್ಗಳ ಸಂಚಾರ
ಕರ್ನಾಟಕ ಸರ್ಕಾರ ವಲಸೆ ಕಾರ್ಮಿಕರ ಸಂಚಾರಕ್ಕಾಗಿ ಭಾನುವಾರದಿಂದ ಕೆಎಸ್ಆರ್ಟಿಸಿ ಬಸ್ ಓಡಿಸುತ್ತಿದೆ. ಮೊದಲ ದಿನ 951 ಬಸ್ ಸಂಚಾರ ನಡೆಸಿದ್ದು ಸುಮಾರು 30 ಸಾವಿರ ಜನರು ಪ್ರಯಾಣ ಮಾಡಿದ್ದಾರೆ. ಸೋಮವಾರ ಬೆಂಗಳೂರು ನಗರದಿಂದ 800 ಮತ್ತು ರಾಜ್ಯದ ಇತರೆ ಭಾಗಗಳಿಂದ 200 ಬಸ್ ಓಡಿಸಲಾಗಿದೆ.

ರಾತ್ರಿಯೂ ಸಂಚಾರ ನಡೆಸಿದ ಬಸ್
ಭಾನುವಾರ ಮತ್ತು ಸೋಮವಾರ ಸಂಜೆ 6 ಗಂಟೆಯವರೆಗೆ ಮಾತ್ರ ಬಸ್ ಸಂಚಾರ ಎಂದು ತಿಳಿಸಲಾಗಿತ್ತು. ಆದರೆ, ಬಸ್ ನಿಲ್ದಾಣಕ್ಕೆ ಬಂದಿರುವ ಕಾರ್ಮಿಕರಿಗೆ ಅನುಕೂಲವಾಲಿ ಎಂಬ ಕಾರಣಕ್ಕೆ ರಾತ್ರಿ 11 ಗಂಟೆಯವರೆಗೆ ಸಹ ಬಸ್ ಸಂಚಾರ ನಡೆಸಲಾಗಿದೆ. ಕೊನೆಯ ಬಸ್ ಗಂಗಾವತಿಗೆ ರಾತ್ರಿ 11.10 ಕ್ಕೆ ಬೆಂಗಳೂರಿನಿಂದ ಹೊರಟಿತು.

ಹುಬ್ಬಳ್ಳಿಯಿಂದ 198 ಬಸ್
ಹುಬ್ಬಳ್ಳಿ ಬಸ್ ನಿಲ್ದಾಣದಿಂದಲೂ ಉಚಿತ ಬಸ್ ಸೇವೆ ಆರಂಭಿಸಲಾಗಿದೆ. ಧಾರವಾಡ ಜಿಲ್ಲಾಡಳಿತ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಿದೆ. ಸೋಮವಾರ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಯವರೆಗೆ ಒಟ್ಟು 7 ಬಸ್ಗಳಲ್ಲಿ198 ಜನರು ತಮ್ಮ ಊರುಗಳಿಗೆ ಮರಳಿದರು. ಬೆಂಗಳೂರು, ಕಲಬುರಗಿ, ಬೀದರ್, ಅಫಜಲಪುರ, ಮಂಗಳೂರು, ರಾಯಚೂರು ಮಾರ್ಗಗಳಲ್ಲಿ ಬಸ್ಗಳು ಸಂಚಾರ ನಡೆಸಿವೆ.

ಆರೋಗ್ಯ ತಪಾಸಣೆ ಕಡ್ಡಾಯ
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಬಸ್ ನಿಲ್ದಾಣದಿಂದ ಹೊರಡುವುದಕ್ಕೆ ಮೊದಲು ಮತ್ತು ನಿಗದಿತ ನಿಲ್ದಾಣ ತಲುಪಿದ ಕೂಡಲೇ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತದೆ. ಕಾರ್ಮಿಕರಿಂದ ಕೊರೊನಾ ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.












Click it and Unblock the Notifications