ಪಂಚ ರಾಜ್ಯಗಳ ಫಲಿತಾಂಶ : ಕರ್ನಾಟಕದ ನಾಯಕರು ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 11 : ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಶಕ್ತಿ ಹೆಚ್ಚಿದೆ. ಬಿಜೆಪಿಯ ತಂತ್ರಗಳೆಲ್ಲವೂ ಕೈ ಕೊಟ್ಟಿದ್ದು, ಆಡಳಿತಾರೂಢ ರಾಜ್ಯಗಳಲ್ಲಿಯೇ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದೆ.
ಕರ್ನಾಟಕದ ವಿವಿಧ ಪಕ್ಷಗಳ ನಾಯಕರು ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕಾಂಗ್ರೆಸ್ ಗೆಲುವು ಸಾಧಿಸಿರುವುದರಿಂದ ರಾಜ್ಯದ ಮೈತ್ರಿ ಸರ್ಕಾರ ಭದ್ರವಾಗಿದೆ.
ಸೋಲಿನ ಬಗ್ಗೆ ಪಕ್ಷದ ವೇದಿಕೆಗಳಲ್ಲಿ ಚರ್ಚೆ ನಡೆಯಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಶ್ರಮ, ಸಾಮೂಹಿಕ ನಾಯಕತ್ವದಿಂದ ಗೆಲುವು ಸಿಕ್ಕಿದೆ ಎಂದು ಹೇಳಿದ್ದಾರೆ. ಪಂಚ ರಾಜ್ಯಗಳ ಫಲಿತಾಂಶದ ಬಗ್ಗೆ ಕರ್ನಾಟಕದ ನಾಯಕರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.......
|
ಪ್ರಚಾರದ ಗಾಳಿಪಟ ನೆಲಕ್ಕುರುಳುತ್ತಿವೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಬದಲಾಣವೆಯ ಗಾಳಿ ಬೀಸುತ್ತಿದೆ. ಪ್ರಚಾರದ ಗಾಳಿಪಟ ನೆಲಕ್ಕುರುಳುತ್ತಿವೆ ಎಂದು ಲೇವಡಿ ಮಾಡಿದ್ದಾರೆ.

ಬಡಿದಾಡಿ ಗೆದ್ದಿದ್ದಾರೆ
'ಐದು ರಾಜ್ಯ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದರು. ದೇಶದ 22 ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಒಂದು ಮನೆಯನ್ನು ಕಾಂಗ್ರೆಸ್ ಬಡಿದಾಡಿ ತೆಗೆದುಕೊಂಡಿದ್ದಾರೆ. ಇದರಿಂದ 108 ಮನೆಗಳಲ್ಲಿ ಒಂದು ಮನೆ ಪಡೆದಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
|
ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಪ್ರಜೆಗಳು ಹೇಳಿದಂತೆ ಕೇಳಬೇಕು. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.

ಬಿಜೆಪಿಗೆ ಹಿನ್ನಡೆ ಆಗಿದೆ
'ನಾಯಕತ್ವದಿಂದ ಮತ್ತು ಸಂಘಟನೆಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಎರಡೂ ಒಟ್ಟಾಗಿ ಸಾಗಿದಾಗ ಮಾತ್ರ ಗೆಲುವು ಸಿಗಲಿದೆ. ಮೋದಿ-ಅಮಿತ್ ಶಾ ಅವರಿಗೆ ಹಿನ್ನಡೆ ಆಗಿದೆ ಎಂದು ನಾನು ಹೇಳುವುದಿಲ್ಲ. ಚುನಾವಣೆ ಬಂದಾಗ ಎಲ್ಲರೂ ಒಟ್ಟಾಗಿ ಹೋಗಬೇಕು. ಸೋಲಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ' ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿಯಿಂದ ದೇಶಕ್ಕೆ ಅಘಾತ
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಬಿಜೆಪಿಯಿಂದ ದೇಶಕ್ಕೆ ದೊಡ್ಡ ಅಘಾತವಿದೆ ಎಂಬುದನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಒಳ್ಳೆಯ ಭವಿಷ್ಯವಿದೆ ಎಂದು ದೇಶದ ಜನರು ಆಪೇಕ್ಷೆಪಟ್ಟಿದ್ದಾರೆ. ಬಿಜೆಪಿ ಸರ್ಕಾರದಿಂದ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ' ಎಂದು ಹೇಳಿದ್ದಾರೆ.

ಇದೇ ಭೂಕಂಪ ಇರಬೇಕು
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಈ ಚುನಾವಣೆ ದೇಶದ ರಾಜಕಾರಣಕ್ಕೆ ದಿಕ್ಸೂಚಿಯಾಗಿದೆ. ನನ್ನ ಪ್ರಕಾರ ಪ್ರಕಾಶ್ ಜಾವಡೇಕರ್ ಅವರು ಹೇಳಿದ ಭೂಕಂಪ ಇದೇ ಇರಬೇಕು. ಐದು ರಾಜ್ಯದ ಫಲಿತಾಂಶ ಎಲ್ಲರಿಗೂ ಗೊತ್ತಾಗಿದೆ. ಪ್ರಧಾನಿಗಳು ಮತ್ತೆ ಐದು ವರ್ಷ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಈಗ ಅವರಿಗೆ ಏನು ಎಂಬುದು ತಿಳಿಯುತ್ತಿದೆ' ಎಂದು ಹೇಳಿದ್ದಾರೆ.

ಜನರ ಆದೇಶ ಪಾಲಿಸಬೇಕು
'ಜನರ ಆದೇಶವನ್ನು ನಾವು ಪಾಲಿಸಬೇಕು. ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿಗೆ ಹೀನಾಯ ಸೋಲು ಆಗಿಲ್ಲ. ಕಾಂಗ್ರೆಸ್ ನವರಿಗೆ ಅಭದ್ರತೆ ಕಾಡುತ್ತಿದೆ. ಎರಡು ರಾಜ್ಯದಲ್ಲಿ ಗೆದ್ದಿದ್ದಾರೆ ಎಂದರೆ ದೇಶ ಗೆದ್ದಂತಲ್ಲ. ಡಿ.ಕೆ.ಶಿವಕುಮಾರ್ ತೆಲಂಗಾಣಕ್ಕೆ ಹೋಗಿದ್ದರು. ಅಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ ಎಂದು' ಆರ್.ಅಶೋಕ್ ಲೇವಡಿ ಮಾಡಿದರು.

ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಒಂದುಗೂಡಿಸಿದೆ
'ಕಾಂಗ್ರೆಸ್ ಹಿದೂಗಳನ್ನು ವಿಭಜಿಸಿ ಅಲ್ಪ ಸಂಖ್ಯಾತರನ್ನು ಒಟ್ಟು ಮಾಡುವ ತಂತ್ರದಲ್ಲಿ ಯಶಸ್ವಿಯಾಗಿದೆ. ವಿಭಜನೆಯ ತಂತ್ರಕ್ಕೆ ಹಿಂದೂ ಮುಖವಾಡವನ್ನು ಕಾಂಗ್ರೆಸ್ ಧರಿಸಿತ್ತು. ತಾನು ಕೂಡಾ ಹಿಂದುತ್ವದ ಪ್ರತಿಪಾದಕ ಎಂದು ತೋರಿಸಿಕೊಳ್ಳುವ ಮೂಲಕ ತನ್ನನ್ನು ತಾನು ಗೋತ್ರದಲ್ಲಿ ಗುರುತಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮಾಡಿದ್ದರು. ಜನ ಏನು ಕೊಟ್ಟಿದ್ದಾರೋ ಅದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ' ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.












Click it and Unblock the Notifications