40 ಪರ್ಸೆಂಟ್ ಕಮೀಷನ್ ದಂಧೆ: ಈ ಪ್ರಶ್ನೆಗಳಿಗೆ ಉತ್ತರಿಸುವಿರಾ ಮಿನಿಸ್ಟರ್ ಈಶ್ವರಪ್ಪನವರೇ?
ಬೆಂಗಳೂರು, ಮಾ. 29: ಜನ ಪ್ರತಿನಿಧಿಗಳು ಮಾಡುವ ತಪ್ಪನ್ನು ಪ್ರಶ್ನಿಸುವುದೇ ಮಹಾ ಅಪರಾಧವೇ? ಒಬ್ಬ ಗುತ್ತಿಗೆದಾರ ಮಾಡಿಸಿದ ಕೆಲಸಕ್ಕೆ ಬಿಲ್ ಕೇಳುವುದೇ ತಪ್ಪಾ? ಕಮೀಷನ್ ದಂಧೆ ಬಗ್ಗೆ ಮಾತನಾಡುವುದೇ ತಪ್ಪೇ? ದೂರು ಸಲ್ಲಿಸಿದ ಗುತ್ತಿಗೆದಾರನ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸುವುದು ಎಷ್ಟು ಸರಿ? ಒಬ್ಬ ಜನ ಪ್ರತಿನಿಧಿಯಾಗಿ ಕೆ.ಎಸ್. ಈಶ್ವರಪ್ಪ ಅವರ ಮೇಲಿರುವ ಆರೋಪ ಸಂಬಂಧ ನೀಡಿರುವ ದೂರನ್ನು ಎದುರಿಸುವ ಬದಲಿಗೆ ದೂರುದಾರನನ್ನೇ ಹೆದರಿಸುವ ಭಾಗವಾಗಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದರೆ?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ಕಮೀಷನ್ ಸಂಸ್ಕೃತಿ ಬಗ್ಗೆ ಬೆಳಗಾವಿ ಜಿಲ್ಲೆಯ ಹಿಂದೂ ವಾಹಿನಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಕೆ. ಪಾಟೀಲ್ ಎಂಬುವರು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್ ಪಾವತಿ ಕುರಿತು ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ನಾನೊಬ್ಬ ಸಿವಿಲ್ ಗುತ್ತಿಗೆದಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಮೋದಿತ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ. ಸುಮಾರು 4 ಕೋಟಿ ರೂ. ಮೊತ್ತದ ಬಿಲ್ ಪಾವತಿಯಾಗಬೇಕಿದ್ದು, 2021 ಫೆ. 12 ಕ್ಕೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಆದರೆ ಈವರೆಗೂ ವರ್ಕ್ ಆರ್ಡರ್ ಸಿಕ್ಕಿಲ್ಲ. ಒಂದು ರೂಪಾಯಿ ಬಿಲ್ ಪಾವತಿ ಮಾಡಿಲ್ಲ. ನಾನು ಬಡ್ಡಿಗೆ ಸಾಲ ಮಾಡಿ ಗುತ್ತಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನನಗೆ ನ್ಯಾಯ ಒದಗಿಸಿಕೊಡಿ. ಈ ಬಗ್ಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ನಿರ್ದೇಶನ ನೀಡುವಂತೆಯೂ ದೂರಿನಲ್ಲಿ ತಿಳಿಸಿದ್ದಾರೆ.

ಈಶ್ವರಪ್ಪ ಅವರ ಬಗ್ಗೆ ಸಂತೋಷ್ ಪಾಟೀಲ್ ಮಾಡಿರುವ ಆರೋಪದ ವಿಚಾರಕ್ಕೆ ಬಂದರೆ, ಸಚಿವರ ಸಹಚರರು ನಾನು ಮುಗಿಸಿರುವ ಕಾಮಗಾರಿಗಳಿಗೆ ಕಮೀಷನ್ ಕೊಡುವಂತೆ ಬೇಡಿಕೆ ಇಟ್ಟಿರುತ್ತಾರೆ. ಇದರಿಂದ ನಾನು ಒತ್ತಡಕ್ಕೆ ಒಳಗಾಗಿದ್ದೇನೆ. ಸಾಲಗಾರರಿಂದ ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಕೂಡಲೇ ನನಗೆ ವರ್ಕ್ ಆರ್ಡರ್ ಕೊಟ್ಟು, ಹಣ ಬಿಡುಗಡೆ ಮಾಡದೇ ಹೋದರೆ ಆತ್ಮಹತ್ಯೆಯೊಂದೇ ನನಗೆ ಉಳಿದಿರುವ ಹಾದಿ ಎಂದು ತನ್ನ ನೋವನ್ನು ಸಂತೋಷ್ ಪಾಟೀಲ್ ಹಂಚಿಕೊಂಡಿದ್ದಾರೆ.
ಸಂತೋಷ್ ದಾಖಲಿಸಿರುವ ದೂರಿನಲ್ಲಿ ನೋವು, ಸಾಲದ ಒತ್ತಡ ಬಿಟ್ಟರೆ, ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ಒಂದು ಸ್ಪಷ್ಟ ಅರೋಪ ಸಹ ಮಾಡಿಲ್ಲ. ಸಚಿವರ ಸಹಚರರು ಹಣ ಕೇಳಿದ ಬಗ್ಗೆ ಒಂದು ವಾಕ್ಯ ಉಲ್ಲೇಖಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕೆ.ಎಸ್. ಈಶ್ವರಪ್ಪ ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ವಿಚಾರ ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ಬಿಲ್ ಪಾವತಿ ಮಾಡದಿದ್ದರೆ ಅತ್ಮಹತ್ಯೆ ಮಾಡಿಕೊಳ್ತೇನೆ ಎಂದು ನೋವು ತೋಡಿಕೊಂಡಿದ್ದಾರೆ. ನಿಜವಾಗಿಯೂ ಒಬ್ಬ ಪ್ರಮಾಣಿಕ ಜನ ಪ್ರತಿನಿಧಿಯಾಗಿದ್ದರೆ ಈಶ್ವರಪ್ಪ ಆ ಗುತ್ತಿಗೆದಾರನ ಕಷ್ಟ ಕೇಳಬೇಕಿತ್ತು. ಯಾಕೆ ವರ್ಕ್ ಆರ್ಡರ್ ಬಾಕಿ ಇದೆ ಎಂಬ ಮಾಹಿತಿ ಪಡೆಯಬೇಕಿತ್ತು. ತನ್ನ ಹೆಸರಿನಲ್ಲಿ ಕಮೀಷನ್ ಕೇಳಿದವರ ಮಾಹಿತಿ ಪಡೆದು ಸ್ವತಃ ಈಶ್ವರಪ್ಪ ಅವರೇ ದಂಧೆಕೋರರ ಬಗ್ಗೆ ದೂರು ಕೊಡಬೇಕಿತ್ತು. ಬಾಕಿ ಇರುವ ಬಿಲ್ ಗಳನ್ನು ಪಾವತಿ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಿತ್ತು.ನ ಆದರೆ ಆತ್ಮಹತ್ಯೆ ಮಾಡಿಕೋಳ್ತೇನೆ ಎಂದು ಹೇಳಿರುವ ಗುತ್ತಿಗೆದಾರನ ವಿರುದ್ಧವೇ ಮಾನನಷ್ಟ ದಾವೆ ಹೂಡುವ ಮೂಲಕ ಕೆ.ಎಸ್. ಈಶ್ವರಪ್ಪ ಅಧಿಕಾರಸ್ತರು ಏನು ಮಾಡಿದರೂ ನಡೆಯುತ್ತೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಂದೇ ಒಂದು ಅಕ್ರಮ ನಡೆದಿಲ್ಲವೇ? ಒಂದು ಗುತ್ತಿಗೆಯಲ್ಲೂ ಕಮೀಷನ್ ಹೋಗಲ್ಲವೇ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಕಮೀಷನ್ ಸಂಸ್ಕೃತಿ ಈಗ ಇಲ್ಲವೇ? ಸಚಿವರ ಆಪ್ತರು ಎಂದು ಸ್ಪಷ್ಟವಾಗಿ ಗುತ್ತಿಗೆದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಾತ್ರವಲ್ಲ ಒಂದು ಅವಾಚ್ಯ ಪದ ವನ್ನೂ ದೂರಿನಲ್ಲಿ ಬಳಿಸಿಲ್ಲ. ಗುತ್ತಿಗೆದಾರನ ದೂರಿನಲ್ಲಿಉರುಳಿಲ್ಲ ಎನ್ನುವುದಾದರೆ ಯಾಕೆ ಸ್ವತಃ ಈಶ್ವರಪ್ಪ ಅವರೇ ಮುಂದೆ ನಿಂತು ತನಿಖೆ ನಡೆಸಲಿಲ್ಲ ? ದೂರುದಾರರ ವಿರುದ್ಧವೇ ಮಾನನಷ್ಟ ಮೊಕದ್ದಮೆ ದಾಖಲಿಸಿ ಹೇಳಿಕೆ ಕೊಡುವುದು ಹೆದರಿ ದಾವೆ ದಾಖಲಿಸಿದರಾ ? ಇಲ್ಲವೇ ಹೆದರಿಸಲು ಅನುಸರಿಸಿದ ಕಾರ್ಯತಂತ್ರವೇ ಎನ್ನುವ ಅನುಮಾನ ಮೂಡಿಸಿದೆ.












Click it and Unblock the Notifications