ಉಗ್ರರ ವಿರುದ್ಧ ಹೋರಾಟಕ್ಕೆ ಸಜ್ಜಾದ 40 ಹಿಂದೂ ಸಂಘಟನೆಗಳು
ನವದೆಹಲಿ, ಅ.20: ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ವಿರುದ್ಧ ಕರ್ನಾಟಕದ ಮಸೀದಿಗಳು ಒಂದಾಗಿ ಹೋರಾಟಕ್ಕೆ ಮುಂದಾದ ಬೆನ್ನಲ್ಲೇ 40ಕ್ಕೂ ಅಧಿಕ ಹಿಂದೂ ಸಂಘಟನೆಗಳು ಕೂಡಾ ಹೋರಾಟ, ಜಾಗೃತಿಗೆ ಮುಂದಾಗಿರುವುದಾಗಿ ಘೋಷಿಸಿವೆ.
ಉಗ್ರರ ವಿರುದ್ಧ ಹೋರಾಟಕ್ಕೆ ಒಂದಾಗಿರುವ 40ಕ್ಕೂ ಅಧಿಕ ಸಂಘಟನೆಗಳು ಭಾರತದಲ್ಲಿ ಭಯೋತ್ಪಾದನೆ ಬಗ್ಗೆ ಜನ ಜಾಗೃತಿ ಮೂಡಿಸಲು ಪಣ ತೊಟ್ಟಿವೆ. ಈ ಹೊಸ ಗುಂಪು ಸೋಮವಾರದಿಂದಲೇ ಕಾರ್ಯಾಚರಣೆಗಿಳಿದಿದ್ದು, ಹಿಂದೂ ಜನಜಾಗೃತಿ, ಶ್ರೀರಾಮಸೇನೆ ಗುಂಪುಗಳು ಕೂಡಾ ಒಂದೇ ಮಾರ್ಗದಲ್ಲಿ ಸಾಗಿ ಉಗ್ರರ ವಿರುದ್ಧ ಜಾಗೃತಿ ಮೂಡಿಸಲಿವೆ.[ಇರಾಕಿ ಉಗ್ರರ ವಿರುದ್ಧ ಕರ್ನಾಟಕ ಮಸೀದಿಗಳ ಯುದ್ಧ]

ನಮ್ಮ ಹೋರಾಟ ಉಗ್ರರ ವಿರುದ್ಧ ಮಾತ್ರ: ನಮ್ಮ ಹೋರಾಟ ಉಗ್ರರ ವಿರುದ್ಧ ಮಾತ್ರ, ಮುಸ್ಲಿಮರ ವಿರುದ್ಧ ಅಲ್ಲ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ. ಎಲ್ಲಾ ಹಿಂದೂ ಪರ ಸಂಘಟನೆಗಳು ಒಗ್ಗೂಡಿ ಜನ ಜಾಗೃತಿ ಮೂಡಿಸಬೇಕಿದೆ. ಭಾರತದಲ್ಲಿ ಉಗ್ರರ ಉಪಟಳವನ್ನು ಹತ್ತಿಕ್ಕಬೇಕಿದೆ.
ನಮ್ಮ ಈ ಹೊಸ ಸಂಘಟನೆಗೆ ಮುಸ್ಲಿಮರು ಕೂಡಾ ಸೇರ್ಪಡೆಗೊಳ್ಳಬಹುದು. ಉಗ್ರರ ಬಗ್ಗೆ ಜನಜಾಗೃತಿ ಮಾಡುವುದು ಸಂಘಟನೆಯ ಮುಖ್ಯ ಉದ್ದೇಶ. ಉಗ್ರರ ಕರಿನೆರಳು ಎಲ್ಲೆಲ್ಲಿ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಆ ಪ್ರದೇಶದ ಯುವ ಜನಾಂಗಕ್ಕೆ ತಿಳಿ ಹೇಳಲಾಗುತ್ತದೆ. [ಇರಾಕಿ ಉಗ್ರರಿಂದ 'ಏಡ್ಸ್ ಬಾಂಬ್' ಬೀಳಲಿದೆ ಎಚ್ಚರ!]
ಭಯೋತ್ಪಾದಕರು ನಮ್ಮ ಯುವ ಜನಾಂಗಕ್ಕೆ ಆಮಿಷ ಒಡ್ಡಿ ಉಗ್ರ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಭಾರತದಲ್ಲೇ ಇದ್ದುಕೊಂಡು ಪಾಕಿಸ್ತಾನ ಧ್ವಜ, ಉಗ್ರ ಸಂಘಟನೆ ಧ್ವಜ ಹಾರಾಟ ಮಾಡುತ್ತಾರೆ. ಇಂಥ ಕೃತ್ಯಗಳನ್ನು ಹತ್ತಿಕ್ಕಬೇಕು. ಈ ಪಿಡುಗನ್ನು ಹೋಗಲಾಡಿಸಲು ಜನಜಾಗೃತಿಯೇ ಉತ್ತಮ ಮಾರ್ಗ. ಇದರಿಂದ ಸಶಕ್ತ ಭಾರತ, ಕೋಮು ಸೌಹಾರ್ದಯುಕ್ತ ಭಾರತ ನಿರ್ಮಾಣ ಸಾಧ್ಯ ಎಂದು ಮುತಾಲಿಕ್ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications