ಚುನಾವಣೆ ಘೋಷಣೆಗೂ ಮೊದಲು ಕರ್ನಾಟಕದಲ್ಲಿ 4 ಮೋದಿ ರ್ಯಾಲಿ
ಬೆಂಗಳೂರು, ಫೆಬ್ರವರಿ 9: ಕರ್ನಾಟಕ ವಿಧಾನಸಭೆ ಚುನಾವಣೆ-2018ಕ್ಕೆ ದಿನಾಂಕ ಘೋಷಣೆಯಾಗುವ ಮೊದಲು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ರ್ಯಾಲಿಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಸದ್ಯದ ಲೆಕ್ಕಾಚಾರಗಳ ಪ್ರಕಾರ ಮಾರ್ಚ್ ಮೊದಲ ವಾರದ ನಂತರ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಲಿದೆ. ನಂತರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು ಅದಕ್ಕೂ ಮೊದಲು ರಾಜ್ಯದಲ್ಲಿ ಕನಿಷ್ಠ ನಾಲ್ಕು ರ್ಯಾಲಿಗಳನ್ನು ನಡೆಸಲು ಬಿಜೆಪಿ ಚಿಂತನೆ ನಡೆಸಿದೆ.
ಕರ್ನಾಟಕ ಚುನಾವಣೆ : 5ಕ್ಕೂ ಹೆಚ್ಚು ಮೋದಿ ಸಮಾವೇಶ
ಕಲಬುರಗಿ, ಮೈಸೂರು, ರಾಯಚೂರು ಮತ್ತು ದಾವಣಗೆರೆಯಲ್ಲಿ ರ್ಯಾಲಿಗಳನ್ನು ನಡೆಸಲು ನಿರ್ಧರಿಸಲಾಗಿದ್ದು ಬೃಹತ್ ರ್ಯಾಲಿ ದಾವಣಗೆರೆಯಲ್ಲಿ ಫೆಬ್ರವರಿ 27ರಂದು ನಡೆಯಲಿದೆ ಎನ್ನಲಾಗಿದೆ. ಅಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ 75ನೇ ಹುಟ್ಟುಹಬ್ಬವಾಗಿದ್ದು ಅದೇ ದಿನ ಮೆಗಾ ರ್ಯಾಲಿ ನಡೆಸುವ ಆಲೋಚನೆ ಇದೆ. ರೈತರನ್ನೇ ಕೇಂದ್ರೀಕರಿಸಿ ಈ ರ್ಯಾಲಿ ನಡೆಸಿ ಇದಕ್ಕೆ ರೈತ ಮಿತ್ರ ಎಂಬ ಹೆಸರಿಡುವ ಯೋಜನೆ ಬಿಜೆಪಿಯಲ್ಲಿ ಸಿದ್ಧಗೊಂಡಿದೆ.
ಈ ರ್ಯಾಲಿಗಳನ್ನು1 ಲಕ್ಷ ಜನರಿಗೆ ಮಿತಿಗೊಳಿಸುವುದು ಬಿಜೆಪಿ ಆಲೋಚನೆಯಾಗಿದೆ. ಮೋದಿ 10 ರ್ಯಾಲಿ ನಡೆಸಲು ಇಚ್ಛಿಸಿದ್ದಾರೆ. ಆದರೆ ಸಂಪನ್ಮೂಲಗಳು ಮತ್ತು ರ್ಯಾಲಿ ನಡೆಸಲು ತಗುಲುವ ಸಮಯವನ್ನು ಲೆಕ್ಕ ಹಾಕಿ ರ್ಯಾಲಿಗಳನ್ನು 4ಕ್ಕೆ ಮಿತಿಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.