Electricity Price Hike: ಈ ವರ್ಷದಲ್ಲಿ ಗ್ರಾಹಕರಿಗೆ 3ನೇ ಬಾರಿ 'ವಿದ್ಯುತ್ ದರ ಏರಿಕೆ' ಶಾಕ್
ಬೆಂಗಳೂರು ಸೆಪ್ಟಂಬರ್ 25: ಕರ್ನಾಟಕದಲ್ಲಿ ಈ ವರ್ಷ ಮೂರನೇ ಬಾರಿಗೆ ಸರ್ಕಾರ ವಿದ್ಯುತ್ ದರ ಪರಿಷ್ಕರಣೆ ಮಾಡುವ ಮೂಲಕ ಮುಂದಿನ ತಿಂಗಳು ಅಕ್ಟೋಬರ್ ಒಂದರಿಂದಲೇ ಗ್ರಾಹಕರ ಮೇಲೆ ಆರ್ಥಿಕ ಬರೆ ಹಾಕುತ್ತಿದೆ.
ಇಂಧನದ ಹೊಂದಾಣಿಕೆ ಶುಲ್ಕವನ್ನು (ಎಫ್ಎಸಿ) ಅಕ್ಟೋಬರ್ 1ರಿಂದ ಆರು ತಿಂಗಳಿಗೆ ಅಂದರೆ 2023ರ ಮಾರ್ಚ್ 31ರವರೆಗೆ ಅನ್ವಯಿಸುವಂತೆ ದರ ಪರಿಷ್ಕರಿಸಿ ಆದೇಶಿಸಲಾಗಿದೆ. ಇದರಿಂದ ವಿದ್ಯುತ್ ಪ್ರತಿ ಯುನಿಟ್ ಮೇಲೆ 23ಪೈಸೆಯಿಂದ 43ಪೈಸೆಗೆ ಹೆಚ್ಚಿಸಿ ಆದೇಶ ನೀಡಲಾಗಿದೆ. ಇದು ಈ ವರ್ಷದಲ್ಲೇ ಮೂರನೇ ಬಾರಿಯ ಪರಿಷ್ಕರಣೆ ಆಗಿದ್ದು, ಇದು ಜನರಿಗೆ ಹೊರೆಯಾಗಿ ಪರಿಣಮಿಸಲಿದೆ.
Just in: ಅಧಿವೇಶನ ಮುಗಿದ ಕೂಡಲೇ ವಿದ್ಯುತ್ ದರ ಏರಿಕೆ, ಏನಿದು ಹುನ್ನಾರ?: ಎಚ್ಡಿಕೆ ಪ್ರಶ್ನೆ
ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಹೊರಡಿಸಿದ ಆದೇಶದ ಪ್ರಕಾರ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವ್ಯಾಪ್ತಿಯಲ್ಲಿನ ಬೆಂಗಳೂರು ನಗರದ ಗ್ರಾಹಕರು ಅಕ್ಟೋಬರ್ 1ರಿಂದ ಪ್ರತಿ ಯೂನಿಟ್ ಮೇಲೆ 43 ಪೈಸೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಮೆಸ್ಕಾಂ) ವ್ಯಾಪ್ತಿಯ ಸಾರ್ವಜನಿಕರು ಪ್ರತಿ ಯೂನಿಟ್ಗೆ ಹಾಲಿ ಶುಲ್ಕದ ಮೇಲೆ 24 ಪೈಸೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಸೆಸ್ಕಾಂ) ಅಡಿಯಲ್ಲಿ ಬರುವ ಗ್ರಾಹಕರು ಹೆಚ್ಚುವರಿ 35 ಪೈಸೆ ಪಾವತಿಸಬೇಕಾಗುತ್ತದೆ. ಅದೇ ರೀತಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಹೆಸ್ಕಾಂ) ಮತ್ತು ಗುಲಬರ್ಗಾ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಜೆಸ್ಕಾಂ) ಅಡಿಯಲ್ಲಿ ಬರುವವರು ಸಹ ಹೆಚ್ಚುವರಿ 35 ಪೈಸೆ ವಿದ್ಯುತ್ ಶುಲ್ಕ ಕಟ್ಟಬೇಕಿದೆ.
ಕಲ್ಲಿದ್ದಲು ಖರೀದಿ ದರ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಇಂಧನದ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್ 1ರಿಂದ ಆರು ತಿಂಗಳಿಗೆ ಅನ್ವಯವಾಗುವಂತೆ ಹೆಚ್ಚಿಸಲಾಗಿದೆ. ಕಲ್ಲಿದ್ದಲು ದರ ಜತೆಗೆ ಇನ್ನಿತರ ವೆಚ್ಚಗಳ ಏರಿಕೆ ಆಗಿದೆ. ಸಂಚಿತ ಇಂಧನ ಶುಲ್ಕವನ್ನು ಸಂಪೂರ್ಣವಾಗಿ ವಸೂಲಿ ಮಾಡಿದ ನಂತರ ನಿಗದಿತ ಹೆಚ್ಚಳ ಶುಲ್ಕ ಹಿಂಪಡೆಯುವ ಸಾಧ್ಯತೆ ಇದೆ ಎಂದು ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಅಧಿಕಾರಿಗಳು ತಿಳಿಸಿದ್ದಾರೆ.
ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಕೆ
ಪ್ರಸ್ತುತ ವರ್ಷ (2022) ಏಪ್ರಿಲ್, ಮೇ ಮತ್ತು ಜೂನ್ ಮೂರು ತಿಂಗಳಲ್ಲಿ 643 ಕೋಟಿ ರೂ.ಗಳಷ್ಟು ವಿದ್ಯುತ್ ಖರೀದಿ ವೆಚ್ಚ ಏರಿಕೆ ಆಗಿದೆ. ಇದರ ಹೊಂದಾಣಿಕೆ ವೆಚ್ಚ ಭರಿಸುವ ಸಂಬಂಧ ಆಯೋಗ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಿತ್ತು. ಪ್ರತಿ ತ್ರೈಮಾಸಿಕಕ್ಕೊಮ್ಮೆ ಇಂಧನ ಹೊಂದಾಣಿಕೆ ಶುಲ್ಕ ಪರಿಷ್ಕರಿಸಲಾಗುತ್ತದೆ. ಇದು ಗ್ರಾಹಕರಿಗೆ ಹೊರೆ ಆಗಬಾರದು ಎಂದು ಆಯೋಗವರು ಆರು ತಿಂಗಳಿಗೆ ಅನ್ವಯಿಸಿ ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಎರಡು ತಿಂಗಳ ಹಿಂದಷ್ಟೇ ಸರ್ಕಾರ (ಜುಲೈ) ಇಂಧನ ಹೊಂದಾಣಿಕೆ ಶುಲ್ಕವನ್ನು ಆರು ತಿಂಗಳ ಅವಧಿಗೆ 31 ಪೈಸೆಯಷ್ಷು ಬೆಸ್ಕಾಂಗೆ ಅನ್ವಯಿಸುವಂತೆ ಏರಿಕೆ ಮಾಡಿತ್ತು. ಕಲ್ಲಿದ್ದಲು ಖರೀದಿ ವೆಚ್ಚ ಏರುಗತಿಯ ಹಿನ್ನೆಲೆ ಮತ್ತೆ ದರ ಪರಿಷ್ಕರಣೆ ಮಾಡಿದೆ. ಇದು ಈ ವರ್ಷ ಮೂರನೇ ಬಾರಿ ದರ ಪರಿಷ್ಕರಿಸಲಾಗಿದೆ. ಈಗಾಗಲೇ ಕೋವಿಡ್, ನಿರುದ್ಯೋಗ ಇನ್ನಿತರ ಸಮಸ್ಯೆಗಳಿಂದ ಕಂಗಾಲಾದ ಜನರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದೆ.