'ನಮ್ಮ ಮೂವರು ಶಾಸಕರು ವಾಪಸ್ ಬರುವ ನಿರೀಕ್ಷೆ ಇದೆ'
Recommended Video
ಬೆಂಗಳೂರು, ಜುಲೈ 12 : 'ಶಾಸಕರು ಪಕ್ಷಕ್ಕೆ ನಿಷ್ಠೆಯಿಂದ ಇರಬೇಕಿತ್ತು. ರಾಜೀನಾಮೆ ನೀಡಿರುವ ನಮ್ಮ ಪಕ್ಷದ ಮೂವರು ಶಾಸಕರು ವಾಪಸ್ ಬರುವ ನಿರೀಕ್ಷೆ ಇದೆ' ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, 'ಶಾಸಕರ ರಾಜೀನಾಮೆಯಿಂದ ಮುಖ್ಯಮಂತ್ರಿಗಳು ಬೇಸರ ಮಾಡಿಕೊಂಡಿಲ್ಲ. ಅವರು ಆರಾಮಾಗಿ ಇದ್ದಾರೆ. 30 ವರ್ಷಗಳಿಂದ ರಾಜಕೀಯ ನೋಡಿಕೊಂಡು ಬಂದಿದ್ದೇವೆ. ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯ' ಎಂದರು.
'ಶಾಸಕರು ಪಕ್ಷಕ್ಕೆ ನಿಷ್ಠಯಿಂದ ಇರಬೇಕಿತ್ತು. ಇದರಿಂದಾಗಿ ಬೇಸರವಾಗುತ್ತದೆ. ಆದರೆ, ಮುಖ್ಯಮಂತ್ರಿಗಳು ಬೇಸರ ಮಾಡಿಕೊಂಡು ಕುಳಿತಿಲ್ಲ. ನಮ್ಮ ಪಕ್ಷದ ಮೂವರು ಶಾಸಕರು ವಾಪಸ್ ಬರುವ ನಿರೀಕ್ಷೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಇನ್ನೂ ರಾಜೀನಾಮೆ ಅಂಗೀಕಾರವಾಗಿಲ್ಲ. ರಾಜೀನಾಮೆ ಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಶಾಸಕರು ಮನಸ್ಸು ಬದಲಿಸಿಕೊಂಡು ಬರುವ ಅವಕಾಶ ಇನ್ನೂ ಇದೆ' ಎಂದು ತಿಳಿಸಿದರು.
'ಚುನಾವಣೆ ಗೆದ್ದ ಬಳಿಕ ಕ್ಷೇತ್ರದ ಜನರ ಸೇವೆ ಮಾಡಬೇಕು. ಅಧಿಕಾರಿ ಮತ್ತು ಹಣಕ್ಕಾಗಿ ಪಕ್ಕಕ್ಕೆ ನಿಷ್ಠೆ ತೋರಿಸದೇ ಪಕ್ಷ ಬಿಟ್ಟು ಪಕ್ಷಕ್ಕೆ ಹಾರುವುದು ತಪ್ಪು. ಇದರಿಂದಾಗಿ ಜನರಿಗೆ ಶಾಸಕರ ಮೇಲೆ ಕೆಟ್ಟ ಅಭಿಪ್ರಾಯ ಬರುತ್ತದೆ' ಎಂದರು.
'ಶಾಸಕರು ರಾಜೀನಾಮೆಗೆ ಏನೇ ಕಾರಣ ಕೊಟ್ಟರೂ ಪರಿಹಾರ ಮಾಡದಂತಹ ಸಮಸ್ಯೆ ಏನೂ ಆಗಿರಲಿಲ್ಲ. ರಾಜಕೀಯದಲ್ಲಿ ಸಣ್ಣ-ಪುಟ್ಟ ಸಮಸ್ಯೆ ಇರುತ್ತದೆ. ಅದನ್ನು ಕೂತು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಈ ರೀತಿ ಮಾಡಬಾರದು' ಎಂದು ಹೇಳಿದರು.
ಹುಣಸೂರು ಶಾಸಕ ಎಚ್. ವಿಶ್ವನಾಥ್, ಕೆ. ಆರ್. ಪೇಟೆ ಶಾಸಕ ನಾರಾಯಣ ಗೌಡ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂಬೈನ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.












Click it and Unblock the Notifications