ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಸ್ಫೋಟ: ಮೂವರಿಗೆ ಏಳು ವರ್ಷ ಶಿಕ್ಷೆ
ಬೆಂಗಳೂರು, ಜುಲೈ 9: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಬಿಹಾರದ ದರ್ಬಾಂಗದ ಗೌಹರ್ ಅಜೀಜಿ ಕೋಮನಿ, ಮಧುಬನಿಯ ಕಮಲ್ ಹಸನ್ ಹಾಗೂ ಮೊಹಮ್ಮದ್ ಕಫೀಲ್ ಅಖ್ತರ್ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಸೋಮವಾರ ತೀರ್ಪು ನೀಡಿದರು.
2010ರ ಆಗಸ್ಟ್ 27ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಸಂಜೆ ಪಂದ್ಯ ನಡೆದಿತ್ತು. ಪಂದ್ಯದ ಆರಂಭಕ್ಕೆ ಕೆಲವೇ ನಿಮಿಷಗಳ ಮೊದಲು ಕ್ರೀಡಾಂಗಣದ ಹೊರಭಾಗದಲ್ಲಿ ಲಘು ಪ್ರಮಾಣದ ಬಾಂಬ್ ಸ್ಫೋಟ ಸಂಭವಿಸಿತ್ತು.

ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಹರ್ ಅಜೀಜಿ ಕೋಮನಿ, ಕಮಲ್ ಹಸನ್, ಮೊಹಮ್ಮದ್ ಕಫೀಲ್ ಅಖ್ತರ್ ಹಾಗೂ ನವದೆಹಲಿಯ ಮಹಮದ್ ತಾರೀಕ್ ಅಂಜುಮ್ ಎಹ್ಸಾನ್ ಅವರನ್ನು ಬಂಧಿಸಲಾಗಿತ್ತು.
ಗೌಹರ್ ಅಜೀಜಿ ಕೋಮನಿ, ಕಮಲ್ ಹಸನ್ ಹಾಗೂ ಮೊಹಮ್ಮದ್ ಕಫೀಲ್ ಅಖ್ತರ್, ಜುಲೈ 4ರಂದು ಎನ್ಐಎ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಬಳಿಕ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಅವರು ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದರು.
ಜಿಹಾದ್ ಹೆಸರಿನಲ್ಲಿ ಬಾಂಬ್ ಸ್ಫೋಟಕ್ಕೆ ಸಹಕರಿಸುವಂತೆ ಕೆಲವರು ತಮ್ಮನ್ನು ಪ್ರಚೋದಿಸಿದರು. ಎಸಗಿರುವ ಅಪರಾಧದ ಬಗ್ಗೆ ಪಶ್ಚಾತ್ತಾಪ ಉಂಟಾಗಿದೆ.
ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿದ್ದು, ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಆರೋಪಿಗಳು ಮನವಿ ಮಾಡಿದ್ದರು.
ಆದರೆ ತಪ್ಪೊಪ್ಪಿಗೆ ಹೇಳಿಕೆ ನೀಡದ ಮತ್ತೊಬ್ಬ ಆರೋಪಿ ನವದೆಹಲಿಯ ಮಹಮದ್ ತಾರೀಕ್ ಅಂಜು ಎಹ್ಸಾನ್ ಶಿಕ್ಷೆಯ ಕುರಿತು ತೀರ್ಪು ಪ್ರಕಟಿಸಿಲ್ಲ.












Click it and Unblock the Notifications