PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು
ಬೆಂಗಳೂರು: ಕರ್ನಾಟಕ ದ್ವೀತಿಯ ಪಿಯುಸಿ ಫಲಿತಾಂಶದ ನಂತರದ ಮರು ಮೌಲ್ಯಮಾಪನ, ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಪ್ರಕ್ರಿಯೆಗಳು ಆರಂಭವಾಗಿವೆ. 2026ರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಣನೀಯ ಸಾಧನೆ ದಾಖಲಾಗಿದೆ. ಶೇ.86ರಷ್ಟು ಫಲಿತಾಂಶ ಬಂದಿದ್ದು, ಇದು ಕಳೆದ ವರ್ಷಕ್ಕಿಂತ ಶೇ.13ರಷ್ಟು ಅಧಿಕವಾಗಿದೆ. ಯಾರೆಲ್ಲ ಅನುತ್ತೀರ್ಣರಾಗಿದ್ದಾರೋ ಅಥವಾ ಮರು ಮೌಲ್ಯಮಾಪನ ಬಯಸಿದ್ದಾರೋ ಅವರೆಲ್ಲ ಈ ಕೆಳಗೆ ನೀಡಿರುವ ಪ್ರಮುಖ ದಿನಾಂಕ ಪರಿಶೀಲಿಸಿಕೊಳ್ಳಬಹುದು. ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮರು ಮೌಲ್ಯಮಾಪನ ಆಸಕ್ತ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಕೆಗೆ ಏಪ್ರಿಲ್ 15ರವರೆಗೆ ಅವಕಾಶ ನೀಡಲಾಗಿದೆ. ಏಪ್ರಿಲ್ 10 ರಿಂದ 15ರೊಳಗೆ ಸ್ಕ್ಯಾನ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ವಿರುತ್ತದೆ. ಅದಕ್ಕಾಗಿ ವಿದ್ಯಾರ್ತಿಗಳು ಶುಲ್ಕ ಪಾವತಿಸಬೇಕಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಸ್ಕ್ಯಾನ್ ಪ್ರತಿಗೆ 530 ರೂಪಾಯಿ ಹಾಗೂ ಮರುಮೌಲ್ಯಮಾಪನಕ್ಕಾಗಿ 1670 ರೂಪಾಯಿ ಹಣವನ್ನು ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಪಾವತಿಸಬೇಕು. ಶುಲ್ಕ ಪಾವತಿಸಿ ಸ್ಕ್ಯಾನ್ ಪ್ರತಿ ಪಡೆದವರಿಗೆ ಮಾತ್ರ ಮರು ಮೌಲ್ಯಮಾಪನಕ್ಕೆ ಅವಕಾಶ ಇರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ತಿಳಿಸಿದೆ.
ಉತ್ತರ ಪತ್ರಿಕೆಯ ಮರುಮೌಲ್ಯಮಾಪನ
ಅಭ್ಯರ್ಥಿಗಳು ಪರೀಕ್ಷೆ -2ಕ್ಕೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯಬೇಕಾಗಿಲ್ಲ. ಯಾವುದೇ ಸಂದರ್ಭದಲ್ಲಿ, "ಕರ್ನಾಟಕ ಪ್ರಿ-ಯೂನಿವರ್ಸಿಟಿ ಕೋರ್ಸ್ ಎಸ್ ಎಲ್ ಪಿ ಇ 1997, 29 (ಎ)' ಪ್ರಕಾರ ಈ ಹಿಂದೆ ಗಳಿಸಿದ ಅಂಕಗಳನ್ನು ಮರು ಮೌಲ್ಯಮಾಪನದ ನಂತರ ಮರುಸ್ಥಾಪಿಸಲು ಸಾಧ್ಯವಿಲ್ಲ. ಮರು ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳೇ ಪರೀಕ್ಷೆ-1ರ ಅಂಕಗಳೆಗಿದು ಪರಿಗಣಿಸಲಾಗುವುದು ಎಂದು ಪಿಯುಸಿ ಫಲಿತಾಂಶದ ಪ್ರಕಟವಾದ ದಿನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದರು.
ಮರು ಮೌಲ್ಯಮಾಪಕರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಮತ್ತು ಈ ಬಗ್ಗೆ ಯಾವುದೇ ಮೇಲ್ಮನವಿಗಳಿಗೆ ಅವಕಾಶವಿಲ್ಲ. ಮರು ಮೌಲ್ಯಮಾಪನದ ಮತ್ತು ಮರುಎಣಿಕೆಯ ಫಲಿತಾಂಶವನ್ನು ಮಂಡಲಿಯ https://kseeb.karnataka.gov.in ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
ಅಂಕಗಳ ಮರುಎಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.
ಪಿಯುಸಿ ಪರೀಕ್ಷೆ-2 ಅಭ್ಯರ್ಥಿಗಳ ಗಮನಕ್ಕೆ
ಪಿಯುಸಿ ಪರೀಕ್ಷೆ-2ಕ್ಕೆ ನೊಂದಾಯಿಸಿಕೊಳ್ಳುವ ವಿದ್ಯಾರ್ಥಿಗಳು ಆನ್ಲೈನ್ (https://kseab.karnataka.gov.in) ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಒಂದು ವಿಷಯಕ್ಕೆ ಪ್ರಥಮ ಬಾರಿಗೆ 175 ರೂ. ಹಾಗೂ ಒಂದು ವಿಷಯಕ್ಕೆ ಎರಡನೇ ಬಾರಿಗೆ 350 ರೂಪಾಯಿ ಹಣ ನಿಗದಿ ಆಗಿದೆ. ಏಪ್ರಿಲ್ 17ರೊಳಗೆ ನೋಂದಣಿ ಮಾಡಿಕೊಳ್ಳಬೇಕು.
ಪಿಯುಸಿ ಪರೀಕ್ಷೆ-2 ಏಪ್ರಿಲ್ 30ರಿಂದ ಮೇ 13ರವರೆಗೆ ನಡೆಯಲಿವೆ. ನಿಗದಿತ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಕೆಎಸ್ಇಎಬಿ ಸಹಾಯವಾಣಿ 0802310075 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.












Click it and Unblock the Notifications