2264 ಅಭ್ಯರ್ಥಿಗಳು ಕಣದಲ್ಲಿ, ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಬೆಂಗಳೂರು, ಏಪ್ರಿಲ್ 24: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಇಂದು ಮಧ್ಯಾಹ್ನ 3 ಗಂಟೆ ಮೊದಲು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕಾಗಿದೆ.
ಸೋಮವಾರ ಸಂಜೆ ವೇಳೆಗೆ ರಾಜ್ಯದಲ್ಲಿ 2264 ನಾಮಪತ್ರಗಳು ಸಲ್ಲಿಕೆಯಾಗಿದ್ದು ಒಟ್ಟು ನಾಮಪತ್ರಗಳ ಸಂಖ್ಯೆ 3000 ದಾಟುವ ನಿರೀಕ್ಷೆ ಇದೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು
ಸೋಮವಾರ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಕೊರೆಟಗೆರೆಯಲ್ಲಿ ನಾಮಪತ್ರ ಸಲ್ಲಿಸಿದರೆ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ, ಬಸವರಾಜ ಬೊಮ್ಮಾಯಿ ಶಿಗ್ಗಾಂವ್ ನಲ್ಲಿ, ಗದಗದಲ್ಲಿ ಎಚ್.ಕೆ ಪಾಟೀಲ್, ಹಾನಗಲ್ ನಲ್ಲಿ ಸಿಎಂ ಉದಾಸಿ ನಾಮಪತ್ರ ಸಲ್ಲಿಸಿದರು.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಶ್ರೀರಾಮುಲು ಕೂಡ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಇವೆಲ್ಲದರ ನಡುವೆ ಇಂದು ನಾಲ್ಕು ಕ್ಷೇತ್ರಗಳಿಗೆ ತನ್ನ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಬೇಕಾಗಿದೆ.
ಏಪ್ರಿಲ್ 27ರಂದು ಅಂತಿಮ ಚಿತ್ರಣ
ಏಪ್ರಿಲ್ 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಇದಾದ ಬಳಿಕ ನಾಮಪತ್ರ ಹಿಂಪಡೆಯಲು ಏಪ್ರಿಲ್ 27ರವರೆಗೆ ಕಾಲವಕಾಶ ಇದೆ. ಇದಾದ ಬಳಿಕ ಕಣದಲ್ಲಿ ಉಳಿದ ಒಟ್ಟು ಅಭ್ಯರ್ಥಿಗಳ ಲೆಕ್ಕ ಗೊತ್ತಾಗಲಿದ್ದು ಅಂತಿಮ ಚಿತ್ರಣ ಸಿಗಲಿದೆ.