ಕಡಿಮೆ ದಾಖಲಾತಿಯ 22 ಅಲ್ಪಸಂಖ್ಯಾತ ಶಾಲೆ ಮುಚ್ಚಲ್ಲ: ರಾಜ್ಯ ಸರ್ಕಾರ
ಬೆಂಗಳೂರು, ಅಕ್ಟೋಬರ್ 07: ವಿದ್ಯಾರ್ಥಿಗಳ ಕಡಿಮೆ ದಾಖಲಾತಿ ಹೊಂದಿರುವ ರಾಜ್ಯದ 22 ಅಲ್ಪ ಸಂಖ್ಯಾತ ಶಾಲೆಗಳನ್ನು ಮುಚ್ಚುವ ಯೋಜನೆ ಸರ್ಕಾರದ ಮುಂದೆ ಇಲ್ಲ. ಆದರೆ ಅಷ್ಟು ಶಾಲೆಗಳ ಪೈಕಿ ಐದಾರು ಶಾಲೆಗಳ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಚಿಂತನೆ ನಡೆದಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ತಿಳಿಸಿದೆ.
ಐದು ಅಥವಾ ಆರು ಶಾಲೆಗಳ ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಿಗೆ ಸ್ಥಳಾಂತರಿಸಲು ಸರ್ಕಾರ ಯೋಚನೆ ನಡೆಸಿದೆ. ಕರ್ನಾಟಕದಲ್ಲಿ 22 ಮೌಲಾನಾ ಆಜಾದ್ ಮಾದರಿ (ಎಂಎಎಂ)ಶಾಲೆಗಳಲ್ಲಿ ಕಡಿಮೆ ದಾಖಲಾತಿ ಇದೆ. ಪ್ರತಿಯೊಂದು ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ನಿರ್ದೇಶಿತ 300 ವಿದ್ಯಾರ್ಥಿಗಳ ಪ್ರವೇಶ ಪೈಕಿ ಅರ್ಧದಷ್ಟು ಪ್ರವೇಶಗಳು ಇಲ್ಲ.

ಉರ್ದು ಮಾಧ್ಯಮ ಶಾಲೆಗಳು ಹಾಗೂ ಮದರಸಾಗಳಿಗೆ ಪೂರಕವಾಗಿ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ 2017 ರಲ್ಲಿ ಈ ಶಾಲೆಗಳ ಪರಿಕಲ್ಪನೆಯನ್ನು ಪರಿಚಯಿಸಿದೆ. ಸರ್ಕಾರವು 2017-18ರಲ್ಲಿ 100 ಮತ್ತು 2018-19ರಲ್ಲಿ 100 ಶಾಲೆಗಳನ್ನು ಮಂಜೂರು ಮಾಡಿದೆ. ರಾಜ್ಯಾದ್ಯಂತ ಈ ಶಾಲೆಗಳಲ್ಲಿ 6ರಿಂದ 10ನೇ ತರಗತಿಯ 39,000 ವಿದ್ಯಾರ್ಥಿಗಳು ಅಭ್ಯಾಸ ನಡೆಸಿದ್ದಾರೆ.
ಎಂಎಎಂ ಶಾಲೆಗಳ ಸ್ಥಿತಿಗತಿ ಬಗ್ಗೆ ಪಟ್ಟಿ ಸಿದ್ಧ
ಈ ವಿಚಾರವಾಗಿ ಪ್ರತಿಕ್ರಿಯಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕ ರಾಘವೇಂದ್ರ ಟಿ.ಅವರು, ರಾಜ್ಯದಲ್ಲಿನ 22 ಶಾಲೆಗಳನ್ನು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮುಚ್ಚುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ. ಎಂಎಎಂ ಶಾಲೆಗಳ ಸ್ಥಿತಿಯ ಕುರಿತು ನಮ್ಮ ವರದಿಯನ್ನು ಆಧರಿಸಿ ಸರ್ಕಾರ ಒಂದಷ್ಟು ಶಿಫಾರಸುಗಳ ಸರಣಿ ಪಟ್ಟಿ ಮಾಡಿದೆ. 22 ಎಂಎಎಂ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಡಿಮೆ ಪ್ರವೇಶ ಇದೆ. ಅಲ್ಲಿ ಶಿಕ್ಷಕರ ಕೊರತೆ, ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳು ಇವೆ ಎಂದರು.
ಅಲ್ಲದೇ ಅಂತಹ ಶಾಲೆಗಳಿಗೆ ವಿದ್ಯಾರ್ಥಿಗಳ ನೋಂದಣಿಗೆ ಬೇಡಿಕೆ ಅಷ್ಟಾಗಿ ಇಲ್ಲ. ಹೀಗಾಗಿ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ಯಾವ ಶಾಲೆಗಳಿಗೆಹೆಚ್ಚಿನ ಬೇಡಿಕೆ ಇದಿಯೋ ಅಲ್ಲಿಗೆ ಕಡಿಮೆ ಪ್ರವೇಶಗಳು ಇರುವ ಶಾಲೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಿದ್ದೇವೆ ಎಂದು ಅವರು ತಿಳಿಸಿದರು.
ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಡಿಮೆ ದಾಖಲಾತಿ ಹಿನ್ನೆಲೆಯಲ್ಲಿ ಅಲ್ಲಿ ಕಾಯಂ ಶಿಕ್ಷಕರನ್ನು ನೇಮಿಸುವುದು ಪ್ರಯೋಜನಕಾರಿಯಲ್ಲ. ಆದ್ದರಿಂದ 22 ಶಾಲೆಗಳಲ್ಲಿ ಐದು ಅಥವಾ ಆರು ಶಾಲೆಗಳ ವಿದ್ಯಾರ್ಥಿಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಹೆಚ್ಚು ಬೇಡಿಕೆ ಇರುವ ಜಿಲ್ಲೆಗಳಿಗೆ ಸ್ಥಳಾಂತರಿಸಲು ಯೋಚನೆ ನಡೆದಿದೆ. ಇದರಿಂದ ಸರ್ಕಾರ ಭೊಕ್ಕಸಕ್ಕೆ ಉಂಟಾಗುತ್ತಿದ್ದ ತುಸು ನಷ್ಟದ ಪ್ರಮಾಣ ಕಡಿಮೆ ಆಗಲಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ 5-6 ಎಂಎಎಂ ಶಾಲೆ
ಒಟ್ಟು 22 ಶಾಲೆಗಳ ಪೈಕಿ ಐದು ಇಲ್ಲವೇ ಆರು ಶಾಲೆಗಳು ಬೆಂಗಳೂರಿನಲ್ಲಿವೆ. ಇನ್ನಿತರ ಶಾಲೆಗಳು ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇವೆ. ಇಂತಹ ಶಾಲೆಗಳಿಗೆ ಬೇಡಿಕೆ ಹೆಚ್ಚಿಸುವ ಮಾರ್ಗೋಪಾಯಗಳು ಏನಿವೆ ಎಂದು ಇಲಾಖೆ ಅನ್ವೇಷಿಸುತ್ತಿದೆ. ಇಂತಹ ಶಾಲೆಗಳ ನಿರ್ವಹಣೆಗೆ ಸುಮಾರು 100 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ರಾಘವೇಂದ್ರ ವಿವರಿಸಿದರು.
ರಾಜ್ಯದಲ್ಲಿ 200 ಶಾಲೆಗಳಲ್ಲಿನ ಶಿಕ್ಷಕರ ಹುದ್ದೆಗಳನ್ನು 1,600 ಕ್ಕೆ ಹೆಚ್ಚಿಸುವಂತೆ ಇಲಾಖೆಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ವರ್ಷ 600 ಶಿಕ್ಷಕರ ನೇಮಕ ಮಾಡಲಾಗಿದ್ದು, ಅದರಲ್ಲಿ ಸದ್ಯ 380 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 89 ಶಾಲೆಗಳಲ್ಲಿ ಮಾತ್ರವೇ ಖಾಯಂ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಅತಿಥಿ ಉಪನ್ಯಾಸಕರು ಇದ್ದಾರೆ ಎಂದು ತಿಳಿಸಿದರು.












Click it and Unblock the Notifications