2018 ಬಹುಶಃ ನನ್ನ ಕೊನೆಯ ಚುನಾವಣೆ: ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 17: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಬಹುಶಃ ನನ್ನ ಕೊನೆಯ ಚುನಾವಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 2013ರಲ್ಲೂ ಅವರು ಹೀಗೆ ಹೇಳಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
"ಮುಂದಿನ ಚುನಾವಣೆ ಬಹುಶಃ ನನಗೆ ಕೊನೆಯ ಚುನಾವಣೆ," ಎಂದು ಶನಿವಾರ ರಾಯಚೂರಿನಲ್ಲಿ ಸಿದ್ದರಾಮಯ್ಯ ವರದಿಗಾರರಿಗೆ ತಿಳಿಸಿದ್ದಾರೆ. ಆದರೆ ತಾವು ರಾಜಕೀಯದಲ್ಲಿ ಮುಂದುವರಿಯುತ್ತೇನೆ, ಚುನಾವಣೆಗೆ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ರೀತಿ 2013ರಲ್ಲೂ ಸಿದ್ದರಾಮಯ್ಯ ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ತಾವು ಚುನಾವಣೆಗೆ ನಿಲ್ಲುತ್ತಿರುವುದಾಗಿ ಅವರು ಹೇಳಿದ್ದಾರೆ.
"ಚುನಾವಣೆ ಮತ್ತು ರಾಜಕೀಯ ವ್ಯವಸ್ಥೆ ನೋಡಿದಾಗ ನನಗೆ ಇದೆಲ್ಲಾ ಸಾಕು ಅಂತ ಅನಿಸುತ್ತಿದೆ. ಆದರೆ ಬಿಜೆಪಿಯ ಕೋಮುವಾದಿ ರಾಜಕಾರಣ ನೋಡಿದರೆ ನನಗೆ ಚುನಾವಣೆಗೆ ನಿಲ್ಲಬೇಕು ಎಂದೆನಿಸುತ್ತದೆ. ಜತೆಗೆ ಚುನಾವಣೆಗೆ ನಿಲ್ಲುವಂತೆ ಹೈಕಮಾಂಡ್ ಕೂಡಾ ಹೇಳಿದೆ," ಎಂದಿದ್ದಾರೆ.
2018ರ ಚುನಾವಣೆಯನ್ನು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಸಿದ್ದರಾಮಯ್ಯನವರು ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದ್ದಾರೆ.
"ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಶಕ್ತಿ ನೀಡಿದ, ಮರು ಹುಟ್ಟು ನೀಡಿದ ಕ್ಷೇತ್ರ. ಹಾಗಾಗಿ ನಾನು ಇಲ್ಲೇ ನನ್ನ ರಾಜಕೀಯವನ್ನು ಕೊನೆಗೊಳಿಸಲು ಇಚ್ಛಿಸಿದ್ದೇನೆ," ಎಂದು ಅವರು ಹೇಳಿದ್ದಾರೆ.
ಲೋಕದಳ ಪಕ್ಷದಿಂದ ಕಣಕ್ಕಿಳಿದು ಸಿದ್ದರಾಮಯ್ಯ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶಿಸಿದ್ದರು. ಇಲ್ಲಿ ಐದು ಬಾರಿ ಗೆದ್ದ ಸಿದ್ದರಾಮಯ್ಯನವರು ಎರಡು ಬಾರಿ ಸೋತಿದ್ದಾರೆ. 2008ರಲ್ಲಿ ವರುಣಾ ಕ್ಷೇತ್ರ ರಚನೆಯಾದ ನಂತರ ಅವರು ಇಲ್ಲಿಂದ ಸ್ಪರ್ಧಿಸಿದ್ದರು. ಈ ಬಾರಿ ಇಲ್ಲಿ ತಮ್ಮ ಪುತ್ರ ಯತೀಂದ್ರರನ್ನು ಕಣಕ್ಕಿಳಿಸಲು ಸಿದ್ದರಾಮಯ್ಯ ಆಲೋಚಿಸಿದ್ದಾರೆ.












Click it and Unblock the Notifications