ಸತತ 7 ಗಂಟೆಗಳ ಗಾಯನ, ದಾಖಲೆ ಬರೆದ ಮಂತ್ರಾಲಯ
ರಾಯಚೂರು,ಮಾ.10: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಓರಿಸ್ಸಾ ರಾಜ್ಯದ ಜನರು, ನಿರಂತರವಾಗಿ ಏಳು ಗಂಟೆಗಳ ಕಾಲ ಕೇಳಿಬಂದ ಭಜನೆಯಲ್ಲಿ ಮುಳುಗಿದ ಮನಗಳು, ಭಾರತೀಯ ಪರಂಪರೆ ಉಳಿಸುವ ಹಾಗೂ ದಾಖಲೆಗೆ ಸೇರುವ ತವಕ, ಹರಿದಾಸ ಸಾಹಿತ್ಯದಲ್ಲಿ ಪಾರಂಗತರಾದ ಪಂಡಿತರ ಸಮಾಗಮ.
ಹೌದು ಮಂತ್ರಾಲಯದಲ್ಲಿ ಬುಧವಾರ ಶ್ರೀ ಯೋಗೀಂದ್ರ ಸಭಾಮಂಟಪದ ಮುಂಭಾಗದಲ್ಲಿ ಆಯೋಜಿಸಿದ್ದ ತೆಲುಗು ಬುಕ್ ಅಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಕಂಡು ಬಂದ ದೃಶ್ಯಗಳಿವು. ಇಲ್ಲಿ ನೆರೆದ 1800 ಮಂದಿ ಸತತವಾಗಿ ಏಳು ಗಂಟೆಗಳ ಕಾಲ ಹರಿದಾಸರು, ಆಂಜನೇಯ ದೇವರ ಕುರಿತು ರಚಿಸಿದ 108 ಹಾಡುಗಳನ್ನು ಹಾಡುವ ಮೂಲಕ ದಾಖಲೆ ನಿರ್ಮಿಸಿ ಹೊಸ ಭಾಷ್ಯ ಬರೆದಿದ್ದಾರೆ.[ಸಿಂಗಪುರ 'ಪುರಂದರ ನಮನ'ದಲ್ಲಿ ಹರಿದ ಭಕ್ತಿ ಸುಧೆ]

ತೆಲುಗು ಬುಕ್ ಅಫ್ ವರ್ಲ್ಡ್ ರೆಕಾರ್ಡ್ ಗಾಯನ ಕಾರ್ಯಕ್ರಮವು ಮಧ್ಯಾಹ್ನ ಒಂದರಿಂದ ರಾತ್ರಿ ೮ ರವರೆಗೆ ನಡೆಯಿತು. ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, 'ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ಹಾಗೂ ವರ್ಧಂತಿ (ಹುಟ್ಟುಹಬ್ಬ) ಅಂಗವಾಗಿ ಮಂತ್ರಾಲಯದಲ್ಲಿ ಮಾ.10 ರಿಂದ 15ರವರೆಗೆ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
'ಕಲಿಯುಗದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಸುಲಭ ಮಾರ್ಗ ಭಕ್ತಿಮಾರ್ಗ ನಾವು ಭಕ್ತಿಯಿಂದ ದೇವರ ನಾಮಗಳನ್ನು ಹಾಡಿದರೆ ಖಂಡಿತ ದೇವರು ನಮ್ಮನ್ನು ಹರಸುತ್ತಾನೆ. ಹರಿದಾಸ ಪರಂಪರೆ ಉಳಿಸುವುದಕ್ಕಾಗಿ ಗುರುಸಾರ್ವಭೌಮರು ದಾಸ ಸಾಹಿತ್ಯ ಪ್ರಾಜೆಕ್ಟ್ ನ್ನು ಕಳೆದ ಒಂದು ವರ್ಷದ ಹಿಂದೆ ಹುಟ್ಟು ಹಾಕಲಾಗಿತ್ತು. ಇದೀಗ ಇದು ಆಕಾಶದೆತ್ತರಕ್ಕೆ ಬೆಳೆದಿದೆ' ಎಂದರು.[ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು]
ಈ ಸಂದರ್ಭದಲ್ಲಿ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನಿರ್ದೇಶಕ ಅಪ್ಪಣಾಚಾರ್, ವಿದ್ವಾ ವಾದಿರಾಜಾಚಾರ್, ತೆಲುಗು ಬುಕ್ ಅಫ್ ವರ್ಲ್ಡ್ ರೆಕಾರ್ಡ್ ಅಧ್ಯಕ್ಷ ಚಿಂತಪಟ್ಲ ವೆಂಕಟಾಚಾರ್ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications