18 ತಿಂಗಳಲ್ಲಿ 6ಬಂದ್! ರಾಜ್ಯಕ್ಕಾದ ಲಾಭವಾದರೂ ಏನು ವಾಟಾಳರೇ?
ಕಳೆದ ಒಂದೂವರೆ ವರ್ಷದಲ್ಲಿ ಆರು ಬಂದ್ ಗೆ ಕರ್ನಾಟಕದ ಜನತೆ ಸಾಕ್ಷಿಯಾಗಿದ್ದಾರೆ. ಬಂದ್ ನಡೆಸಿದರೆನೇ ಸರಕಾರಕ್ಕೆ ಬಿಸಿ ತಟ್ಟುವುದು ಎನ್ನುವ ಕನ್ನಡ ಸಂಘಟನೆಯ ವಾಟಾಳ್ ನಾಗರಾಜ್ ಅವರ ನಿಲುವಿನಿಂದ, ರಾಜ್ಯಕ್ಕೆ ಆದ ಲಾಭವಾದರೂ ಏನು?
ಪಕ್ಕದ ಕೇರಳವನ್ನೂ ಮೀರಿಸುವಂತೆ ಕರ್ನಾಟಕದಲ್ಲಿ ಇತ್ತೀಚೆಗೆ ಬಂದ್, ಹರತಾಳದ ಪರ್ವ ಆರಂಭವಾಗಿದೆ. ಕಾವೇರಿ ಮತ್ತು ಮಹದಾಯಿ ನೀರಿನ ವಿಚಾರದಲ್ಲಿ ನಡೆದ ಈವರೆಗಿನ ಬಂದ್ ನಿಂದಾಗಿ ರಾಜ್ಯಕ್ಕಾದ ಲಾಭವಾದರೂ ಏನು?
ಕಳೆದ ಒಂದೂವರೆ ವರ್ಷದಲ್ಲಿ ಆರು ಬಂದ್ ಗೆ ಕರ್ನಾಟಕದ ಜನತೆ ಸಾಕ್ಷಿಯಾಗಿದ್ದಾರೆ. ಬಂದ್ ನಡೆಸಿದರೆನೇ ಸರಕಾರಕ್ಕೆ ಬಿಸಿ ತಟ್ಟುವುದು ಎನ್ನುವ ಕನ್ನಡ ಸಂಘಟನೆಯ ವಾಟಾಳ್ ನಾಗರಾಜ್ ಅವರ ನಿಲುವಿನಿಂದ, ರಾಜ್ಯಕ್ಕೆ ಏನಾದರೂ ಉಪಯೋಗವಾಗಿದೆಯೇ ಎನ್ನುವುದಕ್ಕೆ ವಾಟಾಳ್ ನಾಗರಾಜ್ ಅವರೇ ಉತ್ತರಿಸಬೇಕು.
ಎರಡ್ಮೂರು ತಿಂಗಳಿಗೊಮ್ಮೆ ಬಂದಿಗೆ ಕರೆ ನೀಡಿದರೆ ಯಾರು ತಾನೇ ಸ್ಪಂಧಿಸಲು ಸಾಧ್ಯ? ಅದಕ್ಕೋ ಏನೋ ಸೋಮವಾರ (ಜೂ 12) ಕರೆದ ಬಂದ್ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಕಡೆ ಸಂಪೂರ್ಣ ವಿಫಲವಾಗಿದೆ.
ಈ ಬಾರಿಯ ಬಂದ್ ಗೆ ಕನ್ನಡಪರ ಸಂಘಟನೆಗಳು ಕೂಡಾ ಏಕತೆ ತೋರಲಿಲ್ಲ. ವರ್ಷದ ಯಾವ ಯಾವ ದಿನ ಬಂದ್ ಗೆ ಕರೆನೀಡುತ್ತೀರಾ ಎಂದು ಮೊದಲೇ ತಿಳಿಸಿ ಬಿಡಿ, ಅದಕ್ಕೆ ಪೂರ್ವತಯಾರಿ ನಾವು ಮಾಡಿಕೊಳ್ಳುತ್ತೇವೆ ಎಂದು ವಾಟಾಳ್ ನಾಗರಾಜ್ ಅವರನ್ನು ಸಾಮಾಜಿಕ ತಾಣದಲ್ಲಿ ಕಿಚಾಯಿಸಲಾಗುತ್ತಿದೆ.
ಬಂದ್ ಎಂದರೆ ಅದರ ಬಿಸಿ ಕೇಂದ್ರ ಅಥವಾ ರಾಜ್ಯ ಸರಕಾರಕ್ಕೆ ಮುಟ್ಟುವಂತಿರಬೇಕು. ಕಳೆದ ಒಂದೂವರೆ ವರ್ಷದಲ್ಲಿ ಕರೆಯಲಾದ ಬಂದ್ ನಿಂದ ರಾಜ್ಯ ಅಥವಾ ಕೇಂದ್ರ ಸರಕಾರದಿಂದ ಏನಾದರೂ ಪೂರಕ ಪ್ರತಿಕ್ರಿಯೆ ಬಂದಿದೆಯೇ ಎನ್ನುವುದನ್ನು ಪ್ರಮುಖವಾಗಿ ವಾಟಾಳ್ ನಾಗರಾಜ್ ಇನ್ನಾದರೂ ಅರ್ಥ ಮಾಡಿಕೊಂಡರೆ ಒಳ್ಳೆಯದು.
In Pics : ಕರ್ನಾಟಕ ಬಂದ್ ಗೆ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ
ಸತತವಾಗಿ ನಮ್ಮ ರಾಜ್ಯಕ್ಕೆ ನೀರಿನ ವಿಚಾರದಲ್ಲಿ ಹಿನ್ನಡೆಯಾಗುತ್ತಿದೆ ಎನ್ನುವುದು ಒಪ್ಪಿಕೊಳ್ಳುವ ವಿಚಾರ. ಆದರೆ, ಇಷ್ಟೊಂದು ಬಂದ್ ಗಳನ್ನು ಮಾಡಿದ ಮೇಲೂ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡಿದೆಯೇ? ಇಷ್ಟೊಂದು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಇಲ್ಲಿಂದ ಆಯ್ಕೆಯಾದರೂ ಕೇಂದ್ರ ಸ್ಪಂದಿಸಿದೆಯೇ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ.

ಕೋಟ್ಯಾಂತರ ರೂಪಾಯಿ ನಷ್ಟ
ಒಂದು ದಿನದ ಬಂದ್ ನಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗುವುದು ಒಂದೆಡೆಯಾದರೆ, ಕೋಟ್ಯಾಂತರ ರೂಪಾಯಿ ನಷ್ಟಇನ್ನೊಂದೆಡೆ. ನಮ್ಮ ಹೋರಾಟ ರೈತರ ಪರ, ರಾಜ್ಯದ ನೀರಿನ ಸಮಸ್ಯೆಯ ಬಗ್ಗೆ ಎನ್ನುವ ವಾಟಾಳ್ ನಾಗರಾಜ್ ಅವರ ಕಳಕಳಿ ಒಪ್ಪುವಂತಾದರೂ, ಪದೇ ಪದೇ ಬಂದ್ ಗೆ ಕರೆದು, ಮುಂದಿನ ದಿನ ನಮ್ಮ ರಾಜ್ಯಕ್ಕೆ 'ಬಂದ್ ಕರ್ನಾಟಕ' ಎನ್ನುವ ಅಪವಾದ ಬರದೇ ಇದ್ದರೆ ಸಾಕು.

ಕಳಸಾ - ಬಂಡೂರಿ, ಏಪ್ರಿಲ್ 18, 2016
ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಗಾಗಿ ಏಪ್ರಿಲ್ 18, 2016ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ನರಗುಂದ, ನವಲಗುಂದ, ಬೆಟಗೇರಿ, ಮುಂಡರಗಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕೂಡಲೇ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವುದಕ್ಕಾಗಿ ಬಂದ್ ಗೆ ಕರೆನೀಡಲಾಗಿತ್ತು.

ನ್ಯಾಯಾಧೀಕರಣ ತೀರ್ಪಿನ ವಿರುದ್ದ ಬಂದ್, ಜುಲೈ 28,2016
ಜುಲೈ 28,2016 ರಂದು ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದವು. ಕಳಸಾ ಬಂಡೂರಿ ನ್ಯಾಯಾಧೀಕರಣ ತೀರ್ಪಿನ ವಿರುದ್ದ ಬಂದ್ ಕರೆ ನೀಡಲಾಗಿತ್ತು.

ಕಾವೇರಿ ಕಣಿವೆ ಭಾಗದಲ್ಲಿ ಬಂದ್, ಸೆಪ್ಟಂಬರ್ 9,2016
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸೆಪ್ಟಂಬರ್ 9,2016ರಂದು ಕಾವೇರಿ ಕಣಿವೆ ಭಾಗದಲ್ಲಿ ಬಂದ್ಗೆ ಕರೆ ನೀಡಲಾಗಿತ್ತು. ಸುಪ್ರೀಂಕೋರ್ಟ್ ತಮಿಳುನಾಡಿಗೆ ಪ್ರತಿದಿನ 15,000 ಕ್ಯೂಸೆಕ್ ನೀರು ಹರಿಸಬೇಕು ಎಂದು ಆದೇಶ ನೀಡಿತ್ತು. ಎಲ್ಲಾ ಕನ್ನಡಪರ ಸಂಘಟನೆಗಳು ಕರೆನೀಡಿದ್ದ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು.

ಕಳಸಾ-ಬಂಡೂರಿ, ಸೆಪ್ಟಂಬರ್ 26, 2016
ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಒಕ್ಕೂಟ ಸೆಪ್ಟಂಬರ್ 26, 2016ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದವು. ಆಟೋ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕರು ಬಂದ್ಗೆ ಬೆಂಬಲ ನೀಡಿದ್ದವು, ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶ, ಏಪ್ರಿಲ್ 7, 2017
ಕುಡಿಯುವ ನೀರಿನ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಏಪ್ರಿಲ್ 7, 2017ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ, ಕುಡಿಯುವ ನೀರಿನ ಯೋಜನೆಗಳನ್ನು ತಕ್ಷಣ ಜಾರಿಗೆ ತರಬೇಕು, ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಬಂದ್ ಗೆ ಕರೆನೀಡಲಾಗಿತ್ತು.

ಹಲವು ಬೇಡಿಕೆ ಒತ್ತಾಯಿಸಿ, ಜೂನ್ 12, 2017
ಜೂನ್ 12, 2017ರಂದು ಮತ್ತೆ ಕರ್ನಾಟಕ ಬಂದ್ ಗೆ ಕೆಲವು ಕನ್ನಡಪರ ಸಂಘಟನೆಗಳು, ಕಾರ್ಮಿಕ ಒಕ್ಕೂಟಗಳು ಬಂದ್ ಗೆ ಕರೆನೀಡಿವೆ. ಬಂದ್ ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.












Click it and Unblock the Notifications