ಚಿಕ್ಕಮಗಳೂರು ದನದ ಕೊಟ್ಟಿಗೆಯಲ್ಲಿ 18 ಕೆಜಿ ಚಿನ್ನ!
ಕೋಲಾರ, ಜೂ. 19 : ಬೆಂಗಳೂರಿನ ಓಂ ಜ್ಯುವೆಲರ್ಸ್ ಮಾಲೀಕ ರಾಜೇಶ್ ಭಟ್ ಅವರಿಗೆ ಸೇರಿದ 18 ಕೆಜಿ ಚಿನ್ನವನ್ನು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಭಟ್ ಅವರ ಕಾರು ಚಾಲಕ ಮತ್ತು ಪ್ರಕರಣದ ಪ್ರಮುಖ ಆರೋಪಿ ಬಾಬುವಿಗಾಗಿ ಹುಡುಕಾಟ ಮುಂದುವರೆದಿದೆ.
ಜೂನ್ 6ರಂದು ರಾಜೇಶ್ ಭಟ್ ತಮ್ಮ ಸ್ನೇಹಿತರ ಜೊತೆ ಕೋಲ್ಕತ್ತಾದಿಂದ 18 ಕೆಜಿ ಚಿನ್ನವನ್ನು ತರುತ್ತಿದ್ದರು. ಕೋಲಾರ ಸಮೀಪದ ಅಡಿಗಾಸ್ ಹೋಟೆಲ್ನಲ್ಲಿ ಊಟಕ್ಕೆ ತೆರಳಿದ್ದಾಗ, ಕಾರು ಚಾಲಕ ಬಾಬು ಚಿನ್ನದೊಂದಿಗೆ ಪರಾರಿಯಾಗಿದ್ದ. ಮೂರು ದಿನಗಳ ಬಳಿಕ ಕಾರು ಪತ್ತೆಯಾಗಿತ್ತು. [ಚಿನ್ನ ಕಳ್ಳ ಸಾಗಣೆಯ ಹೊಸ ಮಾರ್ಗಗಳು ಯಾವವು!]
ಕೋಲಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಚಿಕ್ಕಮಗಳೂರು ಪೊಲೀಸರ ಸಹಕಾರದಿಂದ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಕೋಲಾರ ಪೊಲೀಸರು, ಶಿವಕುಮಾರ್, ವಿಶ್ವನಾಥ್, ಮನ್ಸೂರ್, ಅಮ್ಜದ್ ಎಂಬುವವರನ್ನು ಬಂಧಿಸಿದ್ದಾರೆ. [ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]
ಚಿಕ್ಕಮಗಳೂರು ಹೊರವಲಯದ ದನದ ಕೊಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದನದ ಕೊಟ್ಟಿಗೆ ಅಮ್ಜದ್ ಅವರಿಗೆ ಸೇರಿದ್ದಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಬಾಬು ಉಳಿದ ಚಿನ್ನದ ಜೊತೆ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. [ಚಿನ್ನದ ದರ ಎಷ್ಟಿದೆ?]
ಎಲ್ಲರೂ ಸೇರಿ ಸಂಚು ರೂಪಿಸಿದ್ದರು : ಬಂಧಿತ ಶಿವಕುಮಾರ್ ಮತ್ತು ರಾಜೇಶ್ ಭಟ್ ಕಾರು ಚಾಲಕ ಬಾಬು ಸೇರಿಕೊಂಡು ಈ ದರೋಡೆ ಸಂಚು ರೂಪಿಸಿದ್ದರು. ಶಿವಕುಮಾರ್ ಅವರೇ ಬಾಬುವನ್ನು ರಾಜೇಶ್ ಬಳಿ ಚಾಲಕರಾಗಿ ಸೇರಿಸಿದ್ದರು. ಅಂದಿನಿಂದ ರಾಜೇಶ್ ಚಲನವಲನಗಳ ಶಿವಕುಮಾರ್ಗೆ ಮಾಹಿತಿ ಲಭ್ಯವಾಗುತ್ತಿತ್ತು.
ಜೂನ್ 6ರಂದು ರಾಜೇಶ್ ಭಟ್ ಕೋಲ್ಕತ್ತಾದಿಂದ 18 ಕೆ.ಜಿ.ಚಿನ್ನವನ್ನು ತೆಗೆದುಕೊಂಡು ಬರುತ್ತಿರುವುದು ಶಿವಕುಮಾರ್ಗೆ ಗೊತ್ತಿತ್ತು. ಅಡಿಗಾಸ್ ಹೋಟೆಲ್ಬಳಿ ಕಾರು ನಿಲ್ಲಿಸಿದಾಗ ತನಗೆ ಊಟ ಬೇಡವೆಂದು ಬಾಬು ಕಾರಿನಲ್ಲಿ ಉಳಿದುಕೊಂಡಿದ್ದ. ರಾಜೇಶ್ ಮತ್ತು ಆತನ ಸ್ನೇಹಿತರು ಊಟಕ್ಕೆ ಹೋಗುತ್ತಿದ್ದಂತೆ ಕಾರಿನೊಂದಿಗೆ ಪರಾರಿಯಾಗಿದ್ದ.
ಸ್ವಲ್ಪ ದೂರ ಹೋದ ನಂತರ ಕಾರನ್ನು ನಿಲ್ಲಿಸಿ ಶಿವಕುಮಾರ್ ಅವರು ತಂದ ಕಾರಿಗೆ ಚಿನ್ನವನ್ನು ಹಾಕಿಕೊಂಡು ಪರಾರಿಯಾಗಿದ್ದರು. ಅಲ್ಲಿಂದ ಚಿಕ್ಕಮಗಳೂರಿನಗೆ ಹೋಗಿ ಅಮ್ಜದ್ ಅವರ ದನದ ಕೊಟ್ಟಿಗೆಯಲ್ಲಿ ಅದನ್ನು ಇಟ್ಟಿದ್ದರು. ಬಾಬು ಅರ್ಧ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದ. ಉಳಿದ ಆರೋಪಿಗಳು ಚಿಕ್ಕಮಗಳೂರಿನ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದರು.