ಜನತಾ ದರ್ಶನ: 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, 50% ಇತ್ಯರ್ಥ
ಬೆಂಗಳೂರು, ಅಕ್ಟೋಬರ್ 23: ಸಿಎಂ ಕುಮಾರಸ್ವಾಮಿ ಅವರು ಜನಪರ ಎನಿಸಿಕೊಳ್ಳಲು ಅವರ 'ಜನತಾ ದರ್ಶನ' ಕಾರ್ಯಕ್ರಮ ಪ್ರಮುಖ ಕಾರಣ.
ಕುಮಾರಸ್ವಾಮಿ ಅವರು ಈ ಮೊದಲು 2006ರಲ್ಲಿ ಮುಖ್ಯಮಂತ್ರಿ ಆದಾಗ ಅವರಿಗೆ ಅತ್ಯುತ್ತಮ ಹೆಸರು ತಂದು ಕೊಟ್ಟಿದ್ದು 'ಜನತಾದರ್ಶನ' ಕಾರ್ಯಕ್ರಮ. ಇದು ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆಗೆ ಕಾರಣವಾಗಿತ್ತು.
ಮತ್ತೆ ಸಿಎಂ ಆದಾಗಲೂ ಅವರು ಜನತಾದರ್ಶನ ಕಾರ್ಯಕ್ರಮವನ್ನು ಮುಂದುವರೆಸಿದ್ದು, ಪ್ರತಿ ಶನಿವಾರ ತಪ್ಪದೆ ಜನತಾದರ್ಶನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
ಮೈತ್ರಿ ಸರ್ಕಾರಕ್ಕೆ 150 ದಿನ ಪೂರೈಸಿದ ಕಾರಣ ಇಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಜನತಾದರ್ಶನ ಕಾರ್ಯಕ್ರಮದ ಸಫಲತೆಯ ಬಗ್ಗೆ ಸಿಎಂ ಅವರು ಮಾಹಿತಿ ನೀಡಿದ್ದಾರೆ.

ಈ ವರೆಗೆ 17,723 ಮನವಿಗಳು ಸ್ವೀಕಾರ
ಜೂನ್ 1 ರಿಂದ ಈ ವರೆಗೆ ಸಾರ್ವಜನಿಕರಿಂದ 17,723 ಮನವಿಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ ಶೇ 50 ದೂರುಗಳನ್ನು ಈಗಾಗಲೇ ಇತ್ಯರ್ಥ ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಜಿಲ್ಲಾಮಟ್ಟದಲ್ಲಿ ಜನತಾದರ್ಶನ ನಡೆಸುವಂತೆ ಸೂಚನೆ
ಬೆಂಗಳೂರಿನಲ್ಲಿ ಮಾತ್ರವೇ ನಡೆಯುತ್ತಿದ್ದ ಜನತಾದರ್ಶನ ಕಾರ್ಯಕ್ರಮವು ಎಲ್ಲ ಜಿಲ್ಲೆಗಳಿಗೂ ತಲುಪಬೇಕೆಂಬ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಹಲವು ಜಿಲ್ಲಾಧಿಕಾರಿಗಳು ಕ್ರಮ ವಹಿಸಿದ್ದಾರೆ.

ಅಧಿಕಾರಿಗಳ ವಿಶೇಷ ತಂಡ
ಜನತಾದರ್ಶನ ಕಾರ್ಯಕ್ರಮ ನಿರ್ವಹಿಸಲು, ದೂರುಗಳನ್ನು ನಿರ್ವಹಿಸಲು, ದೂರುಗಳ ಇತ್ಯರ್ಥಕ್ಕೆಂದು ವಿಶೇಷ ತಂಡವನ್ನು ರಚಿಸಲಾಗಿದೆ. ಜನತಾದರ್ಶನದ ದೂರುಗಳಿಗೆ ವಿಶೇಷ ಒತ್ತು ನೀಡಲು ಸೂಚಿಸಲಾಗಿದೆ.

ಉದ್ಯೋಗ ಮೇಳ ಯಶಸ್ವಿ
ಬೆಂಗಳೂರಿನಲ್ಲಿ ಸೆಪ್ಟೆಂಬರ್ ಕೊನೆಯ ವಾರ ಉದ್ಯೋಗ ಮೇಳ ಯಶಸ್ವಿಯಾಗಿ ಏರ್ಪಡಿಸಲಾಯಿತು. ಎಲ್ಲ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಏರ್ಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಎಲ್ಲ ಜಿಲ್ಲೆಗಳಿಗೂ ಭೇಟಿ
ಈ ವರೆಗೆ 10ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿದ್ದು, 6 ಜಿಲ್ಲಾಡಳಿತಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಾಗುವುದು












Click it and Unblock the Notifications