ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರಕಾರದಿಂದ 175 ಕೋಟಿ ರುಪಾಯಿ ಅನುದಾನ
ಬೆಂಗಳೂರು, ಅಕ್ಟೋಬರ್ 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸಚಿವ ಟಿ. ಬಿ. ಜಯಚಂದ್ರ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
93 ಮಂದಿಗೆ ಬಿಡುಗಡೆ ಭಾಗ್ಯ
ಬೆಂಗಳೂರಿನ 41, ಮೈಸೂರಿನ 16, ಬೆಳಗಾವಿಯ ಐದು ಹಾಗೂ ಕಲಬುರಗಿಯ ನಾಲ್ಕು, ವಿಜಯಪುರದ ಏಳು, ಬಳ್ಳಾರಿಯ ಒಂಬತ್ತು ಹಾಗೂ ಧಾರವಾಡದ ಮೂವರು ಸನ್ನಡತೆಯಿಂದ ನಡೆದುಕೊಂಡ ಕೈದಿಗಳೂ ಸೇರಿದಂತೆ ಒಟ್ಟು 93 ಮಂದಿಗೆ ಬಿಡುಗಡೆ ಭಾಗ್ಯ ಕಲ್ಪಿಸಲು ನಿರ್ಧರಿಸಲಾಗಿದೆ.
ಮಹಾಮಸ್ತಕಾಭಿಷೇಕ
ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ 175 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ. ನವೆಂಬರ್ 4 ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಸಭೆಯಲ್ಲಿ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಕುರಿತು ಅಂತಿಮ ತೀರ್ಮಾನ.

ಶೀತಲ ಗೃಹ ಮಾರ್ಪಾಡು
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರಗಿ, ಬಾಗಲಕೋಟೆ, ವಿಜಯಪುರದಲ್ಲಿ ಏಳು ಉಗ್ರಾಣಗಳಲ್ಲಿ ಶೇಕಡಾ 40 ಸ್ಥಳವನ್ನು ಶೀತಲ ಗೃಹಗಳಾಗಿ ಮಾರ್ಪಾಡು ಮಾಡಲು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಇವುಗಳ ಕಾರ್ಯಾಚರಣೆ ಹಾಗೂ ಕಾರ್ಯ ನಿರ್ವಹಣೆಗೆ ಟೆಂಡರ್ ಆಹ್ವಾನಿಸಲು ಆಡಳಿತಾತ್ಮಕ ಅನುಮೋದನೆ.
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ
ರೈತರ ಸಹಭಾಗಿತ್ವದಲ್ಲಿ ಹೊಸ ಸಂಸ್ಥೆಯನ್ನು ಸ್ಥಾಪಿಸಿ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗುವಂತೆ ಮಾಡಲು ಯೋಜನಾ ಸಮಿತಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಹಾಗೂ ರೈತ ಉತ್ಪಾದಕರ ಸಂಸ್ಥೆಗಳಿಗೆ ಪೂರಕ ಅವಕಾಶ ಕಲ್ಪಿಸಲು ಆಡಳಿತಾತ್ಮಕ ಅನುಮೋದನೆ.
ಪಶು ವೈದ್ಯರ ನೇಮಕಕ್ಕೆ ಸಮ್ಮತಿ
ಹೈದರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಪಶು ವೈದ್ಯಾಧಿಕಾರಿಗಳ 126 ಹುದ್ದೆಗಳನ್ನು ಭರ್ತಿ ಮಾಡಲು ಅನುವಾಗುವಂತೆ ಹೈದರಾಬಾದ್ - ಕರ್ನಾಟಕ ಸ್ಥಳೀಯ ವೃಂದ ವಿಶೇಷ ನೇಮಕಾತಿ ನಿಯಮ 2017ಕ್ಕೆ ಸಮ್ಮತಿ.
ಆವರ್ತ ನಿಧಿಯಲ್ಲಿ ಬಿಡುಗಡೆಯಾದ ಹಣ ಮನ್ನಾ
ತೋಟಗಾರಿಕಾ ಉತ್ಪನ್ನಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿತವಾದ ಸಂದರ್ಭದಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಲು ಆವರ್ತ ನಿಧಿಯಿಂದ ಬಿಡುಗಡೆಯಾದ ಹಣದಲ್ಲಿ 19.93 ಕೋಟಿ ರುಪಾಯಿ ಮನ್ನಾ ಮಾಡಲು ಒಪ್ಪಿಗೆ.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ
ಕಾರ್ಮಿಕ ಇಲಾಖೆಯಲ್ಲಿರುವ ವಿವಿಧ ಯೋಜನೆಗಳನ್ನು ವಿಲೀನಗೊಳಿಸಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಕಾರ್ಮಿಕ ಬಂಧು ಮುಖಾಂತರ ಅನುಷ್ಠಾನಗೊಳಿಸಲು ಒಪ್ಪಿಗೆ.
ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ-2017
ತೃತೀಯ ಲಿಂಗಿಗಳನ್ನು ಮುಖ್ಯ ವಾಹಿನಿಗೆ ತರಲು ಹಾಗೂ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯ ನೀತಿ-2017 ಜಾರಿಗೆ ತರಲು ಅನುಮೋದನೆ. ಈ ನೀತಿಯಲ್ಲಿ ಸರಕಾರಿ ಹಾಗೂ ಶಿಕ್ಷಣ ಒಳಗೊಂಡಂತೆ ಎಲ್ಲೆಡೆ ಸಮಾನ ಸೌಲಭ್ಯ ಕಲ್ಪಿಸಲು ಸಮ್ಮತಿ.
ಒಳಚರಂಡಿ ವ್ಯವಸ್ಥೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ 1886 ಕೋಟಿ ರುಪಾಯಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿತ್ತು. ಆ ನಂತರ ಯೋಜನಾ ವೆಚ್ಚವನ್ನು 1500 ಕೋಟಿ ರುಪಾಯಿಗೆ ಮಿತಿಗೊಳಿಸಿ, ಉಳಿಕೆ ಹಣವನ್ನು ಜಲ ಮಂಡಲಿ ಮತ್ತು ಇತರ ಸೌಕರ್ಯಕ್ಕಾಗಿ ಬಳಸಲು ಸೂಚಿಸಿ ಆಡಳಿತಾತ್ಮಕ ಅನುಮೋದನೆ.
100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ 18.75 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
ಮೂಲ ಒಪ್ಪಂದ ತಿದ್ದುಪಡಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಂದರು ಭೂಮಿಯನ್ನು ಅದರ ಚಟುವಟಿಕೆಗಳಿಗೆ ಹಾಗೂ ಲಂಗರು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಮೂಲ ಒಪ್ಪಂದದ ಪತ್ರದ ಕೆಲವು ಕಂಡಿಕೆಗಳನ್ನು ತಿದ್ದುಪಡಿ ಹಾಗೂ ಸೇರ್ಪಡೆ ಮಾಡಲು ಸಮ್ಮತಿ.
ವಸತಿ ಸಮುಚ್ಚಯ ನಿರ್ಮಾಣ
ಬೆಂಗಳೂರಿನ ಜೀವನಬಿಮಾನಗರದಲ್ಲಿ 27.50 ಕೋಟಿ ರುಪಾಯಿ ವೆಚ್ಚದಲ್ಲಿ ಎ ಗುಂಪಿನ ಅಧಿಕಾರಿಗಳ ನೂತನ ವಸತಿ ಗೃಹಗಳ ಸಮುಚ್ಚಯವನ್ನು ನಿರ್ಮಿಸಲು ಸಂಪುಟ ಅನುಮೋದನೆ.












Click it and Unblock the Notifications