ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ: ಈ ಸ್ಥಳ ಭಾರಿ ಅಪಾಯಕಾರಿ! ಇಲ್ಲಿ ನಡೆದಿವೆ 172 ಅಪಘಾತಗಳು
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅಪಘಾತಗಳ ರಸ್ತೆಯಾಗಿ ಮಾರ್ಪಡುತ್ತಿದೆ. ಜನವರಿಯಿಂದ ಇದುವರೆಗೂ ಈ ಹೆದ್ದಾರಿಯಲ್ಲಿ 132 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಉದ್ಘಾಟನೆ ಮಾಡಿದ ದಿನದಿಂದ ಇದುವರೆಗೆ 100 ಅಪಘಾತಗಳು ಸಂಭವಿಸಿವೆ. ಇವು ಸಾವು-ನೋವಿಗೆ ಕಾರಣವಾಗಿರುವ ಅಪಘಾತಗಳ ಸಂಖ್ಯೆ.
ವರದಿಯ ಪ್ರಕಾರ, ಈ ಹೆದ್ದಾರಿಯಲ್ಲಿ ಈವರೆಗೆ 570 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು 60 ಮಂದಿ ಪ್ರಾಣಕಳೆದುಕೊಂಡಿದ್ದರೆ, 52 ಜನರು ತೀವ್ರವಾಗಿ ಗಾಯಗೊಂಡಿದ್ದು, 279 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಗಳನ್ನು ಕಡಿಮೆ ಮಾಡಲು ಪೊಲೀಸರು ಕೂಡ ಪ್ರಯತ್ನ ಮಾಡುತ್ತಿದ್ದು, ವೇಗಮಿತಿಯನ್ನು ಕಡಿಮೆ ಮಾಡಲು ಮನವಿ ಮಾಡಿದ್ದಾರೆ.

ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಅಪಘಾತಗಳನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ರಸ್ತೆ ದಾಟಲು ಸಮರ್ಪಕ ವ್ಯವಸ್ಥೆ ಇಲ್ಲ, ಈಗ ಹಳ್ಳಿಗಳ ವ್ಯಾಪ್ತಿಯಲ್ಲಿ ರಸ್ತೆ ದಾಟಲು ಸ್ಕೈವಾಕರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಇನ್ನು ರಸ್ತೆಗಳಲ್ಲಿ ಸ್ಪೀಡ್ ರಾಡಾರ್ ಗನ್ಗಳನ್ನು ಅಳವಡಿಸಲು ಕೂಡ ಮುಂದಾಗಿದೆ.
ಹೆಚ್ಚಿನ ಗಸ್ತು ವಾಹನಗಳನ್ನು ನಿಯೋಜಿಸುವುದು, ಸೂಚನಾ ಫಲಕಗಳನ್ನು ಹೆಚ್ಚಿಸುವುದು ಮತ್ತು ಸ್ಪೀಡ್ ರಾಡಾರ್ ಗನ್ಗಳು ಮತ್ತು ಇತರ ಸಾಧನಗಳೊಂದಿಗೆ ಗಸ್ತು ಅಧಿಕಾರಿಗಳನ್ನು ಸಜ್ಜುಗೊಳಿಸುವುದು ಸೇರಿದಂತೆ ಅಪಘಾತಗಳು ಮತ್ತು ಸಾವುಗಳನ್ನು ಕಡಿಮೆ ಮಾಡುವ ದಾರಿಗಳನ್ನು ಅಧಿಕಾರಿಗಳು ಹುಡುಕುತ್ತಿದ್ದಾರೆ.
ಈ ಸ್ಥಳದಲ್ಲಿ ಹೆಚ್ಚಿನ ಅಪಘಾತಗಳು!
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ಚನ್ನಪಟ್ಟಣ-ಮಂಡ್ಯ ವಿಭಾಗದಲ್ಲಿ. ಇದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದು, ಜೂನ್ 30ರವರೆಗೆ ಇದೇ ಭಾಗದಲ್ಲಿ 172 ಅಪಘಾತಗಳು ಸಂಭವಿಸಿದ್ದು 49 ಜನ ಮೃತಪಟ್ಟಿದ್ದಾರೆ. ಇದೇ ಭಾಗದಲ್ಲಿ ಅಪಘಾತ ಹೆಚ್ಚಾಗಲು ಯಾವುದೇ ನಿರ್ದಿಷ್ಟ ಕಾರಣ ಇಲ್ಲದೇ ಇದ್ದರೂ, ಈ ಮಾರ್ಗದಲ್ಲಿ ಓಡಾಡುವ ಸವಾರರು ಎಚ್ಚರಿಕೆ ವಹಿಸಬೇಕಾಗಿದೆ.
ಹೆದ್ದಾರಿಯಲ್ಲಿ ಸಮಸ್ಯೆಗಳಿವೆ ಎಂದ ಅಲೋಕ್ ಕುಮಾರ್
ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ಎಕ್ಸ್ಪ್ರೆಸ್ವೇಯಲ್ಲಿ ರಸ್ತೆ ಬಳಕೆದಾರರ ಸುರಕ್ಷತೆಗೆ ಅಡ್ಡಿಯುಂಟುಮಾಡುವ ಸಮಸ್ಯೆಗಳಿವೆ ಎಂದು ಹೇಳಿದ್ದಾರೆ. "ಹೆದ್ದಾರಿಯಲ್ಲಿ ಕೆಲವು ಸಮಸ್ಯೆಗಳಿವೆ, ಸೂಚನೆಗಳನ್ನು ಹೊಂದಿರುವ ಫಲಕಗಳು ಸಾಕಾಗುವುದಿಲ್ಲ. ಈ ಎಕ್ಸ್ಪ್ರೆಸ್ವೇಯಂತಹ ಹೆಚ್ಚಿನ ವೇಗದ ಹೆದ್ದಾರಿಗಳಲ್ಲಿ ನಿರಂತರವಾಗಿ ಫಲಕಗಳನ್ನು ಹಾಕಿರಬೇಕು, ಈ ರಸ್ತೆಯಲ್ಲಿ ಅದನ್ನು ಮಾಡಿಲ್ಲ" ಎಂದು ತಿಳಿಸಿರುವುದಾಗಿ ಡಿಹೆಚ್ ವರದಿ ಮಾಡಿದೆ.
ಅಪಘಾತಗಳಿಗೆ ರಸ್ತೆಯ ಲೋಪಗಳ ಜೊತೆಗೆ ಸವಾರರ ನಿರ್ಲಕ್ಷ್ಯ ಕೂಡ ಕಾರಣವಾಗಿದೆ. ರಸ್ತೆಗಳ ಏರಿಳಿತದ ಬಗ್ಗೆ ಬಳಕೆದಾರರ ನಿರ್ಲಕ್ಷ್ಯವೂ ಕಾರಣ ಎಂದು ಅವರು ವಿವರಿಸಿದ್ದಾರೆ. ಆದರೂ, ದೇಶದ ಇತರೆ ಹೆದ್ದಾರಿಗಳಿಗೆ ಹೋಲಿಕೆ ಮಾಡಿದರೆ, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಅಪಘಾತಗಳ ಪ್ರಮಾಣ ಕಡಿಮೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಮುಂಬೈ-ಪುಣೆ ನಡುವಿನ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿದೆ. ಆರಂಭದಲ್ಲಿ ಜನ ಹೆದ್ದಾರಿಗಳ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿರಲಿಲ್ಲ, ಆದರೆ ಕಾಲಾನಂತರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ರಾಜ್ಯ ಪೊಲೀಸರು, ದೇಶದ ಇತರ ಎಕ್ಸ್ಪ್ರೆಸ್ಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಎಲ್ಲವನ್ನು ನೋಡಿದ ಬಳಿಕ ಈ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಧರಿಸಲಾಗುತ್ತದೆ.
ವೇಗವಾಗಿ ವಾಹನ ಚಲಾಯಿಸಿದರೆ ದಂಡ!
ಎರಡು ಟೋಲ್ ಕೇಂದ್ರಗಳ ನಡುವೆ ವಾಹನಗಳ ವೇಗವನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ನಿಯಮ ಉಲ್ಲಂಘಿಸಿದವರನ್ನು ಹತ್ತಿರದ ಟೋಲ್ ಪ್ಲಾಜಾದಲ್ಲಿ ತಡೆದು ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಅನುವು ಮಾಡಿಕೊಡಲು ಎಕ್ಸ್ಪ್ರೆಸ್ವೇಯಲ್ಲಿ ವಿಭಾಗೀಯ ವೇಗ ಪತ್ತೆ ವ್ಯವಸ್ಥೆಗಳನ್ನು ನಿಯೋಜಿಸಲು ಯೋಚಿಸುತ್ತಿದ್ದಾರೆ.
ಪೊಲೀಸರು ಹ್ಯಾಂಡ್ಹೆಲ್ಡ್ ರೇಡಾರ್ ಸ್ಪೀಡ್ ಗನ್ಗಳನ್ನು ಹೊಂದಿದ್ದು ಅದು ವೇಗದ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯುತ್ತದೆ ಮತ್ತು ಚಲನ್ಗಳನ್ನು ನೀಡುತ್ತದೆ. ಸೋಮವಾರದಿಂದ ರಾಮನಗರ ಪೊಲೀಸರು ಜಿಲ್ಲೆಯ ಮೂಲಕ ಹಾದು ಹೋಗುವ ಎಕ್ಸ್ಪ್ರೆಸ್ವೇಯಲ್ಲಿ ರಾಡಾರ್ ಸ್ಪೀಡ್ ಗನ್ಗಳನ್ನು ಬಳಸಲು ಪ್ರಾರಂಭಿಸಲಾಗಿದೆ.












Click it and Unblock the Notifications