ಬಹಮನಿ ಉತ್ಸವ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಖರ್ಗೆ
ಕಲಬುರಗಿ, ಫೆಬ್ರವರಿ 15: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಸೇರಿಸಿಕೊಂಡು ಉಸ್ತುವಾರಿ ಸಚಿವರು ಬಹಮನಿ ಉತ್ಸವ ಮಾಡುತ್ತಾ ಇದ್ದಾರೆ. ಇದರಲ್ಲಿ ವಿವಾದ ಮಾಡುವ ಅಗತ್ಯವಾದರೂ ಏನಿದೆ ಎಂದು ಕಾಂಗ್ರೆಸ್ ನ ನಾಯಕ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಗುರುವಾರ ಮಾಧ್ಯಮದವರನ್ನು ಪ್ರಶ್ನೆ ಮಾಡಿದ್ದಾರೆ.
ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂಥದ್ದೊಂದು ಉತ್ಸವ ಮಾಡ್ತಾ ಇದ್ದಾರೆ. ಇಷ್ಟು ದಿನ ಎರಡೂ ಉತ್ಸವ ಮಾಡಿರಲಿಲ್ಲ. ಇದೀಗ ಎರಡನ್ನೂ ಮಾಡುತ್ತಾ ಇದ್ದಾರೆ ಎಂದು ಬಹಮನಿ ಉತ್ಸವವನ್ನು ಸರಕಾರದಿಂದ ಆಚರಣೆ ಮಾಡುತ್ತಿರುವುದನ್ನು ಮಲ್ಲಿಕಾರ್ಜುನ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಬಹಮನಿ ಉತ್ಸವ ವಿವಾದ : ಮೌನ ಮುರಿದ ಸಿದ್ದರಾಮಯ್ಯ!
ರಾಷ್ಟ್ರಕೂಟರ ಉತ್ಸವದಿಂದ ಜೈನರನ್ನು ಮತ್ತು ಹಿಂದುಗಳನ್ನು ಓಲೈಸುತ್ತಿದ್ದೇವಾ? ಯಾರನ್ನು ಓಲೈಸಲು ಉತ್ಸವ ಮಾಡುತ್ತಿಲ್ಲ. ಮುಸ್ಲಿಂ ವಿರುದ್ದವಾಗಿಯೇ ಗೆದ್ದು ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನಿ ಶಾ ಬಹಮನಿ ರಾಜ್ಯ ಸ್ಥಾಪಿಸಿದ್ದ. ಗಂಗೂ ಅನ್ನೋದು ಹಿಂದೂ ಪದವಾಗಿದೆ. ಇದರಲ್ಲಿ ವಿವಾದ ಮಾಡುವದು ಸರಿಯಲ್ಲ ಎಂದು ಖರ್ಗೆ ಹೇಳಿದ್ದಾರೆ.
ಬಹಮನಿ ಉತ್ಸವ ಮಾಡುವುದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಂಥ ಯಾವ ಉತ್ಸವವನ್ನೂ ಸರಕಾರ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.