ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಟ್ರಕ್ ಟರ್ಮಿನಲ್ ನಿರ್ಮಾಣ
ಕಲಬುರಗಿ, ಮಾರ್ಚ್ 06; "ಸಿಮೆಂಟ್ ನಗರಿಯಾಗಿರುವ ಕಲಬುರಗಿಯಲ್ಲಿ ಲಾರಿಗಳ ಸಂಚಾರ ದಟ್ಟಣೆ ಹೆಚ್ಚಿದೆ. ಇಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಅತ್ಯಗತ್ಯವಾಗಿದೆ. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಜಮೀನು ಗುರುತಿಸಲು ನಿರ್ದೇಶನ ನೀಡಿದ್ದೇನೆ" ಎಂದು ಡಿ. ಎಸ್. ವೀರಯ್ಯ ಹೇಳಿದರು.
ಶನಿವಾರ ಕಲಬುರಗಿಯಲ್ಲಿ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಡಿ. ಎಸ್. ವೀರಯ್ಯ ಪತ್ರಿಕಾಗೋಷ್ಠಿ ನಡೆಸಿದರು. "ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮದಿಂದ ಎಲ್ಲಾ ಮೂಲ ಸೌಕರ್ಯವುಳ್ಳ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶವಿದೆ" ಎಂದರು.
"ನಿಗಮದಲ್ಲಿ ಹೆಚ್ಚಿನ ಅನುದಾನ ಇಲ್ಲದ ಕಾರಣ ಟ್ರಕ್ ಟರ್ಮಿನಲ್ ನಿರ್ಮಾಣವನ್ನು ಪಿಪಿಪಿ ಅಥವಾ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಚಿಂತಿಸಲಾಗುತ್ತಿದೆ. ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದಲ್ಲಿ ನಿಗಮದಿಂದಲೇ ನಿರ್ಮಾಣ ಮಾಡಲಾಗುತ್ತದೆ" ಎಂದು ತಿಳಿಸಿದರು.

"ಯಶವಂತಪುರ, ಧಾರವಾಡ ಹಾಗೂ ಮೈಸೂರು-ನಂಜನಗೂಡು ರಸ್ತೆಯಲ್ಲಿ ಈಗಾಗಲೇ ಟ್ರಕ್ ಟರ್ಮಿನಲ್ಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ ದಾಸನಪುರದಲ್ಲಿ 46 ಎಕರೆ ಪ್ರದೇಶದಲ್ಲಿ ಟರ್ಮಿನಲ್ ಇದೆ. ಹುಬ್ಬಳ್ಳಿಯಲ್ಲಿ 56 ಎಕರೆ, ಹೊಸಪೇಟೆಯಲ್ಲಿ 48 ಎಕರೆ ಜಮೀನು ಟರ್ಮಿನಲ್ ನಿರ್ಮಿಸಲು ಲಭ್ಯವಿದೆ" ಎಂದು ವಿವರಣೆ ನೀಡಿದರು.
"ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ನಿವೇಶನ ಮೀಸಲಿಡಲಾಗಿದೆ. ಕಲಬುರಗಿಯಲ್ಲಿ ಟರ್ಮಿನಲ್ ನಿರ್ಮಾಣ ಮಾಡಲು ಕಮಲಾಪುರದ ಮತ್ತು ಕಲಬುರಗಿ-ಶಹಾಬಾದ ರಸ್ತೆಯ ನಂದೂರ ಬಳಿ ನಿವೇಶನವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 40 ರಿಂದ 50 ಎಕರೆ ಪ್ರದೇಶದಲ್ಲಿ ಮಾದರಿ ಟ್ರಕ್ ಟರ್ಮಿನಲ್ ನಿರ್ಮಿಸಲಾಗುತ್ತದೆ" ಎಂದು ಡಿ. ಎಸ್. ವೀರಯ್ಯ ತಿಳಿಸಿದರು.
"ರಾಜ್ಯ ಹಾಗೂ ಅಂತರ ರಾಜ್ಯ ವಾಹನಗಳು ದಿನನಿತ್ಯ ಸಂಚಾರದ ಮೇಲಿರುವುದರಿಂದ ಹಾಗೂ ವಾಹನ ಚಾಲಕರಿಗೆ ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅವಶ್ಯಕವಾಗಿದೆ. ಆದ್ದರಿಂದ, ಟ್ರಕ್ ಟರ್ಮಿನಲ್ ಬಳಿ ಕುಡಿಯುವ ನೀರು, ಶೌಚಾಲಯ, ಲಾಡ್ಜ್, ರೀಕ್ರಿಯೇಷನ್ ಕ್ಲಬ್, ಹೋಟೆಲ್ ಸ್ಥಾಪಿಸಲಾಗುತ್ತದೆ" ಎಂದರು.












Click it and Unblock the Notifications