Breaking: ಐಪಿಎಸ್ ವರ್ಗಾವಣೆ, ಕಲಬುರಗಿಗೆ ಹೊಸ ಪೊಲೀಸ್ ಆಯುಕ್ತರ ನೇಮಕ
ಕಲಬುರಗಿ, ಆಗಸ್ಟ್ 22: ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆಯಾಗಿದ್ದು, ಡಾ. ಶರಣಪ್ಪ ಎಸ್. ಡಿ. ನೂತನ ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಚೇತನ್ ಆರ್. ಕಲಬುರಗಿ ನಗರದ ಪೊಲೀಸ್ ಆಯುಕ್ತರಾಗಿದ್ದರು. ಅವರನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿತ್ತು.
ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕುರಿತು ನಾಗಪ್ಪ ಎಸ್. ಪರೀತ್, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-4) ಆದೇಶವನ್ನು ಹೊರಡಿಸಿದ್ದಾರೆ. ಡಾ. ಶರಣಪ್ಪ ಎಸ್. ಡಿ. ಅವರನ್ನು ಕಲಬುರಗಿಯ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ಪೊಲೀಸ್ ಕಮೀಷನರ್ ಆಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.

2010ರ ಬ್ಯಾಚ್ನ ಐಪಿಎಸ್ ಅಧಿಕಾರಿ ಚೇತನ್ ಆರ್. ಕಲಬುರಗಿಯ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ನಗರದ ಪೊಲೀಸ್ ಆಯುಕ್ತರಾಗಿದ್ದರು. ಅವರ ಜಾಗಕ್ಕೆ ರೈಲ್ವೆ ಡಿಐಜಿಯಾಗಿದ್ದ ಡಾ. ಶರಣಪ್ಪ ಎಸ್. ಡಿ. ಅವರನ್ನು ನೇಮಕ ಮಾಡಲಾಗಿದೆ.
ಡಾ. ಶರಣಪ್ಪ ಎಸ್. ಡಿ. ನೇಮಕದಿಂದ ಸುಮಾರು 1 ತಿಂಗಳಿನಿಂದ ಖಾಲಿ ಇದ್ದ ಕಲಬುರಗಿ ನಗರ ಪೊಲೀಸ್ ಆಯುಕ್ತರ ಹುದ್ದೆ ಭರ್ತಿಯಾಗಿದೆ. ಇವರು ಮೂಲತಃ ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದವರು. ಇದೇ ಮೊದಲ ಬಾರಿಗೆ ಅವರು ಕಾರ್ಯ ನಿರ್ವಹಣೆಗೆ ತವರು ಜಿಲ್ಲೆಗೆ ನೇಮಕಗೊಂಡಿದ್ದಾರೆ. ಕಲಬುರಗಿ ಜಿಲ್ಲೆಯವರೇ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಮೊದಲಿಗರು ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ಕಲಬುರಗಿಯಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ಮತ್ತು ಕಲಬುರಗಿ ನಗರ ಪೊಲೀಸ್ ಬೇರೆ-ಬೇರೆಯಾಗಿದೆ. ಕಲಬುರಗಿ ನಗರ ಪೊಲೀಸ್ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದು, ವ್ಯವಸ್ಥೆಯಲ್ಲಿ ಸಾರ್ವಜನಿಕರನ್ನು ಪಾಲುದಾರನ್ನಾಗಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಶ್ರಮಪಡುತ್ತಿದೆ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಡುವುದರ ಜೊತೆಗೆ ಅಪರಾಧ ತಡೆ ಮತ್ತು ಅಪರಾಧ ಪತ್ತೆಯ ಕಾರ್ಯದಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ಕಲಬುರಗಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನ್ಯಾಯಸಮ್ಮತವಾದ, ಯಾವ ಅಂಜಿಕೆಗೂ ಒಳಗಾಗದೆ, ನಿಸ್ವಾರ್ಥತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದು, ನಗರದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಾರ್ವಜನಿಕರಲ್ಲಿ ಭಯ ಮುಕ್ತ ವಾತಾವರಣವನ್ನು ಸೃಷ್ಟಿಸಲು ಕಾರ್ಯವನ್ನು ನಿರ್ವಹಣೆ ಮಾಡುತ್ತಿದೆ.
ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ಪತ್ತೆಹಚ್ಚುವಲ್ಲಿ, ವಿಭಿನ್ನ ಸಮುದಾಯಗಳ ನಡುವೆ ಸಾಮರಸ್ಯವನ್ನು ಹಾಗೂ ಕೋಮುಸೌಹಾರ್ದತೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಹಾಗೂ ಭಯೋತ್ಪಾದನೆ, ಸಂಘಟಿತ ಅಪರಾಧ ಹಾಗೂ ಸಾಮಾಜಿಕ ವಿರೋಧಿ ಚಟುವಟಿಕೆಗಳ ವಿರುದ್ಧ ಕಾರ್ಯ ನಿರ್ವಹಣೆ ಮಾಡುತ್ತಿದೆ.
2024ರ ಜುಲೈನಲ್ಲಿ ಕರ್ನಾಟಕ ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಇದು ಈ ವರ್ಷ ಅತಿ ದೊಡ್ಡ ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಲೋಕಸಭೆ ಚುನಾವಣೆ ಮುಗಿದ ಬಳಿಕ ಹಲವು ಜಿಲ್ಲೆಗಳ ಎಸ್ಪಿ, ನಗರ ಪೊಲೀಸ್ ಆಯುಕ್ತರನ್ನು ವರ್ಗಾಯಿಸಲಾಗಿತ್ತು.












Click it and Unblock the Notifications