ಕಲಬುರಗಿ ನಗರಕ್ಕೆ ಬೆಣ್ಣೆ ತೋರಾದಿಂದ ಕುಡಿಯುವ ನೀರು ಪೂರೈಕೆ
ಕಲಬುರಗಿ, ಮೇ 31; "ಬೆಣ್ಣೆ ತೋರಾದಿಂದ ಕಲಬುರಗಿ ನಗರಕ್ಕೆ ಕುಡಿಯುವ ನೀರು ಒದಗಿಸುವಂತೆ ಹಿಂದೆ ಹಲವು ಬಾರಿ ಮನವಿ ಮಾಡಿದ್ದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀರು ಪೂರೈಸಲು ಬುಧವಾರದಿಂದಲೇ ಕಾರ್ಯಪ್ರವೃತ್ತರಾಗಿ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಸಚಿವರಾದ ನಂತರ ಮೊದಲ ಬಾರಿಗೆ ಮಂಗಳವಾರ ಕಲಬುರಗಿಗೆ ಆಗಮಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರೊಂದಿಗೆ ಅಧಿಕಾರಿಗಳ ಸಭೆಯನ್ನು ನಡೆಸಿದರು.

ಪ್ರಸ್ತುತ ನೈಋತ್ಯ ಮುಂಗಾರು ಮಳೆ ಆರಂಭವಾಗುತ್ತಿದೆ. ಪ್ರವಾಹ ನಿಯಂತ್ರಣ, ಕೃಷಿ ಚಟುವಟಿಕೆ, ಕುಡಿಯುವ ನೀರು ಪೂರೈಕೆ ವಿಷಯದ ಕುರಿತಂತೆ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಸಚಿವರು ಪಾಲ್ಗೊಂಡು ಹಲವು ಸೂಚನೆಗಳನ್ನು ನೀಡಿದರು.
"ಕಲಬುರಗಿ ನಗರದ ನಿವಾಸಿಗಳಿಗೆ ಬೆಣ್ಣೆ ತೋರಾ ಜಲಾಶಯದಿಂದ ಕುಡಿಯುವ ನೀರು ಪೂರೈಸಲು ಕೂಡಲೇ ಕ್ರಮ ವಹಿಸಬೇಕು" ಎಂದು ಸಚಿವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ತೊಗರಿ ಹಾನಿ, ತನಿಖೆಗೆ ಸೂಚನೆ; ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ, "ಕಳೆದ ವರ್ಷ ಜಿಲ್ಲೆಯಲ್ಲಿ ನೆಟೆ ರೋಗದಿಂದ ಶೇ 70ರಷ್ಟು ತೊಗರಿ ಹಾಳಾಗಿದ್ದರೂ, ಅಧಿಕಾರಿಗಳು ಕೇವಲ ಶೇ 30 ಎಂದು ವರದಿ ಸಲ್ಲಿಸಿದ್ದಾರೆ. ಇದರಿಂದ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಸಿಗದೇ ಅನ್ಯಾಯವಾಗಿದೆ. ಹಾಗಾಗಿ ಈ ಕುರಿತು ಸಮಗ್ರ ತನಿಖೆ ನಡೆಸಬೇಕು" ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ಗೆ ಸೂಚಿಸಿದರು.
"ಕಳೆದ ವರ್ಷ ಕಳಪೆ ತೊಗರಿ ಬೀಜ ಬಿತ್ತನೆ ಮಾಡಿದ್ದರಿಂದ ನೆಟೆ ರೋಗ ತಗುಲಿತ್ತು. ಹಾಗಾಗಿ ಅಂತಹ ಬೀಜಗಳ ಕ್ಷಮತೆ ಪರೀಕ್ಷಿಸಲು ನೀವು ಪ್ರಯೋಗಾಲಯಕ್ಕೆ ಕಳಿಸಿದ್ದೀರಾ?" ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಪ್ರಶ್ನಿಸಿದರು.
"ಈ ಸಲ ಮತ್ತೆ ರೈತರು ಅದೇ ಮಾದರಿ ಬೀಜ ಬಿತ್ತನೆ ಮಾಡುವ ಸಾಧ್ಯತೆಯೂ ಇರುವುದರಿಂದ ಸಾಧ್ಯವಾದಷ್ಟು ಹೆಸರು, ಉದ್ದು, ಸೋಯಾಬಿನ್ ಹಾಗೂ ಹತ್ತಿ ಬೆಳೆ ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡಬೇಕು" ಎಂದು ಸಚಿವರು ಸಲಹೆ ನೀಡಿದರು.
"ಕಳೆದ ವರ್ಷ ಮಳಖೇಡದಲ್ಲಿ ಕಳಪೆ ಬೀಜ ಮಾರಾಟ ಮಾಡಿದ ವ್ಯಕ್ತಿಯ ವಿರುದ್ದ ಮಳಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಚಾರ್ಜ್ ಶೀಟ್ ಹಾಕಿಲ್ಲ, ಮೊದಲು ಚಾರ್ಜ್ ಶೀಟ್ ಹಾಕಿ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ಕೊಟ್ಟರು.
ಬಿತ್ತನೆ ಮಾಹಿತಿ; ಸಚಿವರ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, "ಪ್ರಸ್ತುತ 2023-24ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನಲ್ಲಿ ಆಲಿಕಲ್ಲು/ ಸಿಡಿಲು ಬಡಿದು 8 ಜನರು ಸಾವನ್ನಪ್ಪಿದ್ದು, ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಈ ಸಲದ ಮುಂಗಾರು ಹಂಗಾಮಿನಲ್ಲಿ ಒಟ್ಟು 8.87 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಇದರಲ್ಲಿ 5.93 ಲಕ್ಷ ಹೆಕ್ಟೇರ್ ತೊಗರಿ, 24,000 ಹೆಕ್ಟೇರ್ ಉದ್ದು, 51,000 ಹೆಕ್ಟೇರ್ ಹೆಸರು, 99,450 ಹೆಕ್ಟೇರ್ ಹತ್ತಿ, 45,635 ಹೆಕ್ಟೇರ್ ಕಬ್ಬು, 48,200 ಹೆಕ್ಟೇರ್ ಸೋಯಾಬಿನ್ ಬಿತ್ತನೆಗೆ ಗುರಿ ನಿಗದಿಪಡಿಸಲಾಗಿದೆ" ಎಂದು ಹೇಳಿದರು.
"ಹೆಸರು 1,000 ಕ್ವಿಂಟಾಲ್, ಉದ್ದು 500 ಕ್ವಿಂಟಾಲ್, ತೊಗರಿ 6,334 ಕ್ವಿಂಟಾಲ್, ಸೋಯಾಬಿನ್ 18,516 ಕ್ವಿಂಟಾಲ್, ಸೂರ್ಯಕಾಂತಿ 120 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಲಭ್ಯವಿದೆ" ಎಂದು ಸಭೆಗೆ ಮಾಹಿತಿ ಕೊಟ್ಟರು.












Click it and Unblock the Notifications