ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಘಟಕಕ್ಕೆ ಸ್ವಾತಂತ್ರ್ಯ
ಕಲಬುರಗಿ, ಡಿಸೆಂಬರ್ 04: ಮೊನ್ನೆಯಷ್ಟೆ ರಾಜ್ಯದ 2018ರ ಚುನಾವಣೆಗೆ ಬಿಜೆಪಿ ಟಿಕೆಟ್ ಅನ್ನು ಹೈಕಮಾಂಡ್ ಸಮೀಕ್ಷೆ ನಡೆಸುವ ಮೂಲಕ ನೀಡಲಿದೆ ಎಂದಿದ್ದ ಯಡಿಯೂರಪ್ಪ ಅವರು ಇಂದು (ಡಿಸೆಂಬರ್ 04) ರಾಜ್ಯ ಬಿಜೆಪಿ ಘಟಕವೇ ಟಿಕೆಟ್ ನೀಡಲಿದೆ ಎಂದಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು 'ಮುಂಬರುವ ವಿಧಾನ ಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ರಾಜ್ಯ ಘಟಕಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಯಾವುದೇ ನಿಬಂಧನೆ ವಿಧಿಸಿಲ್ಲ' ಎಂದರು.
ಬಿಜೆಪಿಗೆ ಸೇರ್ಪಡೆಯಾಗಲಿರುವವರ ಹೆಸರು ಸದ್ಯದಲ್ಲೇ ಪ್ರಕಟ
'150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬುದು ಬಿಜೆಪಿ ರಾಷ್ಟ್ರೀಯ ನಾಯಕರ ಸಂಕಲ್ಪ. ಹೀಗಾಗಿ ಜನರ ಒಲವು ಇರುವವರಿಗೆ ಟಿಕೆಟ್ ನೀಡಿ ಎಂದು ಸೂಚಿಸಿದ್ದಾರೆ' ಎಂದು ಅವರು ತಿಳಿಸಿದರು.
'ರಾಜ್ಯದಲ್ಲಿ ಈಗಾಗಲೇ ಒಂದು ಸಮೀಕ್ಷೆ ನಡೆಸಿರುವುದಾಗಿ ಹೇಳಿದ ಅವರು ಕೇಂದ್ರ ನಾಯಕರು ಇನ್ನೂ ಎರಡು ಸಮೀಕ್ಷೆ ನಡೆಸಲಿದ್ದಾರೆ ಜೊತೆಗೆ ವೈಯಕ್ತಿಕವಾಗಿ ನಾನೂ ಒಂದು ಸಮೀಕ್ಷೆ ನಡೆಸುತ್ತೇನೆ. ಮತದಾರರು ಒಲವು ತೋರುವವರಿಗೆ ಟಿಕೆಟ್ ಕೊಡುತ್ತೇವೆ. ಇದು ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಅನ್ವಯವಾಗಲಿದೆ. ಸಾಮಾಜಿಕ ನ್ಯಾಯವನ್ನೂ ಪಾಲಿಸುತ್ತೇವೆ' ಎಂದರು.
'ಕೆಲ ಕ್ಷೇತ್ರಗಳಲ್ಲಿ ಒಬ್ಬರೇ ಅಭ್ಯರ್ಥಿ ಇದ್ದು, ಪೈಪೋಟಿ ಇಲ್ಲ. ಅಂಥ ಕಡೆ ಇವರಿಗೆ ಆಶೀರ್ವದಿಸಿ ಎಂದು ಮತದಾರರನ್ನು ಕೇಳುತ್ತಿದ್ದೇವೆ. ಜನವರಿ 26ಕ್ಕೆ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಆ ನಂತರವೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ' ಎಂದು ಅವರು ಹೇಳಿದರು.
ಟಿಕೆಟ್ ನೀಡುವುದು ಅಮಿತ್ ಷಾ ಅಲ್ಲ, ನಾನೂ ಅಲ್ಲ : ಯಡಿಯೂರಪ್ಪ
'ವಿಧಾನ ಪರಿಷತ್ನ ಈಶಾನ್ಯ ಪದವೀಧರರ ಕ್ಷೇತ್ರದ ಟಿಕೆಟ್ನ್ನು ಹಾಲಿ ಸದಸ್ಯರ ಬದಲು ಬೇರೊಬ್ಬರಿಗೆ ನೀಡಲಾಗಿದೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೂ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಲಿದೆಯೇ' ಎಂಬ ಪ್ರಶ್ನೆಗೆ 'ಇದನ್ನು ಆ ಸಂದರ್ಭದಲ್ಲಿಯೇ ಚರ್ಚಿಸುತ್ತೇವೆ' ಎಂದರು.
ಗುಜರಾತ್ ಚುನಾವಣೆಯಲ್ಲಿ ಹಾಲಿ ಶಾಸಕರು, ಸಂಸದರಿಗೆ ಟಿಕೆಟ್ ತಪ್ಪಿಸಿ ಹೊಸಬರಿಗೆ ಮಣೆ ಹಾಕಿರುವ ಬಿಜೆಪಿಯ ತಂತ್ರ ಇಲ್ಲೂ ಅನ್ವಯವಾಗಲಿದೆ ಎಂಬ ಗಾಳಿ ಸುದ್ದಿ ಇದ್ದು, ಯಡಿಯೂರಪ್ಪ ಅವರ ಇಂದಿನ ಮಾತು ಇದಕ್ಕೆ ಪುಷ್ಟಿ ನೀಡುತ್ತಿದೆ.