ಪಿಎಸ್ಐ ನೇಮಕಾತಿ ಅಕ್ರಮ: ಕೆಎಸ್ಆರ್ ಪಿ ಅಸಿಸ್ಟೆಂಟ್ ಕಮಾಂಡೆಂಟ್ ಬಂಧನ
ಕಲಬುರಗಿ, ಮೇ. 10: ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಐಡಿ ಹಲವು ಆರೋಪಿಗಳನ್ನು ಬಂಧಿಸುತ್ತಿದೆ. ಕಲಬುರಗಿಯ ಜೈಲಿನ ಜೈಲರ್ ಗಂಡನನ್ನು ಬಂಧಿಸಲಾಗಿದ್ದು, ಈಗ ಹೆಂಡತಿಯೇ ಪತಿಯನ್ನು ಜೈಲಿಗೆ ಹಾಕಿ ಲಾಕ್ ಮಾಡುವ ದುರ್ದೈವ ಒದಗಿ ಬಂದಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಕೆಎಸ್ಆರ್ಪಿ ಅಸಿಸ್ಟೆಂಟ್ ಕಮಾಂಡಂಟ್ ವೈಜನಾಥ್ ಬಿರಾದರ್ ಅನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ಮುಗಿಸಿ ಕಲಬುರಗಿ ಜೈಲಿಗೆ ಕಳುಹಿಸಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವೈಜನಾಥ್ ಬಿರಾದರ್ ಪತ್ನಿ ಸುನಂದಾ ರೇವೂರ್ ಕಲಬುರಗಿ ಜೈಲಿನಲ್ಲಿ ಜೈಲರ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಎಸ್ಆರ್ಪಿಯಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿರುವ ವೈಜನಾಥ್ ಬಿರಾದರ್ ಪತ್ನಿ ಕೂಡ ಸರ್ಕಾರಿ ಸೇವಕಿಯೇ. ಇಬ್ಬರಿಗೆ ಬರುವ ಸರ್ಕಾರಿ ಸಂಬಳದಲ್ಲಿ ನೆಮ್ಮದಿ ಜೀವನ ಸಾಗಿಸಬಹುದಿತ್ತು.
ವೈಜನಾಥ್ ಬಿರಾದರ್ ದುರಾಸೆ ಇದೀಗ ಪತ್ನಿ ಇರುವ ಜೈಲಿನಲ್ಲಿದ್ದು ಮುದ್ದೆ ಮುರಿಯುವಂತೆ ಮಾಡಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಬಂಧನಕ್ಕೆ ಒಳಗಾಗಿರುವ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಜತೆ ವೈಜನಾಥ್ ಬಿರಾದರ್ ಸಂಪರ್ಕದಲ್ಲಿದ್ದ.
ಕಿಂಗ್ಪಿನ್ ಆರ್. ಡಿ. ಪಾಟೀಲ್ ಜತೆ ಸಂಪರ್ಕ ಹೊಂದಿದ್ದ ವೈಜನಾಥ್ ಸರ್ಕಾರಿ ಪಾಲಿಟೆಕ್ನಿಕ್ ಉಸ್ತುವಾರಿ ವಹಿಸಿಕೊಂಡಿದ್ದ. ಅಲ್ಲಿ ನಡೆದ ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಾಥ್ ನೀಡಿದ ಆರೋಪವಿದೆ.
ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದ ಬೆನ್ನಲ್ಲೇ ವೈಜನಾಥ್ನನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ವೈಜನಾಥ್ ತಪ್ಪೊಪ್ಪಿಕೊಂಡಿದ್ದು, ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜೈಲಿನಲ್ಲಿ ಹೆಂಡತಿ ಜೈಲರ್ : ವೈಜನಾಥ್ ನ್ಯಾಯಾಂಗ ಬಂಧನಕ್ಕೆ ಹೋಗುತ್ತಿದ್ದಂತೆ ಪತ್ನಿ ಸುನಂದಾ ರೇವೂರ್ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಗಂಡನ ಜತೆಗೆ ಮನೆಯಲ್ಲಿದ್ದ ರೇವೂರ್ ಇದೀಗ ಜೈಲಿನಲ್ಲಿ ಗಂಡನನ್ನು ನೋಡಿಕೊಳ್ಳುವ ದೌರ್ಭಾಗ್ಯ ಸಿಕ್ಕಿದೆ.
ಆರ್. ಡಿ. ಪಾಟೀಲನೊಂದಿಗೆ ಸೇರಿಕೊಂಡು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಕೆಎಸ್ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ಇದೀಗ ಪತ್ನಿ ಇರುವ ಜೈಲಿನಲ್ಲಿ ಕಂಬಿ ಎಣಿಸಬೇಕಾಗಿದೆ.