Property Tax: ಕರ್ನಾಟಕದ ಹಿಂದುಳಿದ ಜಿಲ್ಲೆಯಲ್ಲಿ ಭಾರೀ ಮೊತ್ತದ ಆಸ್ತಿ ತೆರಿಗೆ ಸಂಗ್ರಹ
ಕಲಬುರಗಿ, ಮಾರ್ಚ್ 18: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಈವರೆಗಿನ ವಾರ್ಷಿಕ ಆಸ್ತಿ ತೆರಿಗೆ ಸಂಗ್ರಹ ಪೈಕಿ ಕಳೆದ 2024-25ರ ಆರ್ಥಿಕ ವರ್ಷದಲ್ಲಿ ದುಪ್ಪಟ್ಟು ಹಣ ಸಂಗ್ರಹವಾಗಿದೆ.
ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಂದ ಭರ್ಜರಿ ಆಸ್ತಿ ತೆರಿಗೆ ಹರಿದು ಬಂದಿದೆ. 2024-25 ರ ಆರ್ಥಿಕ ವರ್ಷದಲ್ಲಿ ಕೈಗೊಂಡ ವ್ಯವಸ್ಥಿತ ಹಾಗೂ ಸೂಕ್ತ ಕ್ರಮಗಳ ಪರಿಣಾಮವಾಗಿ ಈ ಸಾಧನೆ ಸಾಧ್ಯವಾಗಿದೆ. ಒಂದೇ ವರ್ಷದಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ ಸಂಗ್ರಹವಾಗಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಡಿ ಈ ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯಿತಿ ಬರುತ್ತವೆ. ಇದುವರೆಗೆ ಈ ಗ್ರಾಮ ಪಂಚಾಯತಿಗಳಿಂದ ಪ್ರತಿ ವರ್ಷ ಸರಾಸರಿ 10 ರಿಂದ 11 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿತ್ತು. ಹನ್ನೊಂದು ಕೋಟಿ ರೂಪಾಯಿಯೇ ಹೆಚ್ಚು ಎನ್ನಲಾಗಿದೆ. ಆದರೆ ಕಳೆದ ಒಂದೇ ವರ್ಷದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ (23 ಕೋಟಿ ರೂ.) ಆಸ್ತಿ ತೆರಿಗೆ ಸಂಗ್ರಹ ವಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ 13 ಕೋಟಿ ರೂ.ಗಳಷ್ಟು ಬೇಡಿಕೆ ಇತ್ತು. ಈ ಕುರಿತು ನಡೆಸಿದ ಸಮೀಕ್ಷೆ ಬಳಿಕ ಒಟ್ಟು ಗ್ರಾಮಪಂಚಾಯಿತಿಗಳಲ್ಲಿನ ತೆರಿಗೆ ಬೇಡಿಕೆ 36.6 ಕೋಟಿ ರೂ.ಗೆ ಹೆಚ್ಚಾಗಿದೆ ಎಂದು TOI ವರದಿ ಮಾಡಿದೆ.
ಜಿಲ್ಲಾಡಳಿತುವ ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ನಡೆಸಿದ ಮೌಲ್ಯಮಾಪನ, ನೋಂದಣಿ, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಜಾರಿ, ತೆರಿಗೆ ಪಾವತಿಗಾಗಿ ಅಭಿಯಾನ, ಪಿಡಿಒಗಳು ಮತ್ತು ಬಿಲ್ ಕಲೆಕ್ಟರ್ಗಳಿಗೆ ಸಂಗ್ರಹದ ಹೊಣೆ ಹೊರಿಸಿರುವುದು ಸೇರಿ ಹಲವು ಕಠಿಣ ಕ್ರಮ ಜರುಗಿಸಲಾಯಿತು. ಪಂಚತಂತ್ರ-2 ಜಾಲತಾಣದಲ್ಲಿ ಸಾರ್ವಜನಿಕರಿಗ ಸುಲಭ ಪ್ರವೇಶಿಸುವಂತೆ ಮಾಡಿದ ವ್ಯವಸ್ಥೆ ಕಾರಣದಿಂದ ಹೆಚ್ಚುವರಿ ಹಣ ಸಂಗ್ರಹವಾಗಿದೆ.

ಕೈಗಾರಿಕೆ ಘಟಕಗಳಿಂದ ಕೋಟಿ ಕೋಟಿ ತೆರಿಗೆ ಸಂಗ್ರಹ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರು ಮಾತ್ರವಲ್ಲದೇ ಜಿಲ್ಲೆಯಲ್ಲಿರುವ ಕೈಗಾರಿಕೆಗಳಾದ ಸಿಮೆಂಟ್ ಮತ್ತು ಸಕ್ಕರೆ ಕಾರ್ಖಾನೆಗಳು ಮತ್ತಿತರು ಪ್ರಮುಖ ಕಾರ್ಖಾನೆಗಳಿಗೆ ಆಸ್ತಿ ಪಾವತಿಗೆ ಅಧಿಸೂಚನೆ ಹೊರಡಿಸಲಾಯಿತು. ಸೂಕ್ತ ಕ್ರಮದ ಎಚ್ಚರಿಕೆ ನೀಡಲಾಯಿತು. ಹೀಗಾಗಿ ಕೈಗಾರಿಕೆಗಳಿಂದಲೇ ಬಾಕಿ ಉಳಿದಿದ್ದ ಕೋಟಿ ಕೋಟಿ ರೂಪಾಯಿ ಆಸ್ತಿ ತೆರಿಗೆ ಸರ್ಕಾರದ ಖಜಾನೆ ಸೇರಿತು. ಸಿಮೆಂಟ್ ಕಾರ್ಖಾನೆಯಿಂದ 2.50 ಕೋಟಿ ರೂ., ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಿಂದ 1 ಕೋಟಿ ರೂ. ಮತ್ತು ರೇಣಕಾ ಶುಗರ್ಸ್ ಕೈಗಾರಿಕಾ ಘಟಕದಿಂದ, ಕೆಪಿಆರ್ ಮತ್ತು ಎನ್ಎಸ್ಎಲ್ ಕಾರ್ಖಾನೆಯಿಂದ ತಲಾ 70 ಲಕ್ಷ ರೂ. ಬಾಕಿ ತೆರಿಗೆ ಪಾವತಿ ಆಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ
ಬಾಕಿ ತೆರಿಗೆ ಪಾವತಿದಾರರ ಮೇಲೆ ಒತ್ತಡ ಹೇರುವಲ್ಲಿ ಪಂಚಾಯತ್ ರಾಜ್ ಇಲಾಖೆ ಯಶಸ್ವಿ ಆಯಿತು. ಸಮೀಕ್ಷೆ ನಡೆಸಿ ಬಾಕಿ ಉಳಿಸಿಕೊಂಡ ತೆರಿಗೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಂತೆ ಕಠಿಣ ಕ್ರಮ ಜರುಗಿಸಲಾಯಿತು. ಬಾಕಿದಾರರಿಗೆ ನೋಟಿಸ್ ನೀಡಿದೆವು. ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದು ಸಹ ತೆರಿಗೆ ಸಂಗ್ರಹದ ಗುರಿ ಸಾಧಿಸಲು ಸಾಧ್ಯವಾಯಿತು ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಸಿಇಒ ಭನ್ವರ್ ಸಿಂಗ್ ಮೀನಾ ಹೇಳಿದರು.












Click it and Unblock the Notifications