ಗುಲ್ಬರ್ಗಾ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರಿಡಿ: ಎಚ್ಡಿಕೆಗೆ ಮನವಿ
ಕಲಬುರಗಿ, ಸೆಪ್ಟೆಂಬರ್ 17: ಹೈದರಾಬಾದ್ -ಕರ್ನಾಟಕದ ಭಾಗದಲ್ಲಿ ಇಂದು ಬಹುಕಾಲದ ಕನಸು ನನಸಾಗಿದೆ. ವಿಮಾನ ಹಾರಾಟ ಶುರುವಾಗಿದೆ. ಈ ನಡುವೆ ಗುಲ್ಬರ್ಗಾದ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಅವರ ಹೆಸರಿಡುವಂತೆ ಬಂಜಾರ ಸಮುದಾಯದವರು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಂಜಾರಗಳ ತಾಂಡಗಳಿಗೆ ಭೇಟಿ ಮಾಡಿದ ಕುಮಾರಸ್ವಾಮಿ ಅವರು, ರಾಜ್ಯದ 1500 ತಾಂಡಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಲಾಗುವುದು. ಈ ವರ್ಷ 400 ಸೇವಾಲಾಲ್ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ ಹಾಗೂ ಪುನಶ್ಚೇತನಕ್ಕೆ ಚಾಲನೆ ನೀಡಲಾಗುವುದು ಎಂದರು.ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮ ನಡೆಸಿದ ಸಮೀಕ್ಷೆಯಿಂದ ಶೇ.45ರಷ್ಟು ಸೇವಾಲಾಲ್ ಸಾಂಸ್ಕೃತಿಕ ಭವನಗಳು ಶಿಥಿಲಾವಸ್ಥೆಯಲ್ಲಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶಗಳನ್ನು ಆಧರಿಸಿ, ಕರ್ನಾಟಕದಲ್ಲಿ ನೆಲೆಸಿರುವ ಬಂಜಾರ ಜನಾಂಗದಲ್ಲಿ ಪಾರಂಪರಿಕವಾಗಿ ಬಂದಿರುವ ವಿಶಿಷ್ಟವಾದ ಸಂಸ್ಕೃತಿ, ಕಲೆಗಳನ್ನು ಉಳಿಸಿ, ಪ್ರೋತ್ಸಾಹಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಮೂಲಕ ಸೇವಾಲಾಲ್ ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು. ಕುಮಾರಸ್ವಾಮಿಗಳ ಜತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತ್ತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರಾಜ್ಯದಲ್ಲಿ ಸುಮಾರು 3373 ತಾಂಡಗಳಿವೆ
ರಾಜ್ಯದಲ್ಲಿ ಸುಮಾರು 3373 ತಾಂಡಗಳಿದ್ದು, ಇವುಗಳಲ್ಲಿ ವಾಸ ಮಾಡುತ್ತಿರುವ ಬಂಜಾರ ಜನಾಂಗದವರು ತಮ್ಮ ಆರಾಧ್ಯ ಗುರುಗಳಾದ ಸೇವಾಲಾಲ್ ಅವರ ಹೆಸರಿನಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳುತ್ತ ಬರುತ್ತಿದ್ದಾರೆ.
"ಮಠ್" ಹೆಸರಿನಲ್ಲಿ ಸಣ್ಣಪುಟ್ಟ ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಿಕೊಂಡು ತಮ್ಮ ಕಲೆಯನ್ನು ಅಭಿವ್ಯಕ್ತಿಗೊಳಿಸುತ್ತಾ ಬಂದಿದ್ದಾರೆ. ಬಂಜಾರ ಜನಾಂಗದ ಮದುವೆ, ಹಬ್ಬ, ಶುಭ ಸಮಾರಂಭ, ನ್ಯಾಯ ಪಂಚಾಯಿತಿ ಮುಂತಾದ ಆಚರಣೆಗಳು ಈ "ಮಠ್" ಮುಂಭಾಗದಲ್ಲಿಯೇ ನಡೆಯುತ್ತಿವೆ.

ಸೇವಾಲಾಲ್ ಸಾಂಸ್ಕೃತಿಕ ಭವನಗಳು ಶಿಥಿಲಾವಸ್ಥೆ
ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮ ನಡೆಸಿದ ಸಮೀಕ್ಷೆಯಿಂದ ಶೇ.45ರಷ್ಟು ಸೇವಾಲಾಲ್ ಸಾಂಸ್ಕೃತಿಕ ಭವನಗಳು ಶಿಥಿಲಾವಸ್ಥೆಯಲ್ಲಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರತಿ ಕೇಂದ್ರದ ನಿರ್ಮಾಣಕ್ಕಾಗಿ 10 ಲಕ್ಷ ರೂ.ಗಳವರೆಗೂ ಆರ್ಥಿಕ ಅನುದಾನ ನಿಡಲಾಗುವುದು. ಪ್ರಸಕ್ತ ವರ್ಷ ಈ ಉದ್ದೇಶಕ್ಕಾಗಿ 23 ಕೋಟಿ ರೂ. ವೆಚ್ಚ ಭರಿಸಲಿದ್ದು, ಮುಂದಿನ 3 ವರ್ಷಗಳಲ್ಲಿ ಒಟ್ಟಾರೆ 112 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಹೇಳಿದರು.

ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರು ಏಕೆ?
ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರು ಏಕೆ? ಎಂಬ ಪ್ರಶ್ನೆಗೆ ಬಂಜಾರ ಸಮುದಾಯದ ಅಧ್ಯಕ್ಷೆ ಬಿ.ಟಿ ಲಲಿತಾ ನಾಯಕ್ ಉತ್ತರಿಸಿದ್ದಾರೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಬಂಜಾರ ಸಮುದಾಯದವರು ಅಪಾರವಾದ ಭೂಮಿಯನ್ನು ಕಳೆದುಕೊಂಡಿದ್ದಾರೆ. ಕೆಲವರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಸಂತ ಸೇವಾಲಾಲ್ ಅವರ ಹೆಸರಿಡುವ ಮೂಲಕ ಬಂಜಾರ ಸಮುದಾಯದ ಋಣ ತೀರಿಸಲಿ ಎಂದಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಬಂಜಾರ ಸಮುದಾಯಕ್ಕೆ ಉದ್ಯೋಗ
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬಂಜಾರ ಸಮುದಾಯದ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವಂತೆ ಕೂಡಾ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ 2,500ಕ್ಕೂ ಅಧಿಕ ತಾಂಡಾಗಳಿದ್ದು, ಈ ಬಗ್ಗೆ ಸರ್ಕಾರ, ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ. ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕು ಎಂದು ಬಿ.ಟಿ ಲಲಿತಾನಾಯ್ಕ್ ಹೇಳಿದರು.












Click it and Unblock the Notifications