ಕಾಂಗ್ರೆಸ್ಸಿಗೆ ಅಧಿಕಾರ ಬೇಕಾದರೆ ಹಳೇ ಗಂಡನ ಪಾದವೇ ಗತಿ!
ಮೂರು ಮಹಾ ನಗರಪಾಲಿಕೆ ಚುನುವಾಣೆಯ ಪೈಕಿ ಕಲಬುರಗಿ ಪಾಲಿಕೆ ಅತಂತ್ರವಾಗಿದೆ. ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ತಮ್ಮದೇ ಸ್ವಂತ ಶಕ್ತಿಯಿಂದ ಅಧಿಕಾರಕ್ಕೇರಲು ಸಾಧ್ಯವಿಲ್ಲ. ಹಾಗಾಗಿ, ಜಾತ್ಯಾತೀತ ಜನತಾದಳ ಕಿಂಗ್ ಮೇಕರ್ ಆಗಿದೆ. ಜೆಡಿಎಸ್ ಕಾರ್ಪೋರೇಟರುಗಳು ಈಗಾಗಲೇ ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ.
ನಾಲ್ಕು ಸ್ಥಾನವನ್ನು ಗೆದ್ದಿರುವ ಜೆಡಿಎಸ್ ನಡೆಯ ಮೇಲೆ ಮುಂದಿನ ಮೇಯರ್ ಯಾರಾಗಬಹುದು ಎನ್ನುವುದು ನಿರ್ಧಾರವಾಗಲಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಒಲಿದು ಬಂದಂತೆ, ಕಲಬುರಗಿಯಲ್ಲೂ ಜೆಡಿಎಸ್ ಸದಸ್ಯ ಮೇಯರ್ ಆದರೂ ಆಗಬಹುದು.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ಬೇಡಿಕೆಯಿಟ್ಟ ಜೆಡಿಎಸ್
ಕಲಬುರಗಿ ಮಹಾನಗರ ಪಾಲಿಕೆಯ 55 ಸ್ಥಾನಗಳ ಪೈಕಿ, ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4, ಇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬೆಂಬಲ ಅತ್ಯಗತ್ಯ. ಇದು ಯಾರಿಗೆ ಸಿಗಲಿದೆ?
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬಿಡದಿ ಸಮೀಪದ ಕೇತುಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿರುವ ಜೆಡಿಎಸ್ ಕಾರ್ಪೋರೇಟರುಗಳು, ಪಕ್ಷದ ವರಿಷ್ಠರ ಅಂತಿಮ ನಿರ್ಧಾರಕ್ಕೆ ಕಾಯುತ್ತಿದ್ದಾರೆ. ಇಲ್ಲಿ, ಗೌಡ್ರ ಮಾತು ನಡೆಯುತ್ತೋ, ಎಚ್ಡಿಕೆ ಮಾತು ನಡೆಯುತ್ತೋ ಎನ್ನುವುದು ಮುಖ್ಯವಾದ ವಿಚಾರ. ಇದರ ಜೊತೆಗೆ, ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಬಹುದು ಎನ್ನುವ ಭಯವೂ ಜೆಡಿಎಸ್ ನಾಯಕರಿಗೆ ಕಾಡುತ್ತಿದೆ.
ಕಲಬುರಗಿ ಪಾಲಿಕೆ ಫಲಿತಾಂಶ; ಬೆಂಗಳೂರಿಗೆ ಬಂದ ಜೆಡಿಎಸ್ ಸದಸ್ಯರು!
ಮಹಾನಗರ ಪಾಲಿಕೆಯ ಮೇಯರ್ ಗಾದಿ ಜೆಡಿಎಸ್ಗೆ ಬಿಟ್ಟುಕೊಡಬೇಕೆಂದು ಒತ್ತಾಯ
ಈ ನಡುವೆ, "ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಗಾದಿ ಜೆಡಿಎಸ್ಗೆ ಬಿಟ್ಟುಕೊಡಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಗೆ ಬೇಡಿಕೆ ಇಟ್ಟಿದ್ದೇವೆ" ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದಕ್ಕೆ ಬಿಜೆಪಿ ಸ್ಪಷ್ಟವಾಗಿ ನಿರಾಕರಿಸಿದೆ. ಕಾಂಗ್ರೆಸ್ಸಿನ ನಡೆ ಏನು ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.
ಜೆಡಿಎಸ್ ವರಿಷ್ಠ ದೇವೇಗೌಡ್ರ ಒಲವು ಕಾಂಗ್ರೆಸ್ ಪಕ್ಷದತ್ತ, ಖರ್ಗೆ ಮಾತುಕತೆ
ಜೆಡಿಎಸ್ ವರಿಷ್ಠ ದೇವೇಗೌಡ್ರ ಒಲವು ಕಾಂಗ್ರೆಸ್ ಪಕ್ಷದತ್ತ ಮತ್ತು ಕುಮಾರಸ್ವಾಮಿಯವರ ಒಲವು ಬಿಜೆಪಿಯತ್ತ ಎಂದು ಹೇಳಲಾಗುತ್ತಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಈಗಾಗಲೇ ಗೌಡ್ರ ಬಳಿ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ. "ನಾವು 27 ಸ್ಥಾನವನ್ನು ಗೆದ್ದಿದ್ದೇವೆ, ಬಿಜೆಪಿ ಕೇವಲ 23 ಸ್ಥಾನವನ್ನು ಗೆದ್ದಿದೆ. ಜನಬೆಂಬಲ ನಮ್ಮ ಪರವಾಗಿದೆ. ಎಂಪಿ, ಎಂಎಲ್ಎ, ಎಂಎಲ್ಸಿ ಬಲದ ಮೇಲೆ ಮೇಯರ್ ಮಾಡುವುದಕ್ಕೆ ಬಿಜೆಪಿಯವರು ಹೊರಟಿದ್ದಾರೆ" ಎಂದು ಖರ್ಗೆ ಹೇಳಿದ್ದಾರೆ.
ದೇವೇಗೌಡ್ರು ಸಹಕಾರ ನೀಡುತ್ತಾರೆ ಎಂದು ನಂಬಿದ್ದೇನೆ, ಮಲ್ಲಿಕಾರ್ಜುನ ಖರ್ಗೆ
"ಜಾತ್ಯಾತೀತ ಪಕ್ಷಗಳು ಒಂದಾಗಲು ಇದು ಸಕಾಲ, ನಾನು ದೇವೇಗೌಡ್ರ ಬಳಿ ಮಾತನಾಡಿದ್ದೇನೆ. ಅವರ ಪಕ್ಷದ ಮುಖಂಡರ ಬಳಿ ಮಾತನಾಡಿ ನಿರ್ಧಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಹಿರಿಯರು ಹೇಳಿದ ಮೇಲೆ ನಾವು ನಂಬಬೇಕಾಗುತ್ತದೆ. ನಮ್ಮ ಪರ ಜನಾದೇಶ ಬಂದಿರುವುದರಿಂದ ಕಾಂಗ್ರೆಸ್ ಪಕ್ಷದವರು ಮೇಯರ್ ಆಗಬೇಕು, ಅದಕ್ಕೆ ದೇವೇಗೌಡ್ರು ಸಹಕಾರ ನೀಡುತ್ತಾರೆ ಎಂದು ನಂಬಿದ್ದೇನೆ"ಎಂದು ಮಲ್ಲಿಕಾರ್ಜುನ ಖರ್ಗೆ ಭರವಸೆಯ ಮಾತನ್ನಾಡಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ
ಆದರೆ, ಜೆಡಿಎಸ್ ಬೆಂಬಲ ಪಡೆಯಲು/ನೀಡಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ, ಜೆಡಿಎಸ್ ಮೇಯರ್ ಸ್ಥಾನಕ್ಕೆ ಡಿಮಾಂಡ್ ಮಾಡುತ್ತಿದೆ. ಬಿಜೆಪಿಗೆ ಮೇಯರ್ ಪಟ್ಟ ಸಿಗಬಾರದೆಂದು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಾರ್ಟಿ ಜೆಡಿಎಸ್ಸಿಗೆ ಬೆಂಬಲ ನೀಡಿದರೂ ನೀಡಬಹುದು. ಇಲ್ಲವೇ, ಗೌಡ್ರ ಸೂಚನೆಯಂತೆ ಜೆಡಿಎಸ್, ಕಾಂಗ್ರೆಸ್ಸಿಗೆ ಬೆಂಬಲ ನೀಡಬಹುದು. ಒಟ್ಟಿನಲ್ಲಿ, ಕಾಂಗ್ರೆಸ್ಸಿಗೆ ಕಲಬುರಗಿಯಲ್ಲಿ ಜೆಡಿಎಸ್ ನಿರ್ಣಯವೇ ಅಂತಿಮ.