ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿದ ಕೆಎಸ್ ಈಶ್ವರಪ್ಪ
ಕಲಬುರಗಿ, ಮೇ 4: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಕುರಿತು ಉಲ್ಲೇಖವಿರುವುದರಿಂದ ಆಕ್ರೋಶ ವ್ಯಕ್ತಪಡಿಸಿರುವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕಿರುವ ಘಟನೆ ನಡೆದಿದೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಯುವ ವೇಳೆ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಕಿಡಿಕಾರಿರುವ ಅವರು ಇದು ಮೊಹಮದ್ ಅಲಿ ಜಿನ್ನಾ ಪ್ರಣಾಳಿಕೆಯಾಗಿದೆ. ಬಜರಂಗ ದಳ ನಿಷೇಧ ಮಾಡುವುದು ಸರಿಯಲ್ಲ, ಗೋಹತ್ಯೆ ತಡೆಯಲು ಮುಂದಾಗಿರುವ ಬಜರಂಗ ದಳ ಬ್ಯಾನ್ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಹೀಗಾಗಿ ನಾನು ಕಾಂಗ್ರೆಸ್ ಪ್ರಣಾಳಿಕೆಯನ್ನು ನಿಮ್ಮ ಮುಂದೆ ಸುಡುತ್ತಿದ್ದೇನೆ ಎಂದು ಬೆಂಕಿಕಡ್ಡಿ ಕೀರಿದರು.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಗ್ಯಾರಂಟಿಗಳು ಬರೀ ಸುಳ್ಳಿನ ಕಂತೆಯಾಗಿದೆ. ಅದು ಬರೀ ಸುಳ್ಳಿನ ಭರವಸೆಗಳಾಗಿದೆ. ಈ ಪ್ರಣಾಳಿಕೆಯಿಂದ ಯಾವ ಪ್ರಯೋಜನ ಇಲ್ಲ. ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಹೇಳಿರುವುದರಿಂದ ರಾಜ್ಯದ ಎಲ್ಲ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸ್ ಮನಸ್ಥಿತಿ ಏನು ಎಂದು ಜನರಿಗೆ ಗೊತ್ತಾಗಿದೆ. ರಾಜ್ಯದಲ್ಲಿ ಎಲ್ಲ ಮುಸ್ಲಿಮರು ಒಂದೇ ರೀತಿ ಇಲ್ಲ. ಕೆಲವರು ಕಾಂಗ್ರೆಸ್ ವಿರೋಧಿಸುತ್ತಾರೆ. ಇದು ನೇರವಾಗಿ ಮುಸ್ಲಿಂ ಲೀಗ್ನ ಪ್ರಣಾಳಿಕೆಯಾಗಿದೆ. ಬಜರಂಗ ದಳ ಬ್ಯಾನ್ ಮಾಡುವ ಮೂಲಕ ಮುಸ್ಲಿಮರ ತುಷ್ಟೀಕರಣಕ್ಕೆ ಕಾಂಗ್ರೆಸ್ ಇಳಿದಿದೆ. ಹೀಗಾಗಿ ಎಲ್ಲ ರಾಷ್ಟ್ರಭಕ್ತ ನಾಗರಿಕರು ಈ ಕಾಂಗ್ರೆಸ್ ಪ್ರಣಾಳಿಕೆ ಬಹಿಷ್ಕರಿಸಲು ಮುಂದಾಗಬೇಕು ಎಂದು ಕೋರಿದರು.
ಬಜರಂಗದಳ ಎಂದರೆ ಆಂಜನೇಯನ ಅನುಯಾಯಿಗಳು. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದು ರಾವಣ. ಹೀಗಾಗಿ ಆಂಜನೇಯ ಬಾಲಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಕಾಂಗ್ರೆಸ್ ದೇಶದೆಲ್ಲೆಡೆ ಸರ್ವನಾಶವಾಗಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಕೂಡ ಕಳೆದುಕೊಳ್ಳಲಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾಕೆ ಎನ್ನುವುದೇ ಕಾಂಗ್ರೆಸ್ಗೆ ಗೊತ್ತಿಲ್ಲ. ಧರ್ಮ, ಜಾತಿ ವಿಚಾರದಲ್ಲಿ ವಿಷಬೀಜ ಬಿತ್ತುವ ಸಂಘಟನೆಗಳ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗರು ನನ್ನ ಹಿಂದೆ ಇದ್ದಾರೆ ಹಾಗಾಗಿ ನಾನು ಸಿಎಂ ಆಗ್ತಿನಿ ಅಂತಾ ಡಿಕೆ ಶಿವಕುಮಾರ್ ಹೇಳುತ್ತಾರೆ. ಹಿಂದುಳಿದ ಸಮಾಜ ನನ್ನ ಹಿಂದೆ ಇದೆ ಇದರಿಂದ ನಾನು ಸಿಎಂ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಇಲ್ಲಿ ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು. ಆದರೆ ಜಾತಿ ಹೆಸರಲ್ಲಿ ಕಾಂಗ್ರೆಸ್ ಪಕ್ಷ ವಿಷಬೀಜ ಬಿತ್ತಿದೆ ಎಂದು ಟೀಕಿಸಿದರು.
ಮೊದಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಅವರ ವಿರುದ್ಧ ದೂರು ಕೊಡುವ ಅವಶ್ಯಕತೆ ಇಲ್ಲ. ಪಿಎಎಫ್ಐ ಸಂಘಟನೆ ಗೋಹತ್ಯೆ ಮಾಡುತ್ತಿದೆ. ಗೋಹತ್ಯೆ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಕೊಲೆ ಆಗಿದೆ. ಪಿಎಎಫ್ಐ ಸಂಘಟನೆ ಮೇಲಿದ್ದ 123 ಕೇಸ್ ವಾಪಸ್ ತೆಗೆದುಕೊಳ್ಳಲಾಗಿದೆ. ಭಯೋತ್ಪಾದನೆಗೆ ಕಾಂಗ್ರೆಸ್ ನೇರವಾಗಿ ಬೆಂಬಲ ನೀಡುತ್ತಿದೆ. ನೇರವಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಜಾತಿ ಹೆಸರಲ್ಲಿ ಮತ ಕೇಳಲು ಕಾಂಗ್ರೆಸ್ಗೆ ಯಾವುದೇ ನೈತಿಕತೆ ಇಲ್ಲ. ಇಡೀ ದೇಶದಲ್ಲಿ ಈಗಾಗಲೇ ಪಿಎಎಫ್ಐ ಬ್ಯಾನ್ ಆಗಿರೋ ವಿಚಾರ ಕಾಂಗ್ರೆಸ್ಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ ಪ್ರಣಾಳಿಕೆ ಸುಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಎಸ್ ಈಶ್ವರಪ್ಪ ಅವರ ನಡೆ ಖಂಡನೀಯ. ಅವರಿಗೆ ಪ್ರಣಾಳಿಕೆ ಇಷ್ಟವಾಗಲಿ ಇಲ್ಲದಿರಲಿ ಸುಡುವುದು ಸರಿಯಲ್ಲ. ಕೆಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆ ಸುಟ್ಟಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ. ರಾಜಕೀಯದಲ್ಲಿ ಈ ನಡೆ ಖಂಡನೀಯ ಎಂದು ಹೇಳಿದ್ದಾರೆ.
ಬಜರಂಗ ದಳ ಸೇರಿದಂತೆ ಸಂವಿಧಾನ ವಿರೋಧಿ ಸಂಘಟನೆಗಳನ್ನು ನಿಷೇಧ ಮಾಡುವ ಉಲ್ಲೇಖವಿರುವ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಕೆಎಸ್ ಈಶ್ವರಪ್ಪ.#KSEshwarappa #Congress #BajrangDal #ಒನ್ಇಂಡಿಯಾಕನ್ನಡಸುದ್ದಿ pic.twitter.com/hTpQX9fIkv
— oneindiakannada (@OneindiaKannada) May 4, 2023












Click it and Unblock the Notifications