ಹೊಟ್ಟೆ ಕಿಚ್ಚು ಎನ್ನುವ ಪದವೇ ನನ್ನಲ್ಲಿಲ್ಲ ಎಂದು ಖರ್ಗೆಗೆ ಜಾಧವ್ ತಿರುಗೇಟು
ಬೆಂಗಳೂರು, ಮಾರ್ಚ್ 11: ಹೊಟ್ಟೆಕಿಚ್ಚು ಎನ್ನುವ ಪದವೇ ನನ್ನಲ್ಲಿಲ್ಲ ಎಂದು ಉಮೇಶ್ ಜಾಧವ್ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡುತ್ತಾ ಉಮೇಶ್ ಜಾಧವ್ ಅವರ ಹೊಟ್ಟೆ ಕಿಚ್ಚಿಗೆ ಔಷಧವಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು ಅವರ ಹೇಳಿಕೆಗೆ ಇದೀಗ ಜಾಧವ್ ಪ್ರತಿಕ್ರಿಯಿಸಿದ್ದಾರೆ.
ಖರ್ಗೆಯವರು ನನ್ನ ಬಗ್ಗೆ ಮಾತನಾಡಲ್ಲ ಎಂದು ಹೇಳುತ್ತಾರೆ. ಮತ್ತೆ ನನ್ನ ಬಗ್ಗೆಯೇ ಮಾತನಾಡುತ್ತಾರೆ. ಪುತ್ರ ವ್ಯಾಮೋಹದಿಂದ ತಮ್ಮ ಮಗನನ್ನು ರಕ್ಷಣೆ ಮಾಡುತ್ತಿದ್ದಾರೆ. ಜಾಧವ್ ಮತ್ತು ಅಜಯ್ ಸಿಂಗ್ ಕೂಡ ನಿಮ್ಮ ಇಬ್ಬರು ಮಕ್ಕಳು ಇದ್ದ ಹಾಗೇ, ನಿಮ್ಮ ಮಕ್ಕಳನ್ನು ರಕ್ಷಣೆ ಮಾಡುವ ರೀತಿ ನಮ್ಮನ್ಯಾಕೆ ಮಾಡಲಿಲ್ಲ ಸಾಹೇಬರೆ ಎಂದು ಪ್ರಶ್ನಿಸಿದ್ದಾರೆ.

ಭಾನುವಾರ ರಾಜೀನಾಮೆ ವಿಚಾರವಾಗಿ ಬೆಂಗಳೂರಿನಲ್ಲಿ ವಕೀಲರನ್ನು ಭೇಟಿ ಮಾಡಿ ಬಂದೆ. ಅವರು ಭರವಸೆಯ ಮಾತುಗಳನ್ನು ಆಡಿದ್ದಾರೆ. ಸ್ಪೀಕರ್ ಮೇಲೂ ನನಗೆ ಸಂಪೂರ್ಣ ವಿಶ್ವಾಸ ಇದೆ. ಅಂಗೀಕಾರ ಆಗುತ್ತದೆ ಎಂದು ನಂಬಿದ್ದೇನೆ. ಸ್ಪೀಕರ್ರಿಂದ ಇದುವರೆಗೂ ನನಗೆ ಯಾವುದೇ ಪತ್ರ ಬಂದಿಲ್ಲ ಎಂದು ಹೇಳಿದರು.
ಖರ್ಗೆಯವರು ದೆಹಲಿಯಲ್ಲಿ ಕೂತು ತಮಗೆ ಬೇಕಾದವರಿಗೆ ಸಚಿವ ಸ್ಥಾನ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿ ಜಾಧವ್, ಸಮುದ್ರದಲ್ಲಿ ನೀರಿನ ಮೇಲೆ ಇರುವ ಸಣ್ಣ ಐಸಿನ ಗಡ್ಡೆಗಳು ದೊಡ್ಡ ದೊಡ್ಡ ಬೋಟ್ಗಳನ್ನು ಬೀಳಿಸುತ್ತದೆ ಎಂದು ಹೇಳುವ ಮೂಲಕ ಖರ್ಗೆ ಅವರಿಗೆ ಟಾಂಗ್ ನೀಡಿದರು.











Click it and Unblock the Notifications