ಬಂದ್ ಗೆ ಸರ್ಕಾರವೇ ಹೊಣೆ ಹೊರತು ಜನರಲ್ಲ...
ಕಲಬುರಗಿ, ಸೆಪ್ಟೆಂಬರ್ 8: ಪತ್ರಕರ್ತರಾದ ಸನತ್ ಕುಮಾರ ಬೆಳಗಲಿಯವರು ಶುಕ್ರವಾರದ (ಸೆಪ್ಟೆಂಬರ್ 9) ಬಂದ್ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ಒನ್ ಇಂಡಿಯಾ ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
ಕಾವೇರಿ, ಮಹದಾಯಿ ಜಲ ವಿವಾದವೆಲ್ಲ ಆಡಳಿತಾತ್ಮಕ ವಿಚಾರ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ, ಕೇಂದ್ರ ಸರ್ಕಾರ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಅದು ತನ್ನ ಕೆಲಸ ಮಾಡಿಲ್ಲ. ಒಂದು ಸಲ ನ್ಯಾಯಾಲಯಕ್ಕೆ ಹೋದರೆ ಅಲ್ಲಿನ ಆದೇಶವನ್ನು ಪಾಲಿಸೋದು ಅನಿವಾರ್ಯವಾಗುತ್ತದೆ.[ಕಾವೇರಿಗಾಗಿ ಕಾವೇರಿದ ಕರ್ನಾಟಕ, ಬಂದ್ ದಿನ ಏನೆಲ್ಲ ಬಂದ್ ?]
ಇದರ ಜೊತೆಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ನೀತಿ ಕೂಡ ಬದಲಾಗಬೇಕಿದೆ. ನಮ್ಮದು ಒಕ್ಕೂಟ ವ್ಯವಸ್ಥೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯವನ್ನೂ ಸಮಾನವಾಗಿ ಕಾಣಬೇಕು. ನಾಳಿನ ಬಂದ್ ಗೆ ಸರ್ಕಾರವೇ ಹೊಣೆ ಹೊರತು ಜನರು ಕಾರಣರಲ್ಲ. ಸಂಘಟನೆಗಳಿಗೆ ಹಲವು ವರ್ಷಗಳಿಂದ ಬಂದ್ ಗೆ ಪರ್ಯಾಯವಾಗಿ ಯಾವುದೇ ಮಾರ್ಗ ಸಿಕ್ಕಿಲ್ಲ. ಒಂದು ವೇಳೆ ದೊರೆತರೆ ಆ ದಾರಿಯಲ್ಲೇ ಹೋಗ್ತಾರೆ.
ಇತ್ತೀಚೆಗೆ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಬಂದ್ ಆಚರಿಸಿದವು. ಮಹದಾಯಿ ಹೋರಾಟ ತಿಂಗಳಾನುಗಟ್ಟಲೆ ನಡೆಯುತ್ತಲೇ ಇದೆ. ಒಂದನ್ನು ಗಮನಿಸಬಹುದು ಜನರಿಗೆ ವ್ಯವಸ್ಥೆ ವಿರುದ್ಧ ಅಸಮಾಧಾನವಿದೆ. ಆ ಆಕ್ರೋಶವನ್ನ ಬಂದ್ ಮೂಲಕ ತಿಳಿಸುತ್ತಿದ್ದಾರೆ. ಬಂದ್ ನಿಂದ ಏನೂ ಸಾಧಿಸುವುದಕ್ಕಾಗಲ್ಲ ಅನ್ನೋದು ಬೇರೆ ಮಾತು. ಆದರೆ ಅದು ಅವರ ಅಸಮಾಧಾನ ಅಭಿವ್ಯಕ್ತಿಪಡಿಸುವ ವಿಧಾನ.[ಕರ್ನಾಟಕ ಬಂದ್ ಗೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಬೆಂಬಲವಿಲ್ಲ?]
ಕಾವೇರಿ ಜಲ ವಿವಾದದ ತೀವ್ರತೆ ಕೂಡ ಮಂಡ್ಯದಲ್ಲಿ ಕಾಣಿಸ್ತಿದೆ. ಅದು ಬಿಟ್ಟರೆ ಬೆಂಗಳೂರು, ಮೈಸೂರು ಭಾಗಗಳಲ್ಲಿದೆ. ಇನ್ನು ಇದು ಕೋರ್ಟ್ ಗೆ ಹೋಗಿ ಬಗೆಹರಿಸಿಕೊಳ್ಳುವಂಥ ವಿಷಯ ಅಲ್ಲ ಅನ್ನೋದು ಮೊದಲು ತಿಳಿದುಕೊಳ್ಳಬೇಕು. ಕೇಂದ್ರ ಸರ್ಕಾರವೇ ಇಂಥ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂಥ ಸಮಿತಿ ರಚಿಸಿ, ರಾಜ್ಯಗಳ ಮಧ್ಯೆ ಸಂಬಂಧ ಹದಗೆಡದ ಹಾಗೆ ನೋಡಿಕೊಳ್ಳಬೇಕು.
ಅಂದಹಾಗೆ, ಸೆಪ್ಟೆಂಬರ್ 9ರ ಬಂದ್ ಬಗ್ಗೆ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.
(ಲೇಖಕರ ಬಗ್ಗೆ: ಸನತ್ ಕುಮಾರ ಬೆಳಗಲಿ ಅವರಿಗೆ ಪತ್ರಕರ್ತರಾಗಿ 42 ವರ್ಷಗಳ ಸುದೀರ್ಘ ಅನುಭವ. ಹೋರಾಟ ಅವರ ಹಿನ್ನೆಲೆ ಎನ್ನುವುದಕ್ಕಿಂತ ಸ್ವಭಾವ. ವಾರ್ತಾಭಾರತಿ ಪತ್ರಿಕೆಯ ಅಂಕಣಕಾರರು. ಖಾದ್ರಿ ಶಾಮಣ್ಣ ಪ್ರಶಸ್ತಿ, ಟಿಎಸ್ ಆರ್ ಪ್ರಶಸ್ತಿ ಪುರಸ್ಕೃತರು. ಕೋಮುವಾದ, ಗುಜರಾತ್ ಹತ್ಯಾಕಾಂಡ ಮತ್ತಿತರ ಕೃತಿಗಳು ಪ್ರಕಟಗೊಂಡಿವೆ.)