ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ; ಉಮೇಶ್ ಕತ್ತಿ
ಕಲಬುರಗಿ, ಜನವರಿ 26: "ರೈತರು ಈ ದೇಶದ ಉಸಿರಾಗಿದ್ದು, ಅನ್ನದಾತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ" ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.
ಮಂಗಳವಾರ ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಹಾಗೂ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು.
"ಉಳುಮೆ, ಬಿತ್ತನೆಯ ಕೃಷಿ ಸಲಕರಣೆಯಿಂದ ಹಿಡಿದು ಬೆಳೆದ ಫಸಲು ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುವವರಿಗೂ ಮಣ್ಣಿನ ಮಕ್ಕಳ ಕೈಹಿಡಿಯುವ ವಿವಿಧ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ" ಎಂದು ಸಚಿವರು ತಿಳಿಸಿದರು.

"ದೇಶದಲ್ಲೇ ಮೊದಲು ಕಾಣಿಸಿಕೊಂಡ ಕೋವಿಡ್ ಸಾವಿನ ಪ್ರಕರಣ ಕಲಬುರಗಿ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಇದೀಗ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಪ್ರಧಾನಿ ನರೇಂದ್ರಮೋದಿ ಅವರ ಇಚ್ಛಾಶಕ್ತಿಯಿಂದ ಭಾರತ ಮೊಟ್ಟಮೊದಲು 'ಕೋವಿಶೀಲ್ಡ್' ಮತ್ತು 'ಕೋವ್ಯಾಕ್ಸಿನ್' ಎಂಬ ಎರಡು ಲಸಿಕೆಗಳನ್ನು ಕಂಡು ಹಿಡಿಯುವ ಮೂಲಕ ಕೋವಿಡ್ ವಿರುದ್ಧದ ಸಮರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ" ಎಂದು ಸಚಿವರು ಹೇಳಿದರು.
"ಕಲಬುರಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ನೀಡುವ ಕೋವಿಡ್ ಲಸಿಕೆ ಕಾರ್ಯ ಮುಂದುವರೆದಿದೆ. ಜನವರಿ 16 ರಿಂದ 25 ರವರೆಗೆ ತಾಲೂಕು ಆಸ್ಪತ್ರೆಗಳು ಸೇರಿ 108 ಕೇಂದ್ರಗಳಲ್ಲಿ 9489 ಆರೋಗ್ಯ ಸಿಬ್ಬಂದಿ ಪೈಕಿ 5350 ಫಲಾನುಭವಿಗಳಿಗೆ ಕೋವಿಡ್ ಲಸಿಕೆ ಹಾಕುವ ಮೂಲಕ ಶೇ. 56 ರಷ್ಟು ಗುರಿ ಸಾಧಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.

"ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2013-14ನೇ ಸಾಲಿನಿಂದ 2020-21ನೇ ಸಾಲಿನವರೆಗೆ ರೂ.7,385 ಕೋಟಿ ರೂಗಳ ಅನುದಾನ ಹರಿದು ಬಂದಿದ್ದು, ಇದರಲ್ಲಿ ರೂ.5,299 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ ರೂ.5,279 ಕೋಟಿ ಅನುದಾನ ವೆಚ್ಚವಾಗಿದ್ದು, ಬಿಡುಗಡೆಯಾದ ಅನುದಾನಕ್ಕೆ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ" ಎಂದು ವಿವರಿಸಿದರು.
"ಕಳೆದ ಜೂನ್ 9 ರಂದು ಅಸ್ತಿತ್ವಕ್ಕೆ ಬಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕಂತಿಕ ಸಂಘವು ಕೃಷಿ, ಶಿಕ್ಷಣ, ಸ್ವಯಂ ಉದ್ಯೋಗ ಕ್ಷೇತ್ರದ ಬೆಳವಣಿಗೆಗಾಗಿ ಟೊಂಕಕಟ್ಟಿ ನಿಂತಿದೆ. ಐಎಎಸ್, ಕೆಎಎಸ್ ಅಕಾಂಕ್ಷಿಗಳಿಗಾಗಿ ಉಚಿತವಾಗಿ ತರಬೇತಿ ನೀಡುವ ಕಾಯಕದಲ್ಲಿ ತೊಡಗಿದೆ. ಕೌಶಾಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಇತ್ತೀಚೆಗೆ ಸಂಘದ ಕಾರ್ಯಚಟುವಟಿಕೆಗಳ ಮಾಹಿತಿ ನೀಡಲು ವೆಬ್ಸೈಟ್ ತೆರೆಯಲಾಗಿದೆ" ಎಂದರು.
"ಕೋವಿಡ್-19 ಸಂದರ್ಭದಲ್ಲಿ ವಿವಿಧ ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮೀಣ ಭಾಗದ ಜನರು ಹಳ್ಳಿಗಳಿಗೆ ಹಿಂತಿರುಗಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ (ನರೇಗಾ) ಅಡಿ ಒಟ್ಟು 54,751 ಕುಂಟುಂಬಗಳಿಗೆ ಉದ್ಯೋಗ ಚೀಟಿ ಒದಗಿಸಿದ್ದು, ಇದರಲ್ಲಿ 1,13,398 ಕೂಲಿ ಕಾರ್ಮಿಕರಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 1,54,346 ಕುಟುಂಬಗಳನ್ನು ಒಳಗೊಂಡಂತೆ 2,70,048 ಜನರಿಗೆ ಕೆಲಸ ನೀಡಲಾಗಿದೆ" ಎಂದು ಹೇಳಿದರು.
"ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ಶುರುವಾಗಿದ್ದು, ಪೈಲಟ್ ಆಗಬೇಕೆಂದಿದ್ದ ಈ ಭಾಗದ ಆಕಾಂಕ್ಷಿಗಳ ಕನಸಿಗೆ ರೆಕ್ಕೆ ಮೂಡಿದೆ. ರಾತ್ರಿ ವೇಳೆಯೂ ವಿಮಾನ ಸಂಚಾರ (ಇಳಿಸುವ) ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಲಾಗುತ್ತಿದೆ" ಎಂದು ಸಚಿವರು ಘೋಷಣೆ ಮಾಡಿದರು.












Click it and Unblock the Notifications