ಲಾಕ್ ಡೌನ್ ನಡುವೆಯೂ ರಾವೂರು ಜಾತ್ರೆ; 220 ಜನರ ವಿರುದ್ಧ ಕೇಸ್
ಕಲಬುರಗಿ, ಏಪ್ರಿಲ್ 18: ಲಾಕ್ ಡೌನ್ ನಡುವೆಯೇ ರಥೋತ್ಸವ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ಸಿದ್ಧಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ 20 ಜನ ಮತ್ತು ಸುಮಾರು 200 ಗ್ರಾಮಸ್ಥರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದರೂ ಲೆಕ್ಕಿಸದೆ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ನೂರಾರು ಜನರು ಸೇರಿ ಏಪ್ರಿಲ್ 16ರಂದು ಸಿದ್ಧಲಿಂಗೇಶ್ವರ ಜಾತ್ರೆ ನೆರವೇರಿಸಿದ್ದರು. ಜಾತ್ರೆ ನಡೆಸುವುದಿಲ್ಲ ಎಂದು ದೇವಸ್ಥಾನದ ಟ್ರಸ್ಟ್ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಗ್ರಾಮ ಪಂಚಾಯತ್ ಪಿಡಿಒಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಇದಾಗಿಯೂ ನೂರಾರು ಜನರು ಸೇರಿಕೊಂಡು ರಥೋತ್ಸವ ನಡೆಸಿ ಲಾಕ್ ಡೌನ್ ಉಲ್ಲಂಘಿಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ದೇವಸ್ಥಾನದ ಟ್ರಸ್ಟ್ ನ ಕಾರ್ಯದರ್ಶಿ ಸೇರಿ 20 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಥೋತ್ಸವದಲ್ಲಿ ಪಾಲ್ಗೊಂಡ ರಾವೂರು ಗ್ರಾಮದ ಸುಮಾರು 150 ರಿಂದ 200 ಜನರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಸೇಡಂ ಎಸಿ, ಚಿತ್ತಾಪುರ ತಹಶೀಲ್ದಾರ್, ಗ್ರಾಮ ಪಂಚಾಯತ್ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಈಗಾಗಲೇ ವಾಡಿ ಪಿಎಸ್ಐ ವಿಜಯಕುಮಾರ್ ಬಾವಗಿ ಹಾಗೂ ಚಿತ್ತಾಪುರ ಸಿಡಿಪಿಒ ಹಾಗೂ ಗ್ರಾಮೀಣ ಹೋಬಳಿ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ ಆಗಿದ್ದ ರಾಜಕುಮಾರ್ ರಾಠೋಡರನ್ನು ಅಮಾನತುಗೊಳಿಸಲಾಗಿದೆ.












Click it and Unblock the Notifications