ಕಲಬುರಗಿ; ಸಾಮ್ರಾಟ್ ಅಶೋಕನ ಶಾಸನ ಸಿಕ್ಕಿದ ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಕಲಬುರಗಿ, ಡಿಸೆಂಬರ್ 28; ಸಾಮ್ರಾಟ್ ಅಶೋಕನು ತನ್ನ ಕುಟುಂಬದೊಂದಿಗಿರುವ ಅಪರೂಪದ ಶಾಸನ ಮೂರ್ತಿ ದೊರೆತಿರುವ ಕಲಬುರಗಿಯ ಸನ್ನತ್ತಿ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಜಾನವಿಜ್ ಶರ್ಮಾ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದರು.
ಮಂಗಳವಾರ ಸ್ಥಳವನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ, ಸ್ಥಳವನ್ನು ಸಂರಕ್ಷಣೆ ಮಾಡಲು, ಸಮಗ್ರ ಅಭಿವೃದ್ಧಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಎ.ಎಸ್.ಐ. ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ವಿಧುರ ನಿಖಿಲದಾಸ್ಗೆ ಜಾನವಿಜ್ ಶರ್ಮಾ ಸೂಚಿಸಿದರು.
ಎ.ಎಸ್.ಐ ತಂಡ ಸನ್ನತ್ತಿ ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಮಾಡಬೂಳ ಅತಿಥಿಗೃಹದಲ್ಲಿ ಸಂಸದ ಡಾ. ಉಮೇಶ ಜಾಧವ ಅವರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಎ.ಎಸ್.ಐ ಜಂಟಿ ಮಹಾ ನಿರ್ದೇಶಕ ಎಂ. ನಂಬಿರಾಜನ್, ಹಂಪಿ ಎ.ಎಸ್.ಐ. ಕಚೇರಿಯ ಉಪ ಇಂಜಿನಿಯರ್ ಕೆಂಪೇಗೌಡ, ಸಹಾಯಕ ಪುರಾತತ್ವ ವಿಧುರ ರವಿಕುಮಾರ ಎಂ. ಜೆ. ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ನೇತೃತ್ವದ ನಿಯೋಗವು ನಿರ್ಲಕ್ಷ್ಯಕ್ಕೊಳಗಾಗಿರುವ ಸನ್ನತಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಚಿವ ಅರ್ಜುನ ರಾಮ ಮೇಘವಾಲ್ ಮತ್ತು ಎ.ಎಸ್.ಐ ಮಹಾನಿರ್ದೇಶಕಿ ವಿ. ವಿದ್ಯಾವತಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಶಾಸನಗಳ ಸಂರಕ್ಷಣೆ ಮೊದಲ ಆದ್ಯತೆ
ಸ್ಥಳದಲ್ಲಿ ಉತ್ಖನನದ ವೇಳೆ ಸಿಕ್ಕಿರುವ ಶಾಸನಗಳಲ್ಲಿ ಬುದ್ಧ ಮತ್ತು ಬೌದ್ಧ ಧರ್ಮ, ಸಾಮ್ರಾಟ್ ಅಶೋಕನ ಕುರಿತು, ಅಶೋಕನ ಕಾಲದಲ್ಲಿನ ಕಲೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನ ಶೈಲಿ ಕುರಿತು ಕುರುಹುಗಳು ಪತ್ತೆಯಾಗಿವೆ. ಇವುಗಳ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಸಂರಕ್ಷಣೆ ಮತ್ತು ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ 2022ರ ಏಪ್ರಿಲ್ನಿಂದಲೇ ಸಂರಕ್ಷಣೆ ಕಾರ್ಯ ಆರಂಭಿಸಲಾಗುತ್ತದೆ, ಇದಕ್ಕೆ ಹಣಕಾಸಿನ ಕೊರತೆಯಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಇಂತಹ ಶಾಸನಗಳು ಎಲ್ಲಿಯೂ ದೊರೆತಿಲ್ಲ
ಸನ್ನತ್ತಿಯಲ್ಲಿ ಅಶೋಕನ ಕಾಲಘಟ್ಟದಲ್ಲಿನ ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿರುವ ಶಾಸನಗಳು ಸಿಕ್ಕಿವೆ. ಇವುಗಳನ್ನು ಭಾಷಾಂತರ ಮಾಡಿ ಇತಿಹಾಸ ತಜ್ಞರನ್ನು ಆಹ್ವಾನಿಸಿ ಹೆಚ್ಚಿನ ಸಂಶೋಧನೆ ಮಾಡಬೇಕಿದೆ. ಬೌದ್ಧ ಸ್ತೂಪ ಇಲ್ಲಿ ಸಿಕ್ಕಿರುವುದರಿಂದ ಸಂಶೋಧನೆಗೆ ಸಹಕಾರಿಯಾಗಲಿದೆ. ಇಲ್ಲಿ ಅಶೋಕನ ಬಗ್ಗೆ ಸಿಕ್ಕಿರುವ ಕುರುಹುಗಳು ಎಲ್ಲಿಯೂ ಸಿಕ್ಕಿಲ್ಲ ಎಂಬುದು ವಿಶೇಷವಾಗಿದೆ.

ಗಾಜಿನಲ್ಲಿಟ್ಟು ಸಂರಕ್ಷಣೆ ಮಾಡಲಾಗಿದೆ
ಅಶೋಕನ ಅಪರೂಪದ ಶಾಸನ ದೊರೆತಿರುವ ಕಾರಣದಿಂದ ಸನ್ನತ್ತಿ ಬೌದ್ಧ ಧರ್ಮದ ವಿಶ್ವದ ಬಹುದೊಡ್ಡ ತಾಣವಾಗಿದ್ದು, ಇದನ್ನು ಯೂನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಸಹ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಕನಗನಹಳ್ಳಿಯಲ್ಲಿ ಅಶೋಕನ ಶಾಸನವನ್ನು ಗಾಜಿನಲ್ಲಿಟ್ಟು ಸಂರಕ್ಷಿಸಿದೆ. ಕುಡಿಯುವ ನೀರಿನ ಆರ್.ಓ ಪ್ಲ್ಯಾಂಟ್ ಸ್ಥಾಪಿಸಿ ಪ್ರದೇಶ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೌದ್ಧ ಧರ್ಮ ಅಲ್ಲದೆ ಇತರೆ ಧರ್ಮಗಳ ಬಗ್ಗೆಯೂ ಉತ್ಖನನದಲ್ಲಿ ಲಭ್ಯವಾಗಿರುವ ಕುರುಹುಗಳಿಂದ ಭೀಮಾ ನದಿ ದಂಡೆಯ ಸುತ್ತ ಹೆಚ್ಚಿನ ಉತ್ಖನನದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.

ಕಾಶಿ ಮಾದರಿಯಲ್ಲಿ ಅಭಿವೃದ್ಧಿ
ಸಾಮ್ರಾಟ್ ಅಶೋಕನ ಶಾಸನ ಮತ್ತು ಬೌದ್ಧ ಸ್ತೂಪ ಪತ್ತೆಯಾಗಿರುವ ಸನ್ನತ್ತಿ ಮತ್ತು ಸುತ್ತಮುತ್ತಲಿನ ಪ್ರದೇಶ ಉತ್ತರ ಪ್ರದೇಶದ ಕಾಶಿ ಮಾದರಿಯಲ್ಲಿ ಐತಿಹಾಸಿಕ ಮತ್ತು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಸಂಸದ ಡಾ. ಉಮೇಶ ಜಾಧವ ಮನವಿ ಮಾಡಿದರು.
ಉತ್ಖನನದಲ್ಲಿ ಸಿಕ್ಕ ಶಾಸನಗಳು ಸೂಕ್ಷ ಸಂರಕ್ಷಣೆಯಿಲ್ಲದೆ ಎರಡು ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದು, ಮೊದಲು ಇವುಗಳ ಸಂರಕ್ಷಣೆಗೆ ಎ.ಎಸ್.ಐ ಆದ್ಯತೆ ನೀಡಬೇಕು. ಜೊತೆಗೆ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಪಡಿಸುವ ಅಗತ್ಯತೆ ಇದೆ. ವಿಶೇಷವಾಗಿ ರಸ್ತೆ, ಕುಡಿಯುವ ನೀರು, ಸ್ವಚ್ಛತಾ ಕಾರ್ಯ ಒಳಗೊಂಡಂತೆ ಮೂಲಭೂತ ಸೌಲಭ್ಯಗಳನ್ನು ಇಲ್ಲಿ ಒದಗಿಸಬೇಕು ಎಂದರು.












Click it and Unblock the Notifications