ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಬಂಧನ
ಕಲಬುರಗಿ, ಆಗಸ್ಟ್, 24: ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಅವರನ್ನು ಬುಧವಾರ (ಆಗಸ್ಟ್ 23) ಕಲಬುರಗಿಯ ಮಾಡಬೂಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ರಾಥೋಡ್ ಅವರನ್ನು ಪೊಲೀಸರು ಯಾಕೆ ಬಂಧಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಿಜೆಪಿ ಕಾರ್ಯಕರ್ತ ದೇವಾನಂದ ರಾಮಚಂದ್ರ ಕೊರಬ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಆರೋಪಿಗಳು ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರಾಗಿದ್ದು, ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರಾಥೋಡ್ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತಪ್ಪು ಸಂದೇಶ ಪ್ರಚಾರ ಮಾಡಿದ ಆರೋಪದ ಮೇರೆಗೆ ರಾಥೋಡ್ ಪೊಲೀಸರು ಬುಧವಾರ (ಆಗಸ್ಟ್ 23) ಬೆಳಗ್ಗೆ ಅಪಾರ್ಟ್ಮೆಂಟ್ವೊಂದರಲ್ಲಿ ಬಂಧಿಸಿದ್ದರು.

ವಿಚಾರಣೆ ಬಳಿಕ ಬಿಜೆಪಿ ಮುಖಂಡ ರಾಥೋಡ್ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಕಲಬುರಗಿ ಹೆಚ್ಚುವರಿ ಎಸ್ಪಿ ಎನ್.ಶ್ರೀನಿಧಿ ಅವರು ತಿಳಸಿದ್ದಾರೆ. ಬಿಜೆಪಿ ಕಾರ್ಯಕರ್ತ ದೇವಾನಂದ್ ರಾಮಚಂದ್ರ ಕೊರಬ ಅವರ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಗಳು ಚಿತ್ತಾಪುರದ ಶಾಸಕರೂ ಆಗಿರುವ ಸಚಿವ ಪ್ರಿಯಾಂಕ್ ಅವರ ಬೆಂಬಲಿಗರಾಗಿರುವ ಕಾರಣ ಪೊಲೀಸರು ಅವರನ್ನು ಬಂಧಿಸುತ್ತಿಲ್ಲ ಎಂದು ರಾಥೋಡ್ ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಅಷ್ಟೇ ಅಲ್ಲದೆ ರಾಥೋಡ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಿನ್ನೆ ಚಿತ್ತಾಪುರದಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು. ಆದರೆ ಕಲಬುರಗಿಯಿಂದ ಚಿತ್ತಾಪುರಕ್ಕೆ ತೆರಳುವುದಕ್ಕೂ ಮುನ್ನವೇ ರಾಥೋಡ್ ಅವರನ್ನು ಬಂಧಿಸಲಾಗಿದೆ. ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ವೇಳೆ ರಾಥೋಡ್ ಬಿಡುಗಡೆಗೆ ಒತ್ತಾಯಿಸಿದ್ದರು.
ಮಣಿಕಂಠ ರಾಥೋಡ್ ಅವರು ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರದಿಂದ ಪ್ರಿಯಾಂಕ್ ವಿರುದ್ಧ 14,968 ಮತಗಳ ಅಂತರದಿಂದ ಸೋಲುಂಡಿದ್ದರು. ಹಾಗೆಯೇ ಮತ್ತೊಂದೆಡ ರಾಥೋಡ್ ವಿರುದ್ಧ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳು ಇವೆ ಎನ್ನಲಾಗಿದೆ.












Click it and Unblock the Notifications