ಬಿಎಸ್ಪಿ, ಕಾಂಗ್ರೆಸ್ ವಿಲೀನ; ಮಾಯಾವತಿ ಹೇಳುವುದೇನು?
ಜೈಪುರ, ಜುಲೈ 28 : ಬಿಎಸ್ಪಿ ಆರು ಶಾಸಕರಿಗೆ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡುವಂತೆ ಸೂಚನೆ ನೀಡಿದೆ. ಮತ್ತೊಂದು ಕಡೆ ಶಾಸಕರು ನಾವು ಕಾಂಗ್ರೆಸ್ ಜೊತೆ ವಿಲೀನವಾಗಿದ್ದೇವೆ ಎಂದು ಹೇಳುತ್ತಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಎಸ್ಪಿ ಶಾಸಕರ ಬಗ್ಗೆ ಚರ್ಚೆ ನಡೆಯುತ್ತಿದೆ. ಮಂಗಳವಾರ ಬಿಜೆಪಿ ನಾಯಕ ಮದನ್ ದಿವಾರ್ ರಾಜಸ್ಥಾನ ಹೈಕೋರ್ಟ್ನಲ್ಲಿ 2ನೇ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್, ಬಿಎಸ್ಪಿ ವಿಲೀನ ವಿರೋಧಿಸಿದ್ದಾರೆ.
ಬಿಎಸ್ಪಿ ವರಿಷ್ಠೆ ಮಾಯಾವತಿ ಮಂಗಳವಾರ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಕಾಂಗ್ರೆಸ್ ವಿರುದ್ಧ ಮತದಾನ ಮಾಡುವಂತೆ 6 ಶಾಸಕರಿಗೆ ನಾವು ಸೂಚನೆ ನೀಡಿದ್ದೇವೆ. ಅವರು ಹಾಗೆ ಮಾಡದಿದ್ದಲ್ಲಿ ಅವರ ಪಕ್ಷದ ಸದಸ್ಯತ್ವ ರದ್ದಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

"ಬಿಎಸ್ಪಿ ಹಿಂದೆ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ನಾವು ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಪಾಠ ಕಲಿಸಲು ಸಮಯಕ್ಕಾಗಿ ಕಾಯುತ್ತಿದ್ದೆವು" ಎಂದು ಮಾಯಾವತಿ ಹೇಳಿದ್ದಾರೆ.
"ಈ ವಿಚಾರವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ನಾವು ಸುಪ್ರೀಂಕೋರ್ಟ್ ತನಕ ಬೇಕಾದರೂ ಹೋಗುತ್ತೇವೆ" ಎಂದು ಬಿಎಸ್ಪಿ ಮುಖ್ಯಸ್ಥೆ ತಿಳಿಸಿದ್ದಾರೆ.
2019ರ ಸೆಪ್ಟೆಂಬರ್ನಲ್ಲಿ ರಾಜಸ್ಥಾನ ಚುನಾವಣೆ ಮುಗಿದ ಬಳಿಕ ಬಿಎಸ್ಪಿ ಚಿನ್ಹೆಯಿಂದ ಆಯ್ಕೆಯಾದ 6 ಶಾಸಕರು ನಾವು ಕಾಂಗ್ರೆಸ್ ಪಕ್ಷದ ಜೊತೆ ವಿಲೀನವಾಗಿದ್ದೇವೆ ಎಂದು ಘೋಷಣೆ ಮಾಡಿದರು. ಸ್ಪೀಕರ್ ಸಹ ಇದಕ್ಕೆ ಒಪ್ಪಿಗೆ ನೀಡಿದ್ದರು. ಆದರೆ, ಬಿಎಸ್ಪಿ ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡಿದೆ.












Click it and Unblock the Notifications