ಕೇಂದ್ರ ಸರ್ಕಾರದಲ್ಲಿ ರೈತರನ್ನು ಪ್ರತಿನಿಧಿಸುವವರು ಯಾರೂ ಇಲ್ಲ: ಸಚಿನ್ ಪೈಲಟ್
ಜೈಪುರ,ಜನವರಿ 10:ಕೇಂದ್ರ ಸರ್ಕಾರದಲ್ಲಿ ಒಬ್ಬ ರೈತ ಪ್ರತಿನಿಧಿಯೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಆರೋಪಿಸಿದ್ದಾರೆ.
ಹೊಸ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಸಚಿನ್ ಪೈಲಟ್ ಒತ್ತಾಯಿಸಿದ್ದು, ರೈತರ ಪರವಾಗಿ ಧ್ವನಿ ಎತ್ತಲು ಕೇಂದ್ರದಲ್ಲಿ ಒಬ್ಬರೂ ರೈತ ಪ್ರತಿನಿಧಿಯಿಲ್ಲ ಎಂದರು.
ಈ ವಿವಾದಿತ ಕೃಷಿ ಕಾನೂನನ್ನು ಜಾರಿಗೆ ತರುವ ಮೊದಲು ಸರ್ಕಾರವು ರೈತರ ಬಳಿ ಚರ್ಚಿಸಿಲ್ಲ, ರೈತರ ದುಸ್ಥಿತಿ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಪಕ್ಷದ ಕಿಸಾನ್ ಬಚಾವೋ, ದೇಶ್ ಬಚಾವೋ ಅಭಿಯಾನದಲ್ಲಿ ಸಚಿನ್ ಪೈಲಟ್, ಹಲವು ವೇದಿಕೆಗಳಲ್ಲಿ ರೈತರೊಂದಿಗೆ ಸಂವಾದ ನಡೆಸುತ್ತಿದ್ದಾರೆ.
ಆರ್ಥಿಕತೆ ಕುಸಿತ ಕಂಡಿದೆ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ, ಹಣದುಬ್ಬರ ಹೆಚ್ಚಳವಾಗುತ್ತಿದೆ. ನಿರುದ್ಯೋಗ ಸಮಸ್ಯೆ ತಲೆದೋರಿದೆ. ಇಂತಹ ಸಂದರ್ಭದಲ್ಲಿ ಈ ಕಾಯ್ದೆಗಳು ರೈತರಿಗೆ ಹೊಡೆತ ನೀಡುತ್ತಿದೆ.
ಇದೇ ಮೊದಲ ಬಾರಿಗೆ ವಿವಿಧ ವಿರೋಧ ಪಕ್ಷಗಳು ಒಗ್ಗೂಡಿ, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದೆ. ಇವುಗಳನ್ನು ಜಾರಿಗೆ ತರುವ ಮೊದಲು ಸರ್ಕಾರವು ಅಥವಾ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಿಲ್ಲ ಎಂದು ದೂರಿದರು.