ಸಚಿನ್ ಪೈಲೆಟ್ ಮುಂದಿನ ನಡೆ; ಶುಕ್ರವಾರ ನಿರ್ಣಾಯಕ ದಿನ!
ಜೈಪುರ, ಜುಲೈ 21 : ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರ ಅನರ್ಹತೆಯ ವಿಚಾರದ ಬಗ್ಗೆ ವಿಚಾರಣೆ ಪೂರ್ಣಗೊಂಡಿದೆ. ರಾಜಸ್ಥಾನ ಹೈಕೋರ್ಟ್ ಪ್ರಕರಣದ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿದೆ.
ಸಚಿನ್ ಪೈಲೆಟ್ ಸೇರಿ 19 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೋಟಿಸ್ ನೀಡಿದ್ದಾರೆ. ಹೈಕೋರ್ಟ್ನಲ್ಲಿ ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ಪೂರ್ಣಗೊಂಡಿದೆ.
ಶುಕ್ರವಾರ ಆದೇಶ ಪ್ರಕಟಿಸುವ ತನಕ ಸ್ಪೀಕರ್ ನೋಟಿಸ್ ಕುರಿತು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಕಾಂಗ್ರೆಸ್ ಪಕ್ಷ ಮತ್ತು ಸಚಿನ್ ಪೈಲೆಟ್ ನಡುವಿನ ಹೋರಾಟ ಶುಕ್ರವಾರ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆ ಇದೆ.
ಮಂಗಳವಾರ ಶಾಸಕರ ಪರವಾಗಿ ವಾದ ಮಂಡನೆ ಮಾಡಿದ ಹಿರಿಯ ವಕೀಲ ಮುಕುಲ್ ರೋಹಟಗಿ, "ಸ್ಪೀಕರ್ ಒತ್ತಡಕ್ಕೆ ಒಳಗಾಗಿ ನೋಟಿಸ್ ನೀಡಿದ್ದಾರೆ. ಇಲ್ಲಿ ವಿಚಾರಣೆ ನಡೆಸುವ ಅಗತ್ಯವೇ ಇಲ್ಲ" ಎಂದು ವಾದವನ್ನು ಮಂಡಿಸಿದರು.

ಒತ್ತಡದಲ್ಲಿ ನೋಟಿಸ್ ನೀಡಿದ್ದಾರೆ
"ಕೊರೊನಾ ವೈರಸ್ ಭೀತಿಯ ವಾತಾವರಣದಲ್ಲಿ ಶಾಸಕರಿಗೆ ನೋಟಿಸ್ಗೆ ಉತ್ತರ ನೀಡಲು ಕೇವಲ 3 ದಿನದ ಅವಕಾಶ ನೀಡಲಾಗಿದೆ. ಇದನ್ನು ನೋಡಿದರೆ ಒತ್ತಡ ಮತ್ತು ಪೂರ್ವಗ್ರಹ ಪೀಡಿತರಾಗಿ ನೋಟಿಸ್ ನೀಡಿರುವುದು ಖಚಿತವಾಗುತ್ತದೆ" ಎಂದು ಮುಕುಲ್ ರೋಹಟಗಿ ವಾದಿಸಿದರು.

ಪ್ರಶ್ನಿಸಲು ಅವಕಾಶವೇ ಇಲ್ಲ
ಸ್ಪೀಕರ್ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, "ಶಾಸಕರಿಗೆ ಸ್ಪೀಕರ್ ನೋಟಿಸ್ ಕುರಿತು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡುವ ಅವಕಾಶವೇ ಇಲ್ಲ. ಸ್ಪೀಕರ್ ಯಾವುದೇ ತೀರ್ಮಾನ ಕೈಗೊಳ್ಳದ ಹೊರತು ಪ್ರಶ್ನೆ ಮಾಡಲು ಬರುವುದಿಲ್ಲ" ಎಂದು ವಾದ ಮಂಡಿಸಿದರು.

ಅಶೋಕ್ ಗೆಹ್ಲೋಟ್ ವಿಶ್ವಾಸ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಬಳಿ 103 ಶಾಸಕರು ಇದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆಗಿಂತ ಇಬ್ಬರು ಶಾಸಕರು ಹೆಚ್ಚಿದ್ದಾರೆ. ಬಿಟಿಪಿ ಪಕ್ಷ ಸರ್ಕಾರಕ್ಕೆ ಬೆಂಬಲ ನೀಡಿದ್ದು, ವಿಶ್ವಾಸಮತ ಯಾಚನೆ ಸಮಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಲಿದೆ.

ಶುಕ್ರವಾರ ನಿರ್ಣಾಯಕ ದಿನ
ಶುಕ್ರವಾರ ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟಿಗೆ ನಿರ್ಣಾಯಕ ದಿನವಾಗಿದೆ. ಒಂದು ವೇಳೆ ನ್ಯಾಯಾಲಯದ ತೀರ್ಪಿ ಸ್ಪೀಕರ್ ಪರವಾಗಿಯೇ ಬಂದರೆ ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರು ಅನರ್ಹಗೊಳ್ಳಲಿದ್ದಾರೆ. ಅಗ ವಿಧಾನಸಭೆ ಬಲ 191ಕ್ಕೆ ಕುಸಿಯಲಿದ್ದು, ಅಶೋಕ್ ಗೆಹ್ಲೋಟ್ ಸರ್ಕಾರ ಸುಲಭವಾಗಿ ವಿಶ್ವಾಸಮತಗಳಿಸಲಿದೆ.












Click it and Unblock the Notifications