ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ: ಶಿಕ್ಷಕ, ಪ್ರಾಂಶುಪಾಲರ ವಿರುದ್ಧ ಪ್ರಕರಣ
ಡಿಸೆಂಬರ್ 8: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ ಆರೋಪದಲ್ಲಿ ಒಂಬತ್ತು ಶಿಕ್ಷಕರು ಮತ್ತು ಸರ್ಕಾರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಾಲೆಗೆ ಹೋಗಲು ಬಯಸದ ಮಗಳನ್ನು ತಂದೆ ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ 10ನೇ ತರಗತಿ ವಿದ್ಯಾರ್ಥಿ. ಸಂತ್ರಸ್ತೆ ತನ್ನ ಮೇಲೆ ಶಾಲೆಯ ಪ್ರಾಂಶುಪಾಲರು ಮತ್ತು ಇತರ ಮೂವರು ಶಿಕ್ಷಕರಿಂದ ಒಂದು ವರ್ಷದಿಂದ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಹೇಳಿಕೊಂಡಿದ್ದಾಳೆ. ಇಬ್ಬರು ಶಿಕ್ಷಕರು ಕೃತ್ಯದ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆಂದು ಹೇಳಿಕೊಂಡಿದ್ದಾರೆ.
ಮಂಧಾನ ಪೊಲೀಸ್ ಠಾಣಾಧಿಕಾರಿ ಮುಖೇಶ್ ಯಾದವ್ ಮಾತನಾಡಿ, 'ಈ ವಿಷಯಕ್ಕೆ ಸಂಬಂಧಿಸಿದಂತೆ ಮೂರು ವಿಭಿನ್ನ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ಸಮಯದಲ್ಲಿ, 6 ನೇ ತರಗತಿ, 4 ನೇ ತರಗತಿ ಮತ್ತು 3 ನೇ ತರಗತಿಯಲ್ಲಿ ಓದುತ್ತಿರುವ ಇನ್ನೂ ಮೂವರು ಬಲಿಪಶುಗಳು ಮುಂದೆ ಬಂದು ಪ್ರಾಂಶುಪಾಲರು ಮತ್ತು ಶಿಕ್ಷಕರ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಿದರು. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆಂದು' ಹೇಳಿದ್ದಾರೆ.

ತನಿಖೆಯ ನಂತರ, ಅಲ್ವಾರ್ನ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಶಾಲೆಯ ಪ್ರಾಂಶುಪಾಲರು ಮತ್ತು ಒಂಬತ್ತು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ, ಸಂತ್ರಸ್ತರು ಶಿಕ್ಷಕರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಮಾಡಿದ್ದಾರೆ.
ಈ ವಿಷಯವನ್ನು ಮಹಿಳಾ ಶಿಕ್ಷಕರಿಗೆ ತಿಳಿಸಲು ಮುಂದಾದಾಗ ವಿದ್ಯಾರ್ಥಿನಿಯರಿಗೆ ಆಮಿಷ ನೀಡಿರುವ ಆರೋಪ ಕೂಡ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ಶುಲ್ಕ ಮತ್ತು ಅವರ ಪುಸ್ತಕಗಳನ್ನು ಪಾವತಿಸಲು ಆಫರ್ ಮಾಡಿದ್ದಾರೆ ಎಂದು ಸಂತ್ರಸ್ತರಲ್ಲಿ ಒಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಯಾರಿಗೂ ದೂರು ನೀಡದಂತೆ ಶಿಕ್ಷಕರು ಸಹ ಕೇಳಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

"ಇದಾದ ನಂತರ ನನ್ನನ್ನು ಪ್ರಾಂಶುಪಾಲರು ಸೇರಿದಂತೆ ಮೂರು ಶಿಕ್ಷಕರ ಮನೆಗೆ ಹಲವಾರು ಬಾರಿ ಕರೆದೊಯ್ದರು. ಎಲ್ಲಾ ಶಿಕ್ಷಕರು ಮನೆಯಲ್ಲಿ ಮದ್ಯ ಸೇವಿಸಿ ನಂತರ, ಅವರು ನನ್ನ ಬಟ್ಟೆಗಳನ್ನು ತೆಗೆದು ತಪ್ಪು ಮಾಡಿದರು" ಎಂದು ಸಂತ್ರಸ್ತರು ಹೇಳಿದ್ದಾರೆ.
'ಘಟನೆಯ ಬಗ್ಗೆ ನಾನು ತಿಳಿದ ತಕ್ಷಣ ಶಿಕ್ಷಕರ ವಿರುದ್ಧ ದೂರು ನೀಡಲು ಶಾಲೆಗೆ ಹೋದಾಗ, ಪ್ರಾಂಶುಪಾಲರು ತಮ್ಮ ಸಹೋದರ ಮಂತ್ರಿ ಎಂದು ಹೇಳಿ ನನ್ನನ್ನು ಹೆದರಿಸಿದ್ದಾರೆ' ಎಂದು ಸಂತ್ರಸ್ತರೊಬ್ಬರ ತಂದೆ ಹೇಳಿಕೊಂಡಿದ್ದಾರೆ. ಜೊತೆಗೆ ಪ್ರಾಂಶುಪಾಲರು ನಾನು ದೂರು ನೀಡಿದರೆ ನನ್ನನ್ನು ಕೊಲ್ಲುತ್ತೇನೆ ಎಂದು ಹೆದರಿಸಿದ್ದಾರೆಂದು ಸಂತ್ರಸ್ತೆ ತಂದೆ ದೂರಿದ್ದಾರೆ.
ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ಪ್ರಾಂಶುಪಾಲರು, ಅಂತಹ ಯಾವುದೇ ಪ್ರಕರಣದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದರು. ನಮ್ಮ ಶಾಲೆಯಲ್ಲಿ ನೀವು ಹೇಳುವಂತ ಶಿಕ್ಷಕರು ಯಾರೂ ಇಲ್ಲ. ನಾವೂ ಕೂಡ ಯಾವ ವಿದ್ಯಾರ್ಥಿಗೂ ನೀವು ಹೇಳುವಂತೆ ನಡೆದುಕೊಂಡಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಶಿಕ್ಷಕರು ಕೊಂಚ ಸಲಿಗೆಯಿಂದ ವರ್ತಿಸಿರಬಹುದು ಇದನ್ನೇ ವಿದ್ಯಾರ್ಥಿಗಳು ತಪ್ಪಾಗಿ ಗ್ರಹಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೊರೊನಾ ಕಾರಣದಿಂದ ಒಂದುವರೆ ವರ್ಷದಿಂದ ಬಂದ್ ಮಾಡಲಾಗಿದ್ದ ಶಾಲೆಗಳ ಬಾಗಿಲು ಈಗಿನ್ನು ತೆರೆದುಕೊಳ್ಳುತ್ತಿವೆ. ಇದರ ಮಧ್ಯೆ ಕೊರೊನಾ ರೂಪಾಂತರ ವೈರಸ್ ಓಮಿಕ್ರಾನ್ ಕೂಡ ಎಲ್ಲೆಡೆ ಹರಡಿಕೊಳ್ಳುತ್ತಿದ್ದು ಆತಂಕ ಅಧಿಕಗೊಳ್ಳುತ್ತಿದೆ. ಹೀಗಿರುವಾಗ ಇಂಥಹ ಘಟನೆ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಮತ್ತಷ್ಟು ಭೀತಿಯನ್ನು ಸೃಷ್ಟಿಸುತ್ತವೆ. ಹೀಗಾಗಿ ಶಾಲೆಗಳಲ್ಲಿ ಇಂತಹ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳುವುದು ಅತ್ಯಾವಶ್ಯಕ.












Click it and Unblock the Notifications