ರಾಜಸ್ಥಾನ : ಜನರ ಗುಂಪಿನಿಂದ ಹಲ್ಲೆ, ಹೆಡ್ ಕಾನ್ಸ್ಟೇಬಲ್ ಸಾವು
ಜೈಪುರ, ಜುಲೈ 14 : ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೇಲೆ ಜನರ ಗುಂಪು ಹಲ್ಲೆ ನಡೆಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ.
ಅಬ್ದುಲ್ ಗನಿ (48) ಮೃತಪಟ್ಟ ಪೊಲೀಸ್ ಹೆಡ್ ಕಾನ್ಸ್ಟೇಬಲ್. ಜಮೀನು ವಿವಾದವನ್ನು ಬಗೆಹರಿಸಲು ಅಬ್ದುಲ್ ತೆರಳಿದ್ದರು. ಒತ್ತುವರಿ ಸಂಬಂಧ ಜನರ ಜೊತೆ ಮಾತಿನ ಚಕಮಕಿ ನಡೆದಿತ್ತು.
ಆಕ್ರೋಶಗೊಂಡ ಜನರು ಅಬ್ದುಲ್ ಗನಿ ಅವರ ಮೇಲೆ ಹಲ್ಲೆ ಮಾಡಿದ್ದರು. ಜನರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಆತಂಕ ಮೂಡಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಕೆಲವು ವರ್ಷಗಳಿಂದ ರಾಜಸ್ಥಾನ ಜನರಿಂದ ಹಲ್ಲೆ ನಡೆಸಿ ಹತ್ಯೆ ಮಾಡುವ ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ 28 ವರ್ಷದ ಯುವಕನನ್ನು ಕಳೆದ ವರ್ಷ ಜನರು ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿತ್ತು.
2017ರ ಏಪ್ರಿಲ್ 23ರಂದು ಪೆಹ್ಲು ಖಾನ್ ತನ್ನ ಇಬ್ಬರು ಮಕ್ಕಳ ಜೊತೆ ಜೈಪುರದಲ್ಲಿ ನಡೆಯುವ ಜಾತ್ರೆಯಲ್ಲಿ ದನಗಳನ್ನು ಮನೆಗಾಗಿ ಖರೀದಿ ಮಾಡಿದ್ದ. ಅದನ್ನು ಹರ್ಯಾಣಕ್ಕೆ ಸಾಗಣೆ ಮಾಡುವಾಗ ಗೋ ರಕ್ಷಕರು ಅವರ ಮೇಲೆ ದಾಳಿ ಮಾಡಿದ್ದರು. ಪೆಹ್ಲು ಖಾನ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.












Click it and Unblock the Notifications