ರಾಹುಲ್ ನಮ್ಮ ಕ್ಯಾಪ್ಟನ್: ನಂಟಿಗೆ ತೇಪೆ ಹಚ್ಚಲು ಮುಂದಾದ ಗೆಹ್ಲೋಟ್
ಜೈಪುರ, ಜುಲೈ 23: "ರಾಹುಲ್ ಗಾಂಧಿ ನಮ್ಮ ಕ್ಯಾಪ್ಟನ್, ಅದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ" ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.
ರಾಹುಲ್ ಗಾಂಧಿ ಅವರನ್ನು ನಾವು ನಾಯಕ ಎಂದು ಒಪ್ಪಿಕೊಂಡಿದ್ದೇವೆ. ಅವರು ಎಂದಿಗೂ ನಾಯಕರಾಗಿಯೇ ಉಳಿಯುತ್ತಾರೆ ಎಂದು ಪತ್ರಕರ್ತರಿಗೆ ಗೆಹ್ಲೋಟ್ ಹೇಳಿದರು. ಕಾಂಗ್ರೆಸ್ ಕಾರ್ಯಕಾರಿಣಿ ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತದೆ. ಆದರೆ ಪಕ್ಷದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿದೆ ಎಂಬ ಮಾತು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು. ಲೋಕಸಭೆ ಚುನಾವಣೆಯ ನಂತರ ರಾಹುಲ್ ಗಾಂಧಿ ಮತ್ತು ಅಶೋಕ್ ಗೆಹ್ಲೋತ್ ಅವರ ನಡುವೆ ನಡೆದಿದ್ದ ಪರೋಕ್ಷ ವಾಕ್ಸಮರದಿಂದ ಹದಗೆಟ್ಟಿರುವ ನಂಟಿಗೆ ತೇಪೆ ಹಚ್ಚುವ ಪ್ರಯತ್ನವನ್ನು ಗೆಹ್ಲೋಟ್ ಮಾಡಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಪ್ರಚಾರ ಮಾಡಿ ಜನರ ಹಾದಿ ತಪ್ಪಿಸಿದರು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿದರು. ಜನರಿಗೆ ಈಗಲೂ ಇವಿಎಂ ಬಗ್ಗೆ ಅನುಮಾನವಿದೆ. ಮೋದಿ ಗೆಲುವು ಸಾಧಿಸಿರಬಹುದು. ಆದರೆ ಆರ್ಥಿಕತೆ, ಉದ್ಯೋಗಾವಕಾಶ ಸೃಷ್ಟಿ, ರೈತರ ಸಮಸ್ಯೆಯ ಪರಿಹಾರದ ವಿಷಯ ಬಂದಾಗ ಅವರು ಎಂದಿಗೂ ಗೆಲುವು ಸಾಧಿಸಿಲ್ಲ" ಎಂದು ಗೆಹ್ಲೋಟ್ ಪ್ರಧಾನಿ ಮೋದಿ ಮೇಲೆ ವಾಕ್ಪ್ರಹಾರ ನಡೆಸಿದರು.
ಉತ್ತರ ಪ್ರದೇಶದ ಸೋನ್ ಭದ್ರಕ್ಕೆ ತೆರಳಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡೆಯನ್ನು ಅಶೋಕ್ ಗೆಹ್ಲೋಟ್ ಶ್ಲಾಘಿಸಿದರು.
"ಪ್ರಜಾಪ್ರಭುತ್ವದಲ್ಲಿ ಜನರ ನೋವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರಿಗೆ ಸಾಂತ್ವನ ಹೇಳುವುದು ನಾಯಕರ ಕರ್ತವ್ಯ. ಅದಕ್ಕೆಂದೇ ಅವರು ಸೋನ್ ಭದ್ರಕ್ಕೆ ತೆರಳಿದ್ದರು. ಅದರಲ್ಲಿ ತಪ್ಪೇನಿತ್ತು? ಅವರನ್ನು ತಡೆದಿದ್ದು ಯಾರು? ಯಾಕೆ ತಡೆದರು?" ಎಂದು ಗೆಹ್ಲೋಟ್ ಪ್ರಶ್ನಿಸಿದರು.

ಮೋದಿಯನ್ನು ಗುರಿಯಾಗಿಸಿ ವಾಗ್ಬಾಣ
"ಈ ದೇಶದಲ್ಲಿ ರಾಜಕೀಯ ಗೂಂಡಾಗಿರಿ ನಡೆಯುತ್ತಿರುವುದು ಶೋಚನೀಯ. ತೆಲಂಗಾಣದಲ್ಲಿ 12 ಶಾಸಕರನ್ನು ಕಾಂಗ್ರೆಸ್ ನಿಂದ ದೂರಮಾಡಲಾಯ್ತು, ಕರ್ನಾಟಕದಲ್ಲೂ ಕುದುರೆ ವ್ಯಾಪಾರ ನಡೆಯುತ್ತಿದೆ, ಗೋವಾದಲ್ಲೂ ಅದೇ ಕತೆ. ಕಾಂಗ್ರೆಸ್ ನಲ್ಲಿದ್ದಾಗ ಆ ಶಾಸಕರನ್ನು ಗೂಂಡಾಗಳೆಂದು ಕರೆದು, ಇದೀಗ ಅವರನ್ನೇ ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಮಂತ್ರಿ ಪದವಿ ನೀಡುತ್ತಿದ್ದೀರಿ, ಈ ರಾಜಕೀಯ ಗೂಂಡಾಗಿರೇ ಬಿಜೆಪಿಯನ್ನು ಸರ್ವನಾಶ ಮಾಡುತ್ತದೆ" ಎಂದು ಗೆಹ್ಲೋಟ್ ಹೇಳಿದರು.
ಚಂದ್ರಯಾನ-2 ರ ಸಾಧನೆಗಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ ಅವರು, ಇಸ್ರೋ ಸ್ಥಾಪಿಸಿದ ಜವಹರಲಾಲ್ ನೆಹರು ಅವರ ದೂರದೃಷ್ಟಿಯನ್ನು ಕೊಂಡಾಡಿದರು.

ರಾಹುಲ್ ಗಾಂಧಿ ಮುನಿಸು
ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ 25 ಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲನುಭವಿಸಿತ್ತು. "ತಮ್ಮ ಮಗನಿಗಾಗಿ ಪಕ್ಶಃದ ಹಿತಾಸಕ್ತಿಯನ್ನು ಬಲಿಕೊಟ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಂದ ಪಕ್ಷ ಈ ಪರಿ ಹೀನಾಯ ಸ್ಥಿತಿಗೆ ತಲುಪಬೇಕಾಯ್ತು" ಎಂದು ಫಲಿತಾಂಶದ ಬಳಿಕ ಪಕ್ಷಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ಗೆಹ್ಲೋಟ್ ಅವರನ್ನು ದೂರಿದ್ದರು. ಪಕ್ಷದ ವರಿಷ್ಟರ ವಿರೋಧದ ನಡುವೆಯೂ ತಮ್ಮ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ಜೋಧ್ ಪುರ ಕ್ಷೇತ್ರದಿಂದ ಅಶೋಕ್ ಗೆಹ್ಲೋಟ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಆದರೆ ಈ ಕ್ಷೇತ್ರದಲ್ಲಿ ಬಿಜೆಪಿಯ ಗಜೇಂದ್ರ ಸಿಂಗ್ ಶೆಖಾವತ್ ಅವರ ವಿರುದ್ಧ ಸುಮಾರು 2.5 ಲಕ್ಷ ಮತಗಳ ಅಂತರದಿಂದ ವೈಭವ್ ಸೋಲುಂಡಿದ್ದರು.

ಮಗನ ಸೋಲಿಗೆ ಪೈಲಟ್ ಹೊಣೆ ಎಂದಿದ್ದ ಗೆಹ್ಲೋಟ್
ವೈಭವ್ ಅವರನ್ನು ಜೋಧಪುರ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎನ್ನುವುದು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಅಭಿಪ್ರಾಯವಾಗಿತ್ತು. ತಮ್ಮ ಮಗ ಸೋಲಲಿ ಎಂದೇ ಅವರು ಈ ಕ್ಷೇತ್ರವನ್ನು ಆರಿಸಿದ್ದರು ಎಂದು ಫಲಿತಾಂಶದ ನಂತರ ನೇರವಾಗಿಯೇ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಅವರನ್ನು ದೂರಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ ನಲ್ಲಿ ಆಗಲೇ ಮುಖ್ಯಮಂತ್ರಿ ಹುದ್ದೆಗಾಗಿ ಗೆಹ್ಲೋಟ್ ಮತ್ತು ಪೈಲಟ್ ನಡುವೆ ಮನಸ್ತಾಪ ಎದ್ದಿತ್ತು. ಆದರೆ ಹಿರಿತನದ ಆಧಾರದ ಮೇಲೆ ಗೆಹ್ಲೋಟ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು.

ರಾಹುಲ್ ಜೊತೆ ಮನಸ್ತಾಪ
ಆದರೆ ಲೋಕಸಭೆ ಚುನಾವಣೆಯ ನಂತರ ''ಗೆಹ್ಲೋಟ್ ರಾಜೀನಾಮೆ ನೀಡಬೇಕು. ಪೈಲಟ್ ಮುಖ್ಯಮಂತ್ರಿಯಾಗಬೇಕು" ಎಂಬ ಕೂಗು ಕೇಳಿಬಂದಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಗೆಹ್ಲೋಟ್, ಪರೋಕ್ಷವಾಗಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರೂ ಸೋಲಿಗೆ ಕಾರಣ ಎಂದು ಹೆಸರು ಹೇಳದೆ ದೂರಿದ್ದರು. ನಾನು ಮಾತ್ರ ಯಾಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ್ದರು. ಇದರಿಂದ ಬೇಸರಗೊಂಡ ರಾಹುಲ್ ಗಾಂಧಿ ತಕ್ಷಣವೇ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದರು. ಈ ಎಲ್ಲ ಘಟನೆಯ ನಂತರ ಇದೀಗ ರಾಹುಲ್ ಗಾಂಧಿ ಜೊತೆಗಿನ ತಮ್ಮ ಸಂಬಂಧವನ್ನು ಸರಿಮಾಡಿಕೊಳ್ಳಲು ಮುಂದಾಗಿರುವ ಗೆಹ್ಲೋಟ್ ರಾಹುಲ್ ಅವರನ್ನು 'ಕ್ಯಾಪ್ಟನ್' ಎಂದಿದ್ದಾರೆ!












Click it and Unblock the Notifications