ಜೈಪುರ: ಹಿಂದೂ ಯುವಕ ಕೊಲೆ; ಇಂಟರ್ನೆಟ್ ಸ್ಥಗಿತ
ಜೈಪುರ, ಮೇ 11: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ 22 ವರ್ಷದ ಹಿಂದೂ ಯುವಕನನ್ನು ಹತ್ಯೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಭಿಲ್ವಾರ ನಗರವು ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದರ ಬೆನ್ನಲ್ಲೇ ಇಲ್ಲಿನ ಜಿಲ್ಲಾಡಳಿತದ ವತಿಯಿಂದ ಗುರುವಾರದವರೆಗೆ ಅಂತರ್ಜಾಲವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಭಿಲ್ವಾರದ ಕೊಟವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಕೊಲೆ ನಡೆದಿದ್ದು, ಸದ್ಯ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಹೋದರನಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ತೆರಳಿದ್ದ ಸಮಯದಲ್ಲಿ, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಹಿಂದೂ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಈ ಪ್ರಕರಣ ಕುರಿತು ಸಂಪೂರ್ಣ ಮಾಹಿತಿ ತನಿಖೆ ನಂತರವಷ್ಟೇ ಹೊರಬೀಳಬೇಕಿದೆ.
ಈ ನಡುವೆ ಹಿಂದೂ ಯುವಕನ ಹತ್ಯೆ ಖಂಡಿಸಿ ಬಲಪಂಥೀಯ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ಕಳೆದ ಹಲವು ವಾರಗಳಿಂದ ಕರೌಲಿ, ಅಲ್ವಾರ್ ಮತ್ತು ಜೋಧಪುರದಲ್ಲಿ ಕೋಮು ಸಂಘರ್ಷಗಳ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ರಾಜ್ಯಾದ್ಯಾಂತ ತೀವ್ರ ನಿಗಾ ವಹಿಸಿದ್ದಾರೆ.
"ಭಿಲ್ವಾರ ನಗರದಾದ್ಯಂತ ಮಂಗಳವಾರ ರಾತ್ರಿಯಿಂದಲೇ ಪೊಲೀಸರು ತಮ್ಮ ಗಸ್ತು ಹೆಚ್ಚಿಸಿದ್ದಾರೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನಿಸಿ ಮುಂಜಾಗ್ರತಾ ಕ್ರಮವಾಗಿ ಅಂತರ್ಜಾಲವನ್ನು ಸ್ಥಗಿತಗೊಳಿಸಲಾಗಿದೆ. ಘಟನೆಯು ಕೋಮು ಸಂಘರ್ಷಕ್ಕೆ ತಿರುಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಎರಡೂ ಸಮುದಾಯದ ನಾಯಕರು ಮತ್ತು ಮುಖಂಡರೊಂದಿಗೆ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸಲಾಗುತ್ತಿದೆ. ಪ್ರದೇಶದಲ್ಲಿಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ,'' ಎಂದು ಭಿಲ್ವಾರ ಜಿಲ್ಲಾಧಿಕಾರಿ ಆಶಿಶ್ ಮೋದಿ ತಿಳಿಸಿದ್ದಾರೆ.