ಒಂದು ಕೇಜಿ ಚಿನ್ನವನ್ನು ಗುದನಾಳದಲ್ಲಿ ಸಾಗಿಸುತ್ತಿದ್ದವನ ಬಂಧನ
ಜೈಪುರ್, ಡಿಸೆಂಬರ್ 26: ಚಿನ್ನ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಮೂವತ್ತು ವರ್ಷದ ವ್ಯಕ್ತಿಯನ್ನು ಜೈಪುರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪಂಕಜ್ ಸಾದುವಾನಿ ಬಂಧಿತ. ಆತನ ವಿಚಿತ್ರ ನಡವಳಿಕೆಯಿಂದ ಗುಮಾನಿಗೊಂಡು, ವಶಕ್ಕೆ ಪಡೆದ ಮೇಲೆ ಪ್ರಕರಣ ಬಯಲಿಗೆ ಬಂದಿದೆ.
ಆತ ಥಾಯ್ ಏರ್ ವೇಸ್ ನಲ್ಲಿ ಬಂದಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಒಂದು ಕೇಜಿ ತೂಕದ ಚಿನ್ನವನ್ನು ಗುದನಾಳದಲ್ಲಿ ಸಾಗಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆತನನ್ನು ಬಂಧಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಈ ಗುಂಪು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಕೂಡ ಅಧಿಕಾರಿಗಳು ತಿಳಿಸಿದ್ದಾರೆ. ಯಾರಿಗೆ ಮಾಲನ್ನು ತಲುಪಿಸಬೇಕೋ ಆ ವ್ಯಕ್ತಿಯ ಭಾವಚಿತ್ರವನ್ನು ಕಳ್ಳಸಾಗಣೆಗೆ ಬಳಸುವ ವ್ಯಕ್ತಿಗೆ ನೀಡಲಾಗುತ್ತದೆ. ವಿಮಾನ ನಿಲ್ದಾಣದ ಹೊರಗೆ ನಿಂತು, ಕಳ್ಳಸಾಗಣೆ ಮಾಡಿದ ವ್ಯಕ್ತಿಯಿಂದ ಆ ಮಾಲನ್ನು ಪಡೆಯಲಾಗುತ್ತದೆ.

ಈಗ ವಶಕ್ಕೆ ಪಡೆದಿರುವ ವ್ಯಕ್ತಿ ಅಂಥ ತಂಡದ ಪರ ಕೆಲಸ ಮಾಡುವವನು. ಚಿನ್ನವನ್ನು ಮತ್ತೊಬ್ಬನಿಗೆ ನೀಡುವ ಮೊದಲೇ ಸಿಕ್ಕಿಬಿದ್ದಿದ್ದಾನೆ. ಇದೀಗ ತನಿಖೆ ಇನ್ನಷ್ಟು ಚುರುಕಾಗಿ ನಡೆಯುತ್ತಿದೆ.












Click it and Unblock the Notifications