ರಾಜಸ್ತಾನ ಜನತೆಗೆ ಭರಪೂರ ಭರವಸೆ ನೀಡಿದ ಭಾಜಪ, ಎಂಥ ಆಶ್ವಾಸನೆಗಳು!
ರಾಜಸ್ತಾನ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಗೌರವ ಸಂಕಲ್ಪ್ ಪತ್ರದಲ್ಲಿ ಭಾರೀ ಭರವಸೆಗಳನ್ನು ಬಿಜೆಪಿ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಮೂವತ್ತು ಸಾವಿರ ಸರಕಾರಿ ಉದ್ಯೋಗ, ಐದು ವರ್ಷಗಳಲ್ಲಿ ಐವತ್ತು ಲಕ್ಷ ಯುವ ಜನರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದೆ. ಜತೆಗೆ ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇಕಡಾ ಐವತ್ತರಷ್ಟು ಹೆಚ್ಚಳ ಹಾಗೂ ಇನ್ನು ನಾಲ್ಕು ವರ್ಷದಲ್ಲಿ ಕೃಷಿ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದೆ.
ಈ ಹಿಂದೆ ನೀಡಿದ್ದ 655 ಭರವಸೆಗಳಲ್ಲಿ 630ರಷ್ಟನ್ನು ಬಿಜೆಪಿ ಸರಕಾರ ಪೂರೈಸಿದೆ ಎಂದು ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿಕೊಂಡಿದ್ದಾರೆ. ಬಾಕಿ ಇರುವ ಭರವಸೆಗಳು ಪೂರ್ಣಾಗೊಳ್ಳುತ್ತಿವೆ ಅಥವಾ ಮುಕ್ತಾಯದ ಹಂತದಲ್ಲಿವೆ ಎಂದಿದ್ದಾರೆ. ಈ ವರೆಗೆ ಶೇ 81ರಷ್ಟು ಭರವಸೆಗಳನ್ನು ತಮ್ಮ ಸರಕಾರ ಪೂರ್ಣ ಮಾಡಿದೆ ಎಂದು ರಾಜೇ ಹೇಳಿದ್ದಾರೆ.
ಇನ್ನು ಒಂದು ಲಕ್ಷ ಕೋಟಿ ರುಪಾಯಿ ತನಕ ಸಹಕಾರ ಸಾಲ ನೀಡುವುದಾಗಿ ಭರವಸೆ ನೀಡಿದ್ದಾರೆ. ರಾಜಸ್ತಾನದ ಪ್ರತಿ ಜಿಲ್ಲೆಯಲ್ಲೂ ರಿನ್ ರಹತ್ ಕೇಂದ್ರ ಸ್ಥಾಪಿಸುವ ಯೋಜನೆ ಇದೆ. ಇನ್ನು 21 ವರ್ಷ ಮೇಲ್ಪಟ್ಟ ನಿರುದ್ಯೋಗಿ ಯುವಕರಿಗೆ ತಲಾ 5 ಸಾವಿರ ರುಪಾಯಿ ಭತ್ಯೆ ನೀಡುವ ಬಗ್ಗೆ ಕೂಡ ಬಿಜೆಪಿ ಹೇಳಿದೆ.

ವಿಶೇಷ ಸ್ಥಾನಮಾನ ನೀಡುವುದು ಸಾಂವಿಧಾನಿಕ ವಿಚಾರ
ರಾಜಸ್ತಾನಕ್ಕೆ ವಿಶೇಷ ಸ್ಥಾನಮಾನ ದೊರಕಿಸಲು ಶ್ರಮ ಹಾಕುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಅರುಣ್ ಜೇಟ್ಲಿ ಮಾತನಾಡಿ, ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದು ಸಾಂವಿಧಾನಿಕ ವಿಚಾರ. ಅದನ್ನು ಜೈಪುರ್ ನಲ್ಲಿ ನಿಂತು ನಿರ್ಧರಿಸುವುದಕ್ಕೆ ಆಗಲ್ಲ ಎಂದಿದ್ದಾರೆ.

ರಾಜಸ್ತಾನದ ಗ್ರಾಮೀಣ ಭಾಗದ ಸ್ಟಾರ್ಟ್ ಅಪ್ ಭರವಸೆ
ಈ ಯೋಜನೆ ಬಗ್ಗೆ ಜೇಟ್ಲಿ ಎಲ್ಲ ಮಾಹಿತಿ ನೀಡಿದ್ದು, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಎಲ್ಲ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ರಾಜಸ್ತಾನದಲ್ಲಿ ಗ್ರಾಮೀಣ ಸ್ಟಾರ್ಟ್ ಅಪ್ ಗಳನ್ನು ಅನುದಾನ ಮೀಸಲಿಡುವ ಬಗ್ಗೆ ಬಿಜೆಪಿ ಮಾತನಾಡಿದೆ. ಪೂರ್ವ ರಾಜಸ್ತಾನ ಕಾಲುವೆ ಯೋಜನೆಯನ್ನು ನೀರಾವರಿಗಾಗಿ ಮಾತ್ರವಲ್ಲ, ಕುಡಿಯುವ ನೀರಿನ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಹೆಚ್ಚುವರಿಯಾಗಿ ಎರಡು ಲಕ್ಷ ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯ ಪಡೆಯುತ್ತದೆ.

ಸೇನಾ ನೇಮಕಾತಿ ಕ್ಯಾಂಪ್ ಗೆ ಮುನ್ನವೇ ತರಬೇತಿ
ಸೇನೆಗೆ ನೇಮಕಾತಿ ಕ್ಯಾಂಪ್ ನಡೆಯುವ ಮೂರು ತಿಂಗಳು ಮುಂಚಿತವಾಗಿಯೇ ರಾಜ್ಯ ಸರಕಾರದಿಂದ ತರಬೇತಿ ಆರಂಭಿಸಲಾಗುವುದು. ಅರೇಬಿಯನ್ ಸಮುದ್ರದ ನೀರನ್ನು ಸಂಚೋರ್ ಹಾಗೂ ಜಲೋರ್ ಜಿಲ್ಲೆಗಳಿಗೆ ತಂದು, ಒಳನಾಡು ಬಂದರು ಮಾಡಲಾಗುವುದು ಎಂದು ಭರವಸೆ ನೀಡಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ 108 ಆಂಬ್ಯುಲೆನ್ಸ್
ರಾಜಸ್ತಾನದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 108 ಆಂಬ್ಯುಲೆನ್ಸ್ ಹಾಗೂ ಯೂನಿವರ್ಸಲ್ ಹೆಲ್ತ್ ದೊರೆಯುವಂತೆ ಮಾಡಲಾಗುವುದು ಹಾಗೂ ರಾಜ್ಯದ ಸಂತೋಷದ ಸೂಚ್ಯಂಕವನ್ನು ಸಿದ್ಧಪಡಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ. ಒಟ್ಟಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಭರವಸೆಗಳನ್ನು ನೀಡಿದೆ.












Click it and Unblock the Notifications