ರಾಜ್ಯಪಾಲರ ಭೇಟಿ ನಂತರ ಸಿಎಂ ಅಶೋಕ್ ಖಡಕ್ ಎಚ್ಚರಿಕೆ!
ಜೈಪುರ, ಜುಲೈ 14: ಮಧ್ಯಪ್ರದೇಶದಲ್ಲಿ ಬಿಜೆಪಿ ನಡೆಸಿದ ಆಟ, ರಾಜಸ್ಥಾನದಲ್ಲಿ ರಿಪೀಟ್ ಮಾಡಲು ನೋಡುತ್ತಿದೆ. ಆದರೆ, ರೆಸಾರ್ಟ್ ರಾಜಕೀಯ ಇಲ್ಲಿ ನಡೆಯಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಚ್ಚರಿಕೆ ನೀಡಿದ್ದಾರೆ.
ಸಚಿನ್ ಪೈಲಟ್ ಅವರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರ ಕೈಲಿ ಏನಿಲ್ಲ, ಬಿಜೆಪಿ ಇಡೀ ಶೋ ನಡೆಸುತ್ತಿದೆ. ಶಾಸಕರಿಗೆ ರೆಸಾರ್ಟ್ ಬುಕ್ ಮಾಡಿಸಿಕೊಂಡು ಕಾಯುತ್ತಿದೆ. ರಾಜಸ್ಥಾನದಲ್ಲಿ ಬಿಜೆಪಿ ಆಟ ಸಾಧ್ಯವಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದರು.
ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್ ಅಮಾನತು
#WATCH Rajasthan: CM Ashok Gehlot meets Governor Kalraj Mishra, at Raj Bhawan in Jaipur. pic.twitter.com/6K2jnLPrj5
— ANI (@ANI) July 14, 2020
ರಾಜ್ಯಪಾಲ ಕಲ್ ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿದ ಅಶೋಕ್ ಗೆಹ್ಲೋಟ್ ಅವರು ಡಿಸಿಎಂ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ತೆಗೆದು ಹಾಕಲಾಗಿದೆ. ಸಚಿವರಾದ ವಿಶ್ವೇಂದರ್ ಸಿಂಗ್ ಹಾಗೂ ರಮೇಶ್ ಮೀನಾ ಅವರನ್ನು ಸಚಿವ ಸ್ಥಾನ ಕೆಳಗಿಳಿಸಲಾಗಿದೆ ಎಂದು ಅಧಿಕೃತವಾಗಿ ರಾಜ್ಯಪಾಲರಿಗೆ ತಿಳಿಸಿದ್ದಾರೆ.
ಈ ನಡುವೆ ಅಶೋಕ್ ಅವರ ಎಚ್ಚರಿಕೆಯ ಮಾತುಗಳಿಗೆ ರಾಜಸ್ಥಾನ ಬಿಜೆಪಿ ಪ್ರತಿಕ್ರಿಯಿಸಿದೆ."ಕಾಂಗ್ರೆಸ್ ಸರ್ಕಾರದ ಆಡಳಿತ ಕಂಡು ಜನತೆ ಬೇಸತ್ತಿದ್ದಾರೆ, ಕೋಪಗೊಂಡಿದ್ದಾರೆ, ಜಗತ್ತಿನ ಯಾವ ಶಕ್ತಿಯೂ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಸಾಧ್ಯವಿಲ್ಲ, ಜನತೆ ಬಯಸಿದಂತೆ ಎಲ್ಲವೂ ನಡೆಯಲಿದೆ. ನಾವು ಪರಿಸ್ಥಿತಿಗೆ ತಕ್ಕಂತೆ ನಮ್ಮ ತಂತ್ರಗಾರಿಕೆ ಪ್ರಯೋಗಿಸುತ್ತೇವೆ, ಜನತೆ ಬೇಡಿಕೆಗೆ ತಕ್ಕ ಸರ್ಕಾರ ಅಧಿಕಾರದಲ್ಲಿರಬೇಕಾದ್ದು ಅಗತ್ಯ'' ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಕೈ ಪಕ್ಷಕ್ಕೆ ಬೇಡವಾದ ಸಚಿನ್ ಗೆ ಕಮಲ ಪಕ್ಷದಿಂದ ಮುಕ್ತ ಆಹ್ವಾನ!
ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಸಭೆಗೆ ಸತತವಾಗಿ ಸಚಿನ್ ಪೈಲಟ್ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿಸಚಿನ್ ಪೈಲಟ್ ಸೇರಿ ಮೂವರನ್ನು ಅಶೋಕ್ ಗೆಹ್ಲೋಟ್ ಸಚಿವ ಸಂಪುಟದಿಂದ ಹೊರ ಹಾಕಲಾಗಿದೆ. ಗೋವಿಂದ್ ಸಿಂಗ್ ದೊತಾಸ್ರಾ ಅವರನ್ನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.