ವಿಶ್ವಜಲ ದಿನ 2021: ನೀರಿನ ಕುರಿತ ಪ್ರಮುಖ ಸಂಗತಿಗಳು
ಬೆಂಗಳೂರು, ಮಾರ್ಚ್ 22: ಸೃಷ್ಟಿ ಮೂಲ ಪಂಚಭೂತಗಳು, ಪಂಚಭೂತಗಳಿಲ್ಲದೆ ಯಾವುದೇ ಜೀವಿ ಜೀವಿಸಲು ಸಾಧ್ಯವೇ ಇಲ್ಲ. ಅವುಗಳಲ್ಲಿ ನೀರು ಕೂಡ ಒಂದು.
ಆಕಾಶ, ಜಲ, ಭೂಮಿ, ಅಗ್ನಿ ಮತ್ತು ವಾಯು ಈ ಪಂಚಭೂತಗಳಿಂದಲೇ ಪ್ರಕೃತಿಯ ಸೃಷ್ಟಿಯಾಗಿದೆ. ನೀರು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪ್ರತಿ ಜೀವ ಸಂಕುಲಕ್ಕೂ ಸಂಜೀವಿನಿ. ಕ್ರಿಮಿಕೀಟಾದಿ, ಗಿಡ-ಮರಗಳಿಗೂ ನೀರು ಅಗತ್ಯವಿದೆ.
ಜಲದಿಂದ ಮನುಜ ಕುಲ, ಜಲವೇ ಜೀವ ಸಂಕುಲ
ಸಮೀಪಿಸುತ್ತಿರುವ ಬೇಸಿಗೆ, ಕೊರೊನಾವೈರಸ್ ಸೋಂಕು ನೀರಿನ ಲಭ್ಯತೆ ಎಷ್ಟು ನಿರ್ಣಾಯಕ ಎಂಬುದರ ಕುರಿತು ಜಗತ್ತಿಗೆ ಎಚ್ಚರಿಕೆ ನೀಡಿದೆ.ಈಜಿಫ್ಟ್ ಸಿಂಧೂ, ಹರಪ್ಪ, ಮಹೆಂಜೊದಾರೊನಂತಹ ನಾಗರೀಕತೆಗಳು ಹುಟ್ಟಿದ್ದು ನದಿಯ ಪಾತ್ರಗಳಲ್ಲೇ. ನೀರಿನ ಮೂಲಗಳಿಲ್ಲದಿದ್ದರೆ ನಾಗರಿಕತೆಗಳೇ ಇಲ್ಲ.
ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಅವರಿಸಿದ್ದರೂ ಇಡೀ ಜಗತ್ತಿನಾದ್ಯಂತ ನೀರಿನ ಸಮಸ್ಯೆ ಎದುರಿಸುತಿದ್ದೇವೆ. ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ಅರಿಯದಿದ್ದರೆ ಭವಿಷ್ಯದಲ್ಲಿ ಇಡೀ ಬದುಕೇ ನಾಶವಾಗುವ ಸ್ಥಿತಿ ಎದುರಾಗಬಹುದು.
ಜೀವ ದ್ರವವೆನಿಸಿರುವ ನೀರನ್ನು ಮಾನವ ಪ್ರಜ್ಞಾ ಪೂರ್ವಕವಾಗಿಯೇ ಕಲುಷಿತಗೊಳಿಸುತ್ತಿರುವುದಲ್ಲದೆ, ಅದರ ಬಳಕೆ ಹಾಗೂ ಸಂರಕ್ಷಣೆಗೆ ಸೂಕ್ತ ವಿವೇಚನೆ ಇಲ್ಲದೆ ಭವಿಷ್ಯದ ನಾಗರಿಕರನ್ನು ಆತಂಕದ ವಿಷ ವರ್ತುಲಕ್ಕೆ ಸಿಲುಕಿಸುತ್ತಿದ್ದಾನೆ.
ಜಗತ್ತಿನಾದ್ಯಂತ ನೀರಿನ ಸಮಸ್ಯೆ ಉದ್ಭವವಾಗಲು ಮುಖ್ಯ ಕಾರಣ ಮನುಷ್ಯನ ಅತಿಯಾದ ದುರಾಸೆ, ತೀವ್ರಗತಿಯ ಅರಣ್ಯ ನಾಶ, ಮಿತಿಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ ಮತ್ತು ನಾವು ಪರಿಸರದ ಮೇಲೆ ತೋರುತ್ತಿರುವ ಕೌರ್ಯ. ಇದರಿಂದ ಕ್ಷಣ ಕ್ಷಣಕ್ಕೂ ಹಸಿರು ಮನೆಯ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತಿದೆ.
ವಿಶ್ವ ಜಲದಿನ 2021 ಥೀಮ್: ಈ ವರ್ಷ ವಿಶ್ವ ಜಲ ದಿನಾಚರಣೆಯ ವಿಷಯವೇನೆಂದರೆ, ವಿಶ್ವಸಂಸ್ಥೆಯ ಪ್ರಕಾರ ಜನರಿಗೆ ನೀರು ಎಂದರೇನು, ಇದರ ಮೌಲ್ಯ ಹಾಗೂ ಪ್ರಮುಖ ಸಂಪನ್ಮೂಲಗಳನ್ನು ರಕ್ಷಿಸುವುದು ಹೇಗೆ ಎಂಬುದರ ಕುರಿತು ತಿಳಿವಳಿಕೆ ನೀಡುವುದಾಗಿದೆ.
- ಇಂದು 3 ರಲ್ಲಿ ಓರ್ವ ಶುದ್ಧ ಕುಡಿಯುವ ನೀರಿಲ್ಲದೆ ಬದುಕುತ್ತಿದ್ದಾರೆ.
- 2050ರಷ್ಟೊತ್ತಿಗೆ, ವರ್ಷಕ್ಕೆ ಕನಿಷ್ಠ ಒಂದು ತಿಂಗಳಾದರೂ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ 5.7 ಶತಕೋಟಿ ಜನರು ವಾಸಿಸುತ್ತಾರೆ.
- ಸ್ವಚ್ಛತೆ, ಶುದ್ಧ ನೀರು, ಶುದ್ಧ ಹವಾಮಾನವಿದ್ದರೆ ಪ್ರತಿ ವರ್ಷ 360,000 ಶಿಶುಗಳನ್ನು ಉಳಿಸಿಕೊಳ್ಳಬಹುದು.
- 2040ರಷ್ಟೊತ್ತಿಗೆ ಜಾಗತಿಕ ಇಂಧನ ಬೇಡಿಕೆಯು ಶೇ.25ಕ್ಕಿಂತ ಹೆಚ್ಚಾಗಲಿದೆ. ಮತ್ತು ನೀರಿನ ಬೇಡಿಕೆ ಶೇ.50ಕ್ಕಿಂತ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
- 2030ರವೇಳೆಗೆ ಸುಸ್ಥಿರ ಅಭಿವೃದ್ಧಿ, ನೀರು ಮತ್ತು ನೈರ್ಮಲ್ಯ ಸಾಧಿಸುವ ಗುರಿ ಹೊಂದಲಾಗಿದೆ.
- ವಿಶ್ವದಲ್ಲಿ ಶೇ.50ರಷ್ಟು ಶಾಲೆಗಳಲ್ಲಿ ಕೈತೊಳೆಯಲು ಸೋಪು ಹಾಗೂ ನೀರಿನ ಸೌಲಭ್ಯಗಳಿಲ್ಲ.
- ಸ್ವಚ್ಛತೆ ಇರದಿರುವುದು ಹಾಗೂ ಅಸುರಕ್ಷಿತ ಕುಡಿಯುವ ನೀರಿನಿಂದಾಗಿ ಮಕ್ಕಳು ಅತಿಸಾರ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ.